20 ಕೋಟಿಗಿಂತ ಅಧಿಕ ತೆರಿಗೆ ವಂಚನೆ ಮಾಡಿದ ಸೋನುಸೂದ್: ಐಟಿ ಇಲಾಖೆ
ನವದೆಹಲಿ, ಸೆಪ್ಟೆಂಬರ್ 18: "ನಟ ಸೋನು ಸೂದ್ ಸುಮಾರು 20 ಕೋಟಿಗಿಂತ ಅಧಿಕ ತೆರಿಗೆ ವಂಚನೆ ಮಾಡಿದ್ದಾರೆ," ಎಂದು ಆದಾಯ ತೆರಿಗೆ ಇಲಾಖೆಯು ಶನಿವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ಮೂರು ದಿನಗಳಿಂದ ನಟ ಸೋನು ಸೂದ್ರ ಮುಂಬೈ ನಿವಾಸಕ್ಕೆ ದಾಳಿ ನಡೆಸಿ, ಇದನ್ನು ಸಮೀಕ್ಷೆ ಎಂದು ಹೇಳಿಕೊಂಡಿರುವ ಐಟಿ ಇಲಾಖೆಯು ಈಗ ನಟ ಸೋನು ಸೂದ್ 20 ಕೋಟಿಗಿಂತ ಅಧಿಕ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಹೇಳಿಕೊಂಡಿದೆ.
48 ವರ್ಷದ ಸೋನು ಸೂದ್ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರ ಆಮ್ ಆದ್ಮಿ ಪಕ್ಷದ ಸರ್ಕಾರದ ಸಮಾಜ ಕಲ್ಯಾಣ ಕಾರ್ಯಗಳಲ್ಲಿ ಕೈ ಜೋಡಿಸುವುದಾಗಿ ಇತ್ತೀಚೆಗೆ ಹೇಳಿದ್ದರು. ಹಾಗೆಯೇ ಸೋನುಸೂದ್ ದೆಹಲಿ ಸರ್ಕಾರದ ಕಾರ್ಯಕ್ರಮವೊಂದರ ರಾಯಭಾರಿಯಾಗಿಯೂ ಆಗಿದ್ದಾರೆ. ಈ ಬೆನ್ನಲ್ಲೇ ಐಟಿ ದಾಳಿ ನಡೆದಿರುವುದು ಶಿವಸೇನೆ ಹಾಗೂ ಆಮ್ ಆದ್ಮಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದೆ.
ಇನ್ನು "ಸುಮಾರು 20 ಕೋಟಿಗಿಂತ ಅಧಿಕ ತೆರಿಗೆ ವಂಚನೆಯನ್ನು ನಟ ಸೋನು ಸೂದ್ ಮಾಡಿದ್ದಾರೆ," ಎಂದು ಹೇಳಿರುವ ಐಟಿ ಇಲಾಖೆಯು ಇದೇ ಸಂದರ್ಭದಲ್ಲಿ "ಸೋನು ಸೂದ್ರ ಲಾಭರಹಿತ ಸಂಸ್ಥೆಯು ಕ್ರೌಡ್ಫಂಡಿಂಗ್ ಪ್ಲಾಟ್ಫಾರ್ಮ್ ಅನ್ನು ಬಳಸಿಕೊಂಡು ವಿದೇಶಿ ಕೊಡುಗೆದಾರರಿಂದ 2.1 ಕೋಟಿ ಹಣವನ್ನು ಸಂಗ್ರಹಿಸಿದೆ. ಇದು ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯ ಉಲ್ಲಂಘನೆ ಆಗಿದೆ," ಎಂದು ಕೂಡಾ ಆದಾಯ ತೆರಿಗೆ ಇಲಾಖೆ ಆರೋಪ ಮಾಡಿದೆ.

"ನಟನ ನಿವಾಸ ಹಾಗೂ ಇನ್ನಿತರ ಸಂಸ್ಥೆಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ನಟ ಸೋನು ಸೂದ್ ತೆರಿಗೆ ವಂಚನೆ ಮಾಡಿರುವ ಬಗ್ಗೆ ತಿಳಿದು ಬಂದಿದೆ. ಇನ್ನು ನಟನು ತನ್ನ ಲೆಕ್ಕವಿಲ್ಲದ ಆದಾಯವನ್ನು ಅನೇಕ ನಕಲಿ ಸಂಸ್ಥೆಗಳಿಂದ ನಕಲಿ ಅಸುರಕ್ಷಿತ ಸಾಲದ ರೂಪದಲ್ಲಿ ಸಾಗಾಟ ಮಾಡಿಕೊಂಡಿದ್ದಾರೆ. ನಾವು ನಡೆಸಿದ ತನಿಖೆಯಲ್ಲಿ ಈವರೆಗೆ ಇಂತಹ ಸುಮಾರು 20 ಪ್ರಕರಣಗಳು ಪತ್ತೆಯಾಗಿದೆ. ಹಾಗೆಯೇ ಇದಕ್ಕೆ ಸಂಬಂಧಪಟ್ಟವರು ನಕಲಿ ಸಂಸ್ಥೆಯ ಮೂಲಕ ಬೋಗಸ್ ಮಾಡಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ನಗದು ಬದಲಾಗಿ ಚೆಕ್ಗಳನ್ನು ನೀಡಲು ಅವರು ಒಪ್ಪಿಕೊಂಡಿದ್ದಾರೆ," ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
"ಇನ್ನು ನಟನು ತೆರಿಗೆ ವಂಚನೆಯ ಉದ್ದೇಶದಿಂದಾಗಿ ಬ್ಯಾಂಕು ಖಾತೆಯ ಪುಸ್ತಕಗಳಲ್ಲಿ ವೃತ್ತಿಪರ ರಸೀದಿಗಳನ್ನು ಸಾಲಗಳೆಂದು ಮರೆಮಾಚಿದ ಉದಾಹರಣೆಗಳು ಕೂಡಾ ಇದೆ. ಹೂಡಿಕೆಯನ್ನು ಮಾಡಲು ಹಾಗೈ ಆಸ್ತಿಗಳನ್ನು ಸ್ವಾಧೀನಕ್ಕೆ ಪಡೆಯಲು ನಕಲಿ ಸಾಲಗಳನ್ನು ಬಳಸಲಾಗಿದೆ ಎಂದು ಕೂಡಾ ಬಹಿರಂಗವಾಗಿದೆ. ಇಲ್ಲಿಯವರೆಗೆ 20 ಕೋಟಿಗಿಂತ ಅಧಿಕ ತೆರಿಗೆ ವಂಚನೆಯ ಬಗ್ಗೆ ಮಾಹಿತಿ ಲಭಿಸಿದೆ," ಎಂದು ಐಟಿ ಇಲಾಖೆ ತಿಳಿಸಿದೆ.
ಸೋನುಸೂದ್ ಲಾಕ್ಡೌನ್ ಸಂದರ್ಭದಲ್ಲಿ ಹಲವಾರು ವಲಸೆ ಕಾರ್ಮಿಕರು ತಮ್ಮ ಊರನ್ನು ಸೇರಲು ಸಹಾಯ ಮಾಡಿದ್ದರು. ಸೋನು ಸೂದ್ ಬಸ್, ರೈಲು ಹಾಗೂ ವಿಮಾನಗಳನ್ನು ಕೂಡಾ ವಲಸಿಗರಿಗೆ ವ್ಯವಸ್ಥೆ ಮಾಡಿದ್ದರು. ಹಾಗೆಯೇ ಈ ವರ್ಷ ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಸೋನು ಸೂದ್ ಆಕ್ಸಿಜನ್ ಕೊರತೆ ಉಂಟಾದಾಗ ಆಕ್ಸಿಜನ್ ವ್ಯವಸ್ಥೆಯನ್ನು ಕೂಡಾ ಮಾಡಿಸಿದ್ದರು. ಇದು ಭಾರೀ ಜನ ಮೆಚ್ಚುಗೆಗೆ ಕಾರಣವಾಗಿತ್ತು. ಬಿಜೆಪಿಯು ಕೂಡಾ ಸೋನು ಸೂದ್ರನ್ನು ಹಾಡಿ ಹೊಗಳಿತ್ತು. ಇನ್ನು ಸೋನು ಸೂದ್ರ ಲಾಭರಹಿತ ಸೂದ್ ಚಾರಿಟಿ ಫೌಂಡೇಶನ್, ಕಳೆದ ವರ್ಷ ಜೂನ್ನಲ್ಲಿ ಸ್ಥಾಪನೆ ಮಾಡಲಾಗಿದೆ. ಈ ಚಾರಿಟಿ ಫೌಂಡೇಶನ್ ಈ ವರ್ಷದ ಎಪ್ರಿಲ್ವರೆಗೆ ಸುಮಾರು 18 ಕೋಟಿ ದೇಣಿಗೆಯನ್ನು ಸಂಗ್ರಹ ಮಾಡಿದೆ. ಈ ಹಣದಲ್ಲಿ 1.9 ಕೋಟಿ ಹಣವನ್ನು ಕೋವಿಡ್ ಸಂದರ್ಭದಲ್ಲಿ ಹಾಗೂ ಇತರೆ ಸಂದರ್ಭದಲ್ಲಿ ಸಹಾಯಕ್ಕಾಗಿ ಬಳಸಲಾಗಿದೆ. ಉಳಿದ 17 ಕೋಟಿ ಇನ್ನೂ ಕೂಡಾ ಬಳಕೆಯಾಗದೆ ಬ್ಯಾಂಕ್ನಲ್ಲೇ ಇದೆ ಎಂದು ಹೇಳಲಾಗಿದೆ.
ಇನ್ನು ಇತ್ತೀಚೆಗೆ ಸೋನು ಸೂದ್ರ ಸಂಸ್ಥೆ ಹಾಗೂ ಲಕ್ನೋ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಗೆ ಡೀಲ್ ಒಂದರ ಹಿನ್ನೆಲೆ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ತಿಳಿಸಿರುವ ಆದಾಯ ಇಲಾಖೆಯು, "ಲಕ್ನೋದ ಸಂಸ್ಥೆಯಲ್ಲಿ ಏಕಕಾಲದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಗಳಲ್ಲಿ ನಟ ಜಂಟಿ ಸಹಭಾಗಿತ್ವದ ರಿಯಲ್ ಎಸ್ಟೇಟ್ ವ್ಯಾಪಾರಕ್ಕೆ ಮುಂದಾಗಿದ್ದಾರೆ ಹಾಗೂ ಗಣನೀಯ ಪ್ರಮಾಣದ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕಾರಣದಿಂದಾಗಿ ಬ್ಯಾಂಕ್ ಖಾತೆಯಲ್ಲಿ ಪುಸ್ತಕದಲ್ಲಿ ತೆರಿಗೆ ವಂಚನೆ ಮತ್ತು ಅಕ್ರಮಗಳಿಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಪತ್ತೆಹಚ್ಚಲಾಗಿದೆ," ಎಂದು ಹೇಳಿದೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications