ಮಂಗಳೂರಿನ ಹಾಸ್ಟೆಲ್ ತೊರೆದ ಸಾವಿರಾರು ವಿದ್ಯಾರ್ಥಿಗಳು
ಮಂಗಳೂರು, ಮೇ 05 : ಹಲವು ದಶಕಗಳ ಬಳಿಕ ಮಂಗಳೂರು ತೀವ್ರ ಜಲಕ್ಷಾಮಕ್ಕೆ ತುತ್ತಾಗಿದ್ದು, ಮೂರು ಪ್ರಮುಖ ವೈದ್ಯಕೀಯ ಕಾಲೇಜಿಗೆ ಸೇರಿದ ಹಾಸ್ಟೆಲ್ಗಳು ಸೇರಿದಂತೆ ಹಲವು ಹಾಸ್ಟೆಲ್ಗಳು ಬಾಗಿಲು ಮುಚ್ಚಿವೆ. ಸುಮಾರು 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಮಂಗಳೂರು ತೊರೆದಿದ್ದಾರೆ.
ಮಂಗಳೂರು ನಗರದ ಆಸ್ಪತ್ರೆ, ಹೋಟೆಲ್, ಕ್ಯಾಂಟೀನ್, ಪೇಯಿಂಗ್ ಗೆಸ್ಟ್ ಕೇಂದ್ರಗಳು ನೀರಿನ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿವೆ. ಕೆಎಂಸಿ ಫಾದರ್ ಮುಲ್ಲರ್, ಏಜೆ ವೈದ್ಯಕೀಯ ಕಾಲೇಜು , ಶ್ರೀನಿವಾಸ ಕಾಲೇಜುಗಳ ಹಾಸ್ಟೆಲ್ಗಳು ಸೇರಿದಂತೆ ನಗರದ ಸುಮಾರು 90ಕ್ಕೂ ಹೆಚ್ಚು ಹಾಸ್ಟೆಲ್ಗಳಲ್ಲಿ ನೀರಿಲ್ಲ. [ಬತ್ತಿದ ನೇತ್ರಾವತಿ, ದಕ್ಷಿಣ ಕನ್ನಡದಲ್ಲಿ ನೀರಿಲ್ಲ]

ಕೆಎಂಸಿ ವೈದ್ಯಕೀಯ ಕಾಲೇಜಿಗೆ ಸೇರಿದ ಸುಮಾರು 7 ಹಾಸ್ಟೆಲ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ದ್ವಿತೀಯ ಹಾಗೂ ತೃತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ನೀರಿಲ್ಲ ಎಂಬ ಕಾರಣಕ್ಕೆ ಮನೆಗೆ ಕಳುಹಿಸಲಾಗಿದೆ. ಸುಮಾರು 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವಾಸ್ತವ್ಯ ಹೂಡಿದ್ದರು. ಪ್ರತಿ ಹಾಸ್ಟೆಲ್ನಲ್ಲಿ 250 ರಿಂದ 300 ವಿದ್ಯಾರ್ಥಿಗಳಿದ್ದರು. ಅವರೆಲ್ಲಾ ತವರಿಗೆ ಮರಳಿದ್ದಾರೆ. [ನೀರಿನ ಅಭಾವ, ನೇತ್ರಾವತಿ ನದಿಗೆ ಕಾವಲು!]
ಮಂಗಳೂರು ಲೈಟ್ ಹೌಸ್ ಹಿಲ್ ನಲ್ಲಿರುವ ನಂದಗಿರಿ ಲೇಡೀಸ್ ಹಾಸ್ಟೆಲ್, ಅತ್ತಾವರ ಮೆಸ್ಕಾಂ ಕಚೇರಿ ಬಳಿಯಿರುವ ಲೇಡೀಸ್ ಹಾಸ್ಟೆಲ್ ಸೇರಿದಂತೆ ಪಲ್ನೀರ್ ಬಿಜೈ, ಲಾಲ್ಬಾಗ್, ಜ್ಯೋತಿ, ಕಾಪ್ರಿ ಗುಡ್ಡದಲ್ಲಿರುವ ಕೆಎಂಸಿ ಹಾಸ್ಟೆಲ್ ನಲ್ಲೂ ನೀರಿನ ಕೊರತೆ ಕಾರಣ ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಲಾಗಿದೆ. [ಉಡುಪಿಯಲ್ಲೂ ನೀರಿಗೆ ಬರ, ಶ್ರೀ ಕೃಷ್ಣನಿಗೆ ಕೇಳುವುದೇ ಮೊರೆ?]
ಎಜೆ ವಿದ್ಯಾರ್ಥಿಗಳಿಗೆ 7ರಿಂದ ರಜೆ : ಎಜೆ ವೈದ್ಯಕೀಯ ಕಾಲೇಜಿಗೆ ಸೇರಿದ ಒಟ್ಟು 13 ಹಾಸ್ಟೆಲ್ ಗಳಿವೆ. ಇದರಲ್ಲಿ ಸುಮಾರು 2,300 ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಶೇ 60 ರಷ್ಟು ವಿದ್ಯಾರ್ಥಿಗಳಿಗೆ ಮೇ 7 ರಿಂದ ರಜೆ ನೀಡಲು ಕಾಲೇಜಿನ ಆಡಳಿತ ಮಂಡಳಿ ನಿರ್ಧರಿಸಿದೆ.
ಸಂಕಷ್ಟದಲ್ಲಿ ಹೋಟೆಲ್ಗಳು : ಮಂಗಳೂರು ನಗರದಲ್ಲಿ 90 ಹಾಸ್ಟೆಲ್ಗಳ ಜೊತೆ 1099 ಹೋಟೆಲ್, 576 ಕ್ಯಾಂಟೀನ್, 245 ಫಾಸ್ಟ್ ಫುಡ್ ಕೇಂದ್ರ ಹಾಗೂ 44 ಪಿಜಿ ಸೆಂಟರ್ ಗಳಿವೆ. ಹಾಸ್ಟೆಲ್ ಗಳ ಜತೆ ಹೋಟೆಲ್, ಕ್ಯಾಂಟೀನ್ ಗಳು ಸಂಕಷ್ಟಕ್ಕೆ ಸಿಲುಕಿವೆ. ಮಂಗಳೂರಿಗೆ ನೀರು ಸರಬರಾಜು ಮಾಡುವ ತುಂಬೆ ಡ್ಯಾಂನ ನೀರಿನ ಮಟ್ಟ 5 ಅಡಿಗೆ ಇಳಿದಿದೆ.
ಸರ್ಕ್ಯೂಟ್ ಹೌಸ್ನಲ್ಲಿ ಈಗ ನೀರಿಲ್ಲ : ನಗರಕ್ಕೆ ವಿಐಪಿಗಳು ಬಂದಾಗ ತಂಗುವ ಮಂಗಳೂರು ಸರ್ಕ್ಯೂಟ್ ಹೌಸ್ಗೆ ನೀರಿನ ಸಮಸ್ಯೆ ಬಿಸಿ ತಟ್ಟಿದೆ. ಮದ್ರಾಸ್ ಹೈಕೋರ್ಟ್ ಜಸ್ಟೀಸ್ ಕೃಷ್ಣ ಕುಮಾರ್, ಮಾಜಿ ಶಾಸಕ ಶ್ರೀ ರಾಮ ರೆಡ್ಡಿ ಇಲ್ಲಿ ವಾಸ್ತವ್ಯ ಹೂಡಿದ್ದು, ನೀರಿನ ಸಮಸ್ಯೆ ಎದುರಿಸಿದ್ದಾರೆ.












Click it and Unblock the Notifications