ಮುಂಬೈನಲ್ಲಿ ತಾಯಿಗೆ ಆಸರೆಯಾಗಲು 14ರ ಬಾಲಕನಿಂದ ಟೀ ಮಾರಾಟ
ಮುಂಬೈ, ಅಕ್ಟೋಬರ್.30: ಕೊರೊನಾವೈರಸ್ ಸೋಂಕು ಹರಡುವಿಕೆಯಿಂದ ಸಾಕಷ್ಟು ಜನರು ಪ್ರಾಣ ಬಿಟ್ಟಿದ್ದಾರೆ. ಭಾರತ ಲಾಕ್ ಡೌನ್ ಜಾರಿಗೊಳಿಸದ ಬಳಿಕ ಲಕ್ಷಾಂತರ ಜನರು ಬದುಕಿನ ದಾರಿ ಕಳೆದುಕೊಂಡಿದ್ದಾರೆ ಎನ್ನುವುದಕ್ಕೆ ಮುಂಬೈನ ಈ ಘಟನೆಯೇ ಜೀವಂತ ಸಾಕ್ಷಿ.
Recommended Video
ಬದುಕಿನ ದೋಣಿ ಸಾಗಿಸುವಲ್ಲಿ ತಾಯಿಗೆ ನೆರವಾಗಿ ನಿಂತಿರುವ ಈ ಬಾಲಕನಿಗೆ ಈಗಷ್ಟೇ 14 ವರ್ಷ. ಭಾರತ ಲಾಕ್ ಡೌನ್ ನಿಂದಾಗಿ ಶಾಲೆಗಳು ಮುಚ್ಚಿಕೊಂಡಿವೆ. ಶಾಲಾ ಬಸ್ ಅಟೆಂಡೆಂಟ್ ಆಗಿರುವ ತಾಯಿ ಉದ್ಯೋಗ ಕಳೆದುಕೊಂಡಿದ್ದು, ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಅಂಥ ಸಂದರ್ಭದಲ್ಲಿ ಇಡೀ ಕುಟುಂಬಕ್ಕೆ ಆಧಾರಸ್ತಂಭವಾಗಿ ನಿಂತಿದ್ದೇ ಈ 14 ವರ್ಷದ ಬಾಲಕ ಸುಭಾನ್.
ಚುನಾವಣೆ ಅವರಿಗೆ, ಹಬ್ಬ ಇವರಿಗೆ: ಬಿಹಾರ ತೊರೆದು ಹೊರಟ ವಲಸಿಗರು!
12 ವರ್ಷಗಳ ಹಿಂದೆಯೇ ತಂದೆಯನ್ನು ಕಳೆದುಕೊಂಡ ಸುಭಾನ್ ಕುಟುಂಬಕ್ಕೆ ತಾಯಿಯ ಆದಾಯವೇ ಮೂಲವಾಗಿತ್ತು. ಆದರೆ ಭಾರತ ಲಾಕ್ ಡೌನ್ ನಿಂದಾಗಿ ತಾಯಿ ಉದ್ಯೋಗ ಕಳೆದುಕೊಂಡು ನಿರುದ್ಯೋಗಿ ಆಗಿದ್ದಾರೆ. ಈ ಹಿನ್ನೆಲೆ ಮುಂಬೈನ ಭೆಂದಿ ಬಜಾರ್ ನಲ್ಲಿ ಸುಭಾನ್, ಚಹಾ ಮಾರಾಟ ಮಾಡುವ ಮೂಲಕ ಕುಟುಂಬಕ್ಕೆ ನೆರವಾಗಿ ನಿಂತಿದ್ದಾನೆ.
14ರ ಬಾಲಕ ಸುಭಾನ್ ಹೇಳುವುದೇನು:
"ನಾನು 12 ವರ್ಷಗಳ ಹಿಂದೆಯೇ ನಮ್ಮ ತಂದೆಯನ್ನು ಕಳೆದುಕೊಂಡಿದ್ದೇನೆ. ಕೊವಿಡ್-19 ಸಾಂಕ್ರಾಮಿಕ ಪಿಡುಗಿನಿಂದಾಗಿ ಶಾಲಾ ಬಸ್ ಅಟೆಂಡೆಂಟ್ ಆಗಿರುವ ತಾಯಿ ಉದ್ಯೋಗ ಕಳೆದುಕೊಂಡಿದ್ದು, ಕುಟುಂಬಕ್ಕೆ ಆರ್ಥಿಕ ಸಂಕಷ್ಟವನ್ನು ತಂದೊಡ್ಡಿದೆ. ಹೀಗಾಗಿ ಕುಟುಂಬಕ್ಕೆ ನೆರವಾಗಲು ಭೆಂದಿ ಬಜಾರ್ ನಲ್ಲಿ ನಾನು ಒಂದು ಪುಟ್ಟ ಟೀ ಅಂಗಡಿಯನ್ನು ತೆರೆದಿದ್ದೇನೆ. ಪುಟ್ಟ ಅಂಗಡಿಯಲ್ಲೇ ಟೀ ತಯಾರಿಸಿಕೊಂಡು ನಾಗಾಪಾಡ್ ಮತ್ತು ಭೆಂದಿ ಬಜಾರ್ ನಲ್ಲಿ ಅಂಗಡಿ ಅಂಗಡಿಗಳಿಗೆ ತೆರಳಿ ಮಾರಾಟ ಮಾಡುತ್ತೇನೆ. ಪ್ರತಿನಿತ್ಯ 300 ರಿಂದ 400 ರೂಪಾಯಿ ಆದಾಯ ಗಳಿಸುತ್ತಿದ್ದು, ಇದರಿಂದ ನಮ್ಮ ಕುಟುಂಬಕ್ಕೆ ಕೊಂಚ ನೆರವಾಗುತ್ತಿದೆ" ಎನ್ನುವುದು 14ರ ಬಾಲ ಸುಭಾನ್ ಮಾತು.