ಮಂಗಳೂರಿನಲ್ಲಿ ಅಂಧರಿಗಾಗಿ ತಯಾರಿಸಲಾಗಿದೆ ವಿನೂತನ ಕನ್ನಡಕ
ಮಂಗಳೂರು, ಆಗಸ್ಟ್ 06: ದೃಷ್ಟಿಹೀನರು ಈ ಕನ್ನಡಕ ಧರಿಸಿದರೆ ಸಾಕು ತಾವು ಎಲ್ಲಿದ್ದೇವೆ ಎಂದು ತಿಳಿಯುತ್ತದೆ. ಎಲ್ಲಿಗೆ? ಯಾವ ದಿಕ್ಕಿನಲ್ಲಿ ಹೋಗಬೇಕೆಂದು ಗೊತ್ತಾಗುತ್ತದೆ. ಒಟ್ಟಿನಲ್ಲಿ ಅಂಧರ ಬಾಳಿಗೆ ಹೊಸ ಆಶಾಕಿರಣವಾಗಿದೆ ಈ ಕನ್ನಡಕ.
ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಸಹ್ಯಾದ್ರಿ ಇನ್ನೋವೇಶನ್ ಹಬ್ ಪ್ರಾಯೋಜಿತ ಸಂಸ್ಥೆ ಆರ್ ಡಿ ಎಲ್ ಡೆಕ್ನಾಲಜಿ ಸಂಸ್ಥೆ ಇಂತಹದೊಂದು ಕನ್ನಡಕ ಸಂಶೋಧಿಸಿದೆ. ದೃಷ್ಟಿಹೀನರಿಗೆ ಮಾರ್ಗ ದರ್ಶನ ನೀಡಬಲ್ಲ ಈ ಕನ್ನಡಕವನ್ನು ವಿಸಿಬಲ್ ಲೈಟ್ ಎಂದೇ ಕರೆಯಲಾಗುತ್ತಿದೆ.
ದೃಷ್ಟಿಹೀನರು ಇನ್ನು ಮುಂದೆ ಬೇರೆಯವರನ್ನು ಅವಲಂಬಿಸಿ ಇರಬೇಕಾದ ಅವಶ್ಯಕತೆ ಇಲ್ಲ . ಯಾಕೆಂದರೆ ಮಂಗಳೂರಿನ ಸಹ್ಯಾದ್ರಿ ಕಾಲೇಜಿನ ಸಹ್ಯಾದ್ರಿ ಇನ್ನೋವೇಶನ್ ಹಬ್ ಪ್ರಾಯೋಜಿತ ಸಂಸ್ಥೆ ಆರ್ ಡಿ ಎಲ್ ಡೆಕ್ನಾಲಜಿ ಸಂಸ್ಥೆ ಹೊಸ ಅವಿಷ್ಕಾರ ನಡೆಸಿದೆ. ವಿ ಎಲ್ ಗ್ಲಾಸ್ ಎಂಬ ವಿಶಿಷ್ಟ ಕನ್ನಡಕದ ಮೂಲಕ ದೃಷ್ಟಿಹೀನರಿಗೊಂದು ವಿಶೇಷ ಕೊಡುಗೆ ನೀಡಿದೆ.

ಸಂಸ್ಥೆಯು ಆರ್ ಡಿ ಎಲ್ ಟೆಕ್ನಾಲಜೀಸ್ ರವರ ವಿ ಎಲ್ ಸಿ ಲ್ಯಾಬ್ ನಲ್ಲಿ ಈ ನೂತನ ಅವಿಷ್ಕಾರ ಮಾಡಿದ್ದು, ಈ ಗ್ಲಾಸ್ ದೃಷ್ಟಿಹೀನರಿಗೆ ಮಾರ್ಗದರ್ಶಕನಂತೆ ಕಾರ್ಯನಿರ್ವಹಿಸುತ್ತದೆ. ಸಿಂಕ್ ಮಾಡಿದ ಮಾಹಿತಿಯಿಂದ ಹಾಗು ಎಲ್ ಇ ಡಿ ಬಲ್ಪ್ ಗಳ ಕಿರಣದಿಂದ ಸ್ವಸ್ಥಾನವನ್ನು ಗುರುತಿಸಿ ಕಂಪನ ಹಾಗು ಇಯರ್ ಫೋನ್ ಮೂಲಕ ವ್ಯಕ್ತಿಗೆ ಮಾಹಿತಿಯನ್ನು ನೀಡುತ್ತದೆ. ಇದರಿಂದ ಎದುರಾಗುವ ಅಪಾಯವನ್ನು ತಡೆಗಟ್ಟ ಬಹುದಾಗಿದೆ.
ಕನ್ನಡದಲ್ಲಿ ಸೆನ್ಸಾರ್ ಅಳವಡಿಸಲಾಗಿದ್ದು, LIFI ತಂತ್ರಜ್ಞಾನ ದ ಮೂಲಕ ಕಿವಿಯೊಳಗೆ ಧರಿಸುವಂತಹ ಇಯರ್ ಫೋನ್ ಮೂಲಕ ಸಂದೇಶ ರವಾನೆಯಾಗುತ್ತದೆ. ಹೀಗೆ ಆಂಧ ವ್ಯಕ್ತಿಯು ಯಾವುದೇ ಅಡೆತಡೆಗಳನ್ನು ಗ್ರಹಿಸಿ ಯಾರ ಸಹಾಯವೂ ಇಲ್ಲದೆ ಎಚ್ಚರಿಕೆಯಿಂದ ಸ್ವತಂತ್ರವಾಗಿ ನಡೆದಾಡಲು ಸಹಾಯ ಮಾಡುತ್ತದೆ.

ಮೂರು ತಿಂಗಳ ಅವಧಿಯ ಕಾಲ ಅವಿರತ ಶ್ರಮದ ಫಲವಾಗಿ ಈ ಕನ್ನಡಕ ತಯಾರಿಸಿದ್ದು, ಇದರ ಬೆಲೆ ಕೇವಲ 500 ರೂಪಾಯಿ. ಒಟ್ಟಿನಲ್ಲಿ ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಈ ಹೊಸ ಅವಿಷ್ಕಾರ ಅಂಧರ ಬಾಳಲ್ಲಿ ಬೆಳಕು ನೀಡುವ ಆಶಾಭಾವನೆ ಮೂಡಿಸಿದೆ












Click it and Unblock the Notifications