ಕರಾವಳಿಯಲ್ಲಿ ಪ್ರವಾಹಕ್ಕೆ ಮಾನವನ ಹಸ್ತಕ್ಷೇಪ ಕಾರಣವೇ?
ಮಂಗಳೂರು, ಆಗಸ್ಟ್ 18: ಕರಾವಳಿ ಹಾಗು ಪಶ್ಚಿಮ ಘಟ್ಟ ಪ್ರದೇಶ ದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕರಾವಳಿ ಹಾಗು ಮಲೆನಾಡು ತತ್ತರಿಸಿದೆ. ಭಾರೀ ಭೂ ಕುಸಿತದಿಂದ ಕೊಡಗು ನಲುಗಿ ಹೋಗಿದೆ. ಪಶ್ಚಿಮ ಘಟ್ಟ ಹಾಗೂ ಕೊಡಗಿನಲ್ಲಿ ನೋಡು ನೋಡುತ್ತಿದ್ದಂತೆ ಬೆಟ್ಟಗಳು ಕುಸಿಯಿತ್ತಿವೆ.
ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಸುರಿಯುವ ಮಳೆಯ ನಡುವೆ ನಿರಂತರವಾಗಿ ಗುಡ್ಡ ಕುಸಿಯುತ್ತಿರುವುದಕ್ಕೆ ಕಾರಣವೇನು ಎನ್ನುವುದರ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿದೆ. ಗುಡ್ಡಗಳು ಕುಸಿಯುತ್ತಿರುವುದಕ್ಕೆ ಕಾರಣಗಳ ಹುಡುಕಾಟ ಆರಂಭವಾಗಿದೆ. ಒಮ್ಮಿಂದೊಮ್ಮೆಲೇ ರಸ್ತೆಬದಿಯಲ್ಲಿ ಗುಡ್ಡ ಕುಸಿದು ಬೀಳಲು ಅಲ್ಲಿ ನಡೆದಿರುವ ಅವೈಜ್ಞಾನಿಕ ಕಾಮಗಾರಿಗಳೇ ಕಾರಣ ಎಂಬ ವಾದ ಕೇಳಿ ಬರುತ್ತಿದೆ.
ಅವೈಜ್ಞಾನಿಕವಾಗಿ ಕಾಡುಗಳನ್ನು ಕಡಿದಿರುವುದು, ಎತ್ತಿನ ಹೊಳೆ ಯೋಜನೆಗೆ ಕಾಡು ಕಡಿದು ನೀರು ಹರಿಯದಂತೆ ತಡೆ ಗೋಡೆಗಳನ್ನು ನಿರ್ಮಿಸಿರುವುದು, ಕೇರಳದಲ್ಲಿ ಸಹ ಫಾರಂ ನಿರ್ಮಾಣ ಹೆಚ್ಚಾಗಿರುವುದು ಈ ರೀತಿ ಆಗಲು ಪ್ರಮುಖ ಕಾರಣ ಎನ್ನಲಾಗಿದೆ.

ಅವೈಜ್ಞಾನಿಕ ತಡೆಗೋಡೆಗಳ ನಿರ್ಮಾಣ
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹಾದು ಹೋಗುವ ಹೆದ್ದಾರಿ ಪಕ್ಕದ ಗುಡ್ಡಗಳ ಕುಸಿಯಲು ರಸ್ತೆ ನಿರ್ಮಾಣ ಸಂದರ್ಭದಲ್ಲಿ ಮಾಡಲಾದ ಅವೈಜ್ಞಾನಿಕ ತಡೆಗೋಡೆಗಳೇ ಕಾರಣ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಗಡ್ಡದ ಮೇಲೆ ಬಿದ್ದ ಮಳೆ ನೀರು ಮಣ್ಣಿನಲ್ಲಿ ಇಂಗಿ ನೈಸರ್ಗಿಕವಾಗಿ ವರೆತೆ ರೂಪದಲ್ಲಿ ಹರಿದು ಹೋಗಲು ದಾರಿ ಕೊಡದೇ ಇರುವುದರಿಂದ ನೀರು ತನ್ನೊಂದಿಗೆ ಮಣ್ಣನ್ನು ಜರಿಸುತ್ತಿದೆ.

ನೈಸರ್ಗಿಕ ವ್ಯವಸ್ಥೆಯಲ್ಲಿ ಮಾನವನ ಹಸ್ತಕ್ಷೇತ
ಶಿರಾಡಿ ಘಾಟ್ ಹೆದ್ದಾರಿ ಸೇರಿದಂತೆ ಬೆಳ್ತಂಗಡಿ ತಾಲೂಕಿನ ಬಹುತೇಕ ಕಡೆ ಘಟ್ಟದ ತಪ್ಪಲು ಭಾಗದಲ್ಲಿ ಒಂದೇ ಸಮನೆ ಗುಡ್ಡ ಕುಸಿಯತೊಡಗಿದೆ. ಈದಕ್ಕೆ ನೈಸರ್ಗಿಕ ವ್ಯವಸ್ಥೆಯಲ್ಲಿ ಮನುಷ್ಯ ಮಾಡಿರುವ ಹಸ್ತಕ್ಷೇಪವೇ ಕಾರಣ ಎಂದಿದ್ದಾರೆ ತಜ್ಞರು.

ಅರಣ್ಯನಾಶದಿಂದ ಬೆಟ್ಟ ಕುಸಿತ
ಇನ್ನು ನೋಡ ನೋಡುತ್ತಿದ್ದಂತಯೆ ಬೆಟ್ಟಗಳು ಕುಸಿಯಲು ಅರಣ್ಯನಾಶವೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಕಳೆದ ಎರಡು ವರ್ಷದಲ್ಲಿ ಶಿರಾಡಿ ಘಾಟ್ ಬಳಿಯ ಎತ್ತಿನಹೊಳೆ ಯೋಜನೆಗಾಗಿ ನೂರಾರು ಎಕರೆಗಟ್ಟಲೆ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿದು ಭೂಮಿ ಸಮತಟ್ಟು ಮಾಡಿದ್ದಲ್ಲದೆ, ನೇತ್ರಾವತಿಯ ಉಪನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಲಾಗಿದೆ.

ಅರಣ್ಯದಲ್ಲಿ ಮರ-ಗಿಡಗಳ ಕೊರತೆ
ಬೆಟ್ಟಗಳ ಶಿಖರ ಭಾಗದಲ್ಲಿರುವ ಈ ಪ್ರದೇಶದಲ್ಲಿ ಈಗ ಭಾರೀ ಮಳೆಯಾಗುತ್ತಿದ್ದು, ಸಹಜವಾಗಿ ಅರಣ್ಯದಲ್ಲಿ ಮರ ಗಿಡಗಳಿಲ್ಲದೆ ನೀರು ಇಂಗುತ್ತಿದ್ದು, ಬುಡದ ಭಾಗದಲ್ಲಿರುವ ಘಾಟ್ ರಸ್ತೆಯ ಭಾಗದಲ್ಲಿ ಒರತೆ ಹೆಚ್ಚುವಂತೆ ಮಾಡಿದೆ. ಇದೇ ನೀರು ಈಗ ಅಲ್ಲಲ್ಲಿ ಬೆಟ್ಟಗಳ ಎಡೆಯಿಂದ ಬಿರುಕು ಬಿಡುತ್ತಾ ಹೊರಬರುತ್ತಿದ್ದು ದುರಂತಕ್ಕೆ ಕಾರಣವಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಶಿರಾಡಿ ಘಾಟ್ನಲ್ಲಿ ಗುಡ್ಡ ಕುಸಿತ
ಮಂಗಳೂರು-ಬೆಂಗಳೂರು ಸಂಪರ್ಕದ ಶಿರಾಡಿ ಘಾಟ್ ರಸ್ತೆಯಲ್ಲಿ ಕಳೆದ ಹಲವು ದಿನಗಳಿಂದ ಗುಡ್ಡ ಕುಸಿಯುತ್ತಲೇ ಇದೆ. ಸಕಲೇಶಪುರ ಭಾಗದಿಂದ ಶಿರಾಡಿ ವರೆಗೂ ರಸ್ತೆ ಉದ್ದಕ್ಕೂ ಮಣ್ಣು ಕುಸಿಯುತ್ತಿದ್ದು ಭಾರವಾದ ವಾಹನಗಳು ಮಣ್ಣಿನಡಿಗೆ ಬೀಳುತ್ತಿದೆ. ಭಾರವಾದ ಟ್ಯಾಂಕರ್ ಲಾರಿ ಸಾಗುತ್ತಿದ್ದಂತೆ ಮೇಲ್ಭಾಗದಿಂದ ಗುಡ್ಡ ಕುಸಿದು ಬಿದ್ದಿದೆ. ಈ ಎಲ್ಲದರ ಬಗ್ಗೆ ಎತ್ತಿನಹೊಳೆ ಯೋಜನೆ ಆರಂಭಗೊಳ್ಳುವ ಮೊದಲೇ ತಜ್ಞರು ಎಚ್ಚರಿಕೆ ನೀಡಿದ್ದರು.

ಕೊಡಗಿನಲ್ಲಿ ಹೆಚ್ಚಾಗಿದೆ ಪ್ಲಾಂಟೇಶನ್
ಕೊಡಗಿನಲ್ಲೂ ಗುಡ್ಡ ಕುಸಿದು ಸಮತಟ್ಟಾಗುತ್ತಿರುವುದಕ್ಕೆ ಅಲ್ಲಿಯ ನೈಸರ್ಗಿಕ ವ್ಯವಸ್ಥೆಯಲ್ಲಿ ಮಾಡಿರುವ ಹಸ್ತಕ್ಷೇಪವೇ ಪ್ರಮುಖ ಕಾರಣ . ಈ ಬಾರಿ ಕೊಡಗಿನಲ್ಲಿ ಕಂಡು ಕೇಳರಿಯದ ರೀತಿ ಯಲ್ಲಿ ಮಳೆ ಸುರಿದಿದೆ . ಮಳೆಗೆ ಮಣ್ಣು ಸಡಿಲಗೊಂಡು ಜಾರುತ್ತಿದೆ. ಅರಣ್ಯ ಕಡಿದು ಪ್ಲಾಂಟೇಶನ್ , ಫಾರಂ ಹೌಸ್ ಗಳನ್ನು ಮಾಡಿಕೊಂಡು ಭೂಮಿಯ ಧಾರಣಾ ಸಾಮರ್ಥ್ಯ ಬಗ್ಗೆ ಅಧ್ಯಯನ ನಡೆಸದೇ ಪ್ರಾಕೃತಿಕ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ದೊಂದಿಗೆ ಮಾಡಲಾದ ಅವೈಜ್ಞಾನಿಕ ಕಾಮಗಾರಿಗಳು ಈ ಅನಾಹುತ ಗಳಿಗೆ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.












Click it and Unblock the Notifications