ಲಕ್ಷ ಲಕ್ಷ ಜನರ ಮಧ್ಯೆ ಶ್ರೀದೇವಿಗೆ ಬೋನಿ ಕಪೂರ್ ರಿಂದ ಅಂತ್ಯ ಸಂಸ್ಕಾರ
ಮುಂಬೈ, ಫೆಬ್ರವರಿ 28: ಬಹುಭಾಷಾ ನಟಿ ಶ್ರೀದೇವಿ ಅವರ ಅಂತ್ಯ ಸಂಸ್ಕಾರವನ್ನು ಸರಕಾರಿ ಗೌರವದೊಂದಿಗೆ ಬುಧವಾರ ಸಂಜೆ ನೆರವೇರಿಸಲಾಯಿತು. ರಾಷ್ಟ್ರಧ್ವಜದಲ್ಲಿ ಆಕೆ ದೇಹವನ್ನು ಸುತ್ತಲಾಗಿತ್ತು.
ಅಂತ್ಯ ಸಂಸ್ಕಾರಕ್ಕೆ ಮುಂಚೆ ಮಹಾರಾಷ್ಟ್ರ ಪೊಲೀಸರು ಗೌರವ ಸಲ್ಲಿಸಿದರು. ಇತ್ತೀಚಿಗೆ ಮುಂಬೈನಲ್ಲಿ ರಾಜಕೀಯೇತರ ವ್ಯಕ್ತಿಗಳ ಯಾವ ಶವ ಮೆರವಣಿಗೆಯಲ್ಲೂ ಈ ಸಂಖ್ಯೆಯ ಜನರು ಸೇರಿರಲಿಲ್ಲ.
ಈ ಹಿಂದೆ ಮೊಹಮದ್ ರಫಿ ಅವರ ಅಂತಿಮ ಯಾತ್ರೆಯಲ್ಲಿ ಹತ್ತು ಲಕ್ಷ ಮಂದಿ ಸೇರಿದ್ದರೆ, ರಾಜೇಶ್ ಖನ್ನಾರ ಮೆರವಣಿಗೆಯಲ್ಲಿ ಹತ್ತು ಲಕ್ಷಕ್ಕಿಂತ ಸ್ವಲ್ಪ ಕಡಿಮೆ ಜನ ಇದ್ದರು. ಈ ಇಬ್ಬರನ್ನು ಹೊರತು ಪಡಿಸಿದರೆ ರಾಜ್ ಕಪೂರ್ ಹಾಗೂ ವಿನೋದ್ ಖನ್ನಾರ ಅಂತಿಮ ಯಾತ್ರೆ ವೇಳೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.

ಇನ್ನು ನಟಿ ಶ್ರೀದೇವಿಯವರ ಅಂತಿಮ ಯಾತ್ರೆಯಲ್ಲಿ ಕುಟುಂಬದ ಹಲವು ಸದಸ್ಯರು, ಸ್ನೇಹಿತರು, ಹತ್ತಿರದ ಸಂಬಂಧಿಗಳು, ನೆರೆಹೊರೆಯವರು ಮುಂಚೂಣಿಯಲ್ಲಿ ಸಾಗಿದರು. ಮುಂಬೈನ ವಿಲೆ ಪಾರ್ಲೆ ಶವಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಶ್ರೀದೇವಿಯವರ ಪತಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

ಅವರ ಪಕ್ಕದಲ್ಲಿ ಮಕ್ಕಳಾದ ಜಾಹ್ನವಿ ಹಾಗೂ ಖುಷಿ ಇದ್ದರು. ಹೂವಿನಿಂದ ಪೂರ್ತಿಯಾಗಿ ಮುಚ್ಚಿದ್ದ ವಾಹನದಲ್ಲಿ ಶ್ರೀದೇವಿಯವರ ಪಾರ್ಥಿವ ಶರೀರವನ್ನು ಶವಾಗಾರಕ್ಕೆ ತರಲಾಯಿತು.












Click it and Unblock the Notifications