ಮಂಗಳೂರಿನಲ್ಲಿ ಮತ ಹಾಕಲು ಬೆಂಗಳೂರಿನಿಂದ ಸೈಕಲ್ ಏರಿ ಬಂದ ಯುವಕ
ಮಂಗಳೂರು ಏಪ್ರಿಲ್ 19: "ಲೋಕಸಭಾ ಚುನಾವಣೆಯ ಮತದಾನಕ್ಕೆ ಬೆಂಗಳೂರಿಗರು ನಿರಾಸಕ್ತಿ ತೋರಿದ್ದಾರೆ. ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ ತಮ್ಮ ಕರ್ತವ್ಯ ಮರೆತಿದ್ದಾರೆ. ಇವರ ಪೌರುಷ , ಹೋರಾಟ , ಕೇವಲ ಸಾಮಾಜಿಕ ಜಾಲತಾಣಕ್ಕೆ ಮಾತ್ರ ಸೀಮಿತ" ಎಂಬ ಆರೋಪಗಳು ಕೇಳಿ ಬರುತ್ತಿವೆ.
ಮತದಾನ ಮಾಡಲು ಊರಿಗೆ ಮರಳುವುದಕ್ಕೆ ಪರವೂರಿನಲ್ಲಿರುವರು ನಿರಾಸಕ್ತಿ ತೋರಿಸುವುದೇ ಹೆಚ್ಚು. ಆದರೆ ಬೆಂಗಳೂರಿನಿಂದ ಮಂಗಳೂರಿಗೆ ಸೈಕಲ್ ಏರಿ ಬಂದು ಯುವಕನೊಬ್ಬ ಮತದಾನ ಮಾಡಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಮಂಗಳೂರಿನ ವಾಮಂಜೂರು ನಿವಾಸಿ ಅನಿಕೇತ್ ಜೆ. ಮತ ಚಲಾಯಿಸಲು ಬೆಂಗಳೂರಿನಿಂದ ಮಂಗಳೂರಿಗೆ ಸೈಕಲ್ ಮೂಲಕ ಆಗಮಿಸಿದ್ದರು. ಅನಿಕೇತ್ ಬೆಂಗಳೂರಿನಲ್ಲಿ ಆ್ಯಡ್ ಸಿಂಡಿಕೇಟ್ ಸಂಸ್ಥೆಯ ಉದ್ಯೋಗಿಯಾಗಿದ್ದಾರೆ.

ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ, ಮತದಾನದಂದು ರಜೆ ಇರುವ ಹಿನ್ನೆಲೆಯಲ್ಲಿ ಊರಿನಿಂದ ಹೋಗಿರುವ ಬಹುತೇಕ ಮಂದಿ ಮತದಾನಕ್ಕೆ ಊರಿಗೆ ಆಗಮಿಸದೆ, ಸ್ನೇಹಿತರೊಂದಿಗೆ, ಕುಟುಂಬ ಸದಸ್ಯರೊಂದಿಗೆ ಸೇರಿ ಜಾಲಿ ಮಾಡಲು ಪಿಕ್ನಿಕ್, ಟ್ರಕ್ಕಿಂಗ್ ಹಮ್ಮಿಕೊಳ್ಳುತ್ತಾರೆ. ಈ ಬಾರಿ ಸಾಲು ಸಾಲು ರಜೆ ಇರುವುದರಿಂದ ಮತದಾನದಿಂದ ತಪ್ಪಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ.
ಬೆಂಗಳೂರಿನಲ್ಲಂತೂ ಮತದಾನದ ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಆದರೆ ಮತದಾನದಿಂದ ತಪ್ಪಿಸಿಕೊಳ್ಳದೇ, ಸಮರ್ಥ ರಾಷ್ಟ್ರ ನಿರ್ಮಾಣಕ್ಕೆ ನಮ್ಮ ಒಂದೊಂದು ಮತವೂ ಅಮೂಲ್ಯ ಎಂದು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅನಿಕೇತ್ ಅವರು ಸೈಕಲ್ ಮೂಲಕ ಬಂದು ಮತದಾನ ಜಾಗೃತಿ ಮೂಡಿಸಿದರು.












Click it and Unblock the Notifications