30 ವರ್ಷದ ಹಿಂದೆ ಪಡೆದಿದ್ದ 200 ರೂ. ಸಾಲ ತಿರಿಸೋಕೆ ಭಾರತಕ್ಕೆ ಬಂದ ಕೀನ್ಯಾ ಸಂಸದ!
ಮುಂಬೈ, ಜುಲೈ 11: ಮೂವತ್ತು ವರ್ಷದ ಹಿಂದೆ ತೆಗೆದುಕೊಂಡಿದ್ದ ಇನ್ನೂರು ರೂಪಾಯಿಯನ್ನು ವಾಪಸ್ ನೀಡುವುದಕ್ಕೆ ವ್ಯಕ್ತಿಯೊಬ್ಬರು ಕೀನ್ಯಾದಿಂದ ಭಾರತಕ್ಕೆ ಬರೋದು ಅದ್ರೇನು? ಪ್ರಾಮಾಣಿಕತೆಯ ಪರಾಕಾಷ್ಠೆ ಎನ್ನಬೇಕೆ?
ತೀರಾ ವಿರಳ ಎಂಬಂಥ ಈ ಘಟನೆ ನಡೆದಿದ್ದು, ಮಹಾರಾಷ್ಟ್ರದ ಔರಂಗಾಬಾದಿನಲ್ಲಿ!
30 ವರ್ಷಗಳ ಹಿಂದೆ ವ್ಯಕ್ತಿಯೊಬ್ಬರಿಂದ ಪಡೆದಿದ್ದ 200 ರೂಪಾಯಿ ಸಾಲವನ್ನು ಮರುಪಾವತಿಸಲು ಕೀನ್ಯಾದ ರಿಚರ್ಡ್ ಟಾಂಗ್ ಐ ಎಂಬ ಸಂಸದ(ನ್ಯಾರಿಬರಿ ಚಾಚೆ ಕ್ಷೇತ್ರದ ಸಂಸದ)ರೊಬ್ಬರು ಭಾರತಕ್ಕೆ ಬಂದಿದ್ದರು. ತಮ್ಮ ಕುಟುಂಬ ಸಮೇತ ಬಂದು, ಔರಂಗಾಬಾದಿನ ಎಪ್ಪತ್ತು ವರ್ಷ ವಯಸ್ಸಿನ ಕಾಶಿನಾಥ್ ಗವಾಲಿ ಎಂಬುವವರ ಮನೆ ಬಾಗಿಲು ತಟ್ಟಿದಾಗ ಕಾಶಿನಾಥ್ ಅವರಿಗೆ ಗುರುತು ಹತ್ತುವುದಾದರೂ ಹೇಗೆ? ಅರವತ್ತಾಗಿ ದಶಕ ಕಳೆದಿರುವಾಗ ಮೂವತ್ತು ವರ್ಷದ ಹಿಂದಿನ ನೆನಪು ಎಲ್ಲಿಂದ ಬರಬೇಕು?

ಆದರೂ ರಿಚರ್ಡ್ ಪಟ್ಟು ಬಿಡದೆ ಹಳೇ ಘಟನೆಗಳನ್ನೆಲ್ಲ ನೆನಪಿಸಿ, ಕಾಶಿನಾಥ್ ಅವರಿಗೆ ಹಿಂದಿನ ಘಟಣೆಗಳನ್ನು ನೆನಪಿಸಿದರು. ಸಂಕಷ್ಟದಲ್ಲಿದ್ದ ಆಫ್ರಿಕನ್ ನಾಗರಿಕ ರಿಚರ್ಡ್ ಅವರಿಗೆ ಪ್ರತಿಫಲದ ಅಪೇಕ್ಷೆ ಇಲ್ಲದೆ ಕಾಶಿನಾಥ್ ಅವರು ಮಾಡಿದ್ದ ಸಹಾಯವನ್ನು ಮನಸಾರೆ ಕೊಂಡಾಡಿ ಆಗ ತೆಗೆದುಕೊಂಡಿದ್ದ ಸಾಲವನ್ನು ವಾಪಸ್ ನೀಡಿದ್ದಾರೆ. ಜೊತೆಗೆ ತಮ್ಮ ಕುಟುಂಬದೊಂದಿಗೆ ಕಾಶಿನಾಥ್ ಅವರ ಮನೆಯಲ್ಲಿ ಕೆಲಕಾಲ ಕಳೆದಿದ್ದಾರೆ.
ಮೂವತ್ತು ವರ್ಷದ ಹಿಂದಿನ 200 ರೂಪಾಯಿ ಎಂದರೆ ಕಡಿಮೆ ಮೌಲ್ಯದ್ದೇನಲ್ಲ ಎಂಬುದು ಬೇರೆ ಮಾತು. ಆದರೆ ಹಣದ ಮುಖ ನೋಡದೆ ವಿದೇಶಿಯನೊಬ್ಬನಿಗೆ ನೆರವು ನೀಡಿದ ಕಾಶಿನಾಥ್, ಅದನ್ನು ಇಂದಿನವರೆಗೂ ನೆನಪಿಟ್ಟುಕೊಂಡು ಮರುಪಾವತಿಸಲು ಅಷ್ಟು ದೂರದಿಂದ ಬಂದ ರಿಚರ್ಡ್ ರಂಥವರು ಮಾನವೀಯತೆ, ಪ್ರಾಮಾಣಿಕತೆಯ ಅಸ್ತಿತ್ವವನ್ನು ಸಾಬೀತುಪಡಿಸಿದ್ದಾರೆ!












Click it and Unblock the Notifications