ಉಡುಪಿ ರಥಬೀದಿಯಲ್ಲಿ ವಿಟ್ಲಪಿಂಡಿ ಸಂಭ್ರಮ, ಸಡಗರ
ಉಡುಪಿ, ಸೆ. 18 : ರಥ ಬೀದಿಯ ತುಂಬಾ ಜನ ಸಾಗರ, ವಿವಿಧ ವೇಷಗಳ ಕುಣಿತದ ಸಂಭ್ರಮ, ಕಟ್ಟಡವೇರಿ ಕೃಷ್ಣನನ್ನು ಕಣ್ತುಂಬಿಕೊಂಡ ಭಕ್ತಾದಿಗಳು, ಮೊಸರು ಕುಡಿಕೆ ಒಡೆಯಲು ಸ್ಪರ್ಧೆ ನಡೆಸಿದ ಗೊಲ್ಲರ ವೇಷಧಾರಿಗಳು, ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಇವು ಬುಧವಾರ ವಿಟ್ಲಪಿಂಡಿ ಸಂಭ್ರಮದಲ್ಲಿ ಉಡುಪಿಯ ರಥಬೀದಿಯಲ್ಲಿ ಕಂಡುಬಂದ ಚಿತ್ರಗಳು.
ಉಡುಪಿಯ ರಥ ಬೀದಿ ಮಂಗಳವಾರ ಜನರಿಂದ ತುಂಬಿ ಹೋಗಿತ್ತು. ವಿಟ್ಲಪಿಂಡಿ ಉತ್ಸವ ವೀಕ್ಷಿಸಲು ಜನರು ಬೆಳಗ್ಗೆಯಿಂದಲೇ ಕಾದು ಕುಳಿತಿದ್ದರು. ಮಧ್ಯಾಹ್ನದ ವೇಳೆಗೆ ರಥ ಬೀದಿಯ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ ನಂತರ ಸಂಭ್ರಮದಿಂದ ವಿಟ್ಲಪಿಂಡಿ ಉತ್ಸವ ಆರಂಭವಾಯಿತು. ಕೃಷ್ಣ ಜನ್ಮಾಷ್ಟಮಿ ಮರುದಿನ ಶ್ರೀ ಕೃಷ್ಣನ ಬಾಲಲೀಲೆಗಳನ್ನು ನೆನಪು ಮಾಡಿಕೊಳ್ಳುವ ಉದ್ದೇಶದಿಂದ ವಿಟ್ಲಪಿಂಡಿ ಉತ್ಸವ ಆಚರಿಸಲಾಗುತ್ತದೆ. [ಉಡುಪಿಯಲ್ಲಿ ಕೃಷ್ಣನ ಭಕ್ತರು ಹೈರಾಣ]
ಶ್ರೀಕೃಷ್ಣ ಲೀಲೋತ್ಸವದ ಎಂದೂ ವಿಟ್ಲಪಿಂಡಿ ಉತ್ಸವಕ್ಕೆ ಕರೆಯಲಾಗುತ್ತದೆ. ಮೊಸರು ತುಂಬಿದ ಮಡಕೆಗಳನ್ನು ಗೊಲ್ಲ ವೇಷಧಾರಿಗಳು ಒಡೆಯುವುದು ವಿಟ್ಲಪಿಂಡಿ ಉತ್ಸವದ ಪ್ರಮುಖ ಆಕರ್ಷಣೆ. ಬುಧವಾರ ನಡೆದ ವೈಭವದ ವಿಟ್ಲಪಿಂಡಿ ಮೆರವಣಿಗೆಯಲ್ಲಿ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು, ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಶ್ರೀ ಶೀರೂರು ಮಠದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು. ವಿಟ್ಲಪಿಂಡಿ ಮೆರವಣಿಗೆಯ ಚಿತ್ರಗಳು ಇಲ್ಲಿವೆ. [ಚಿತ್ರಗಳು : ಐಸಾಕ್ ರಿಚರ್ಡ್, ಮಂಗಳೂರು]

ರಥಬೀದಿ ತುಂಬಾ ಭಕ್ತರ ಸಾಲು
ಉಡುಪಿ ರಥಬೀದಿ ಭಕ್ತರಿಂದ ತುಂಬಿ ಹೋಗಿತ್ತು. ಬೆಳಗ್ಗೆಯಿಂದ ಭಕ್ತಾದಿಗಳು ವಿಟ್ಲಪಿಂಡಿ ಮೆರವಣಿಗೆ ನೋಡಲು ಕಾದು ಕುಳಿತಿದ್ದರು. ಮಧ್ಯಾಹ್ನ ರಥಬೀದಿಯ ಅಂಗಡಿ ಮುಂಗಟ್ಟುಗಳು ಮುಚ್ಚಿದ ನಂತರ ವೈಭವದ ವಿಟ್ಲಪಿಂಡಿ ಮೆರಮಣಿಗೆ ಆರಂಭವಾಯಿತು. [ವಿಟ್ಲಪಿಂಡಿ ಮೆರವಣಿಗೆ ಚಿತ್ರಗಳು ಇಲ್ಲಿವೆ ನೋಡಿ]

ಗೊಲ್ಲರ ವೇಷಧಾರಿಗಳ ಕಲರವ
ಗೊಲ್ಲರ ವೇಷ, ಹುಲಿವೇಷ ಮುಂತಾದವು ರಥಬೀದಿಯಲ್ಲಿ ವಿಟ್ಲಪಿಂಡಿ ಉತ್ಸವದ ಜೊತೆ ಸಾಗಿದವು. ಕೆಲವು ವೇಷಗಳು ಮಾತ್ರ ವಿಟ್ಲ ಪಿಂಡಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದರೆ, ಉಳಿದ ವೇಷಗಳೆಲ್ಲಾ ಪೇಟೆಯಲ್ಲೇ ಕುಣಿಯುತ್ತಿದ್ದವು.

ಮಡಕೆ ಒಡೆದ ಗೊಲ್ಲರ ವೇಷಧಾರಿಗಳು
ಗುರ್ಜಿಗಳಲ್ಲಿ ತೂಗು ಹಾಕಿದ್ದ ಮಡಕೆಗಳನ್ನು ಸಾಂಪ್ರದಾಯಿಕ ಗೊಲ್ಲರ ವೇಷ ಧರಿಸಿದವರು ಒಡೆಯುತ್ತ ಮುಂದೆ ಸಾಗಿದಂತೆ, ಮೆರವಣಿಯೂ ಮುಂದೆ ಸಾಗಿತು.

ಕೃಷ್ಣನ ಮೂರ್ತಿ ವಿಸರ್ಜನೆ
ಮಣ್ಣಿನಿಂದ ಮಾಡಿದ ಶ್ರೀ ಕೃಷ್ಣನ ಮಣ್ಣಿನ ಮೂರ್ತಿಯನ್ನು ಮಧ್ವಸರೋವರದಲ್ಲಿ ವಿಸರ್ಜನೆ ಮಾಡಿದ ನಂತರ ಮೆರಮಣಿಗೆ ಅಂತ್ಯಗೊಂಡಿತು. ಬುಧವಾರ ದಿನವಿಡೀ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಸಚಿವ ವಿನಯಕುಮಾರ ಸೊರಕೆ, ನಗರಸಭಾಧ್ಯಕ್ಷ ಯುವರಾಜ್, ಮಾಜಿ ಶಾಸಕ ಕೆ.ರಘುಪತಿ ಭಟ್ ಮೊದಲಾದವರು ಪಾಲ್ಗೊಂಡಿದ್ದರು.

ರಜತ ಕವಚ ಸಮರ್ಪಣೆ
ಶ್ರೀ ಕೃಷ್ಣ ಮಠದಲ್ಲಿ ಶ್ರೀಕೃಷ್ಣ ಲೀಲೋತ್ಸವದ ಸಂದರ್ಭದಲ್ಲಿ ಭಕ್ತ ಕನಕದಾಸರ ವಿಗ್ರಹಕ್ಕೆ ಪರ್ಯಾಯ ಶ್ರೀ ಕಾಣಿಯೂರು ಮಠದ ವತಿಯಿಂದ ರಜತ ಕವಚವನ್ನು ಸಮರ್ಪಿಸಲಾಯಿತು. ಪರ್ಯಾಯ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಕವಚವನ್ನು ಸಮರ್ಪಿಸಿದರು.

ಭಕ್ತರಿಗೆ ಲಾಡು, ಪಾಯಸ ವಿತರಣೆ
ಶ್ರೀಕೃಷ್ಣಮುಖ್ಯ ಪ್ರಾಣ ಸೇವಾ ಸಮಿತಿ ವತಿಯಿಂದ ಶ್ರೀಕೃಷ್ಣನಿಗೆ ಅರ್ಪಿಸಿದ ಹಾಲು ಪಾಯಸ, ಲಾಡು ಹಾಗೂ ಬೂಂದಿ ಲಾಡನ್ನು ಭಕ್ತರಿಗೆ ವಿತರಣೆ ಮಾಡಲಾಯಿತು.

ಗಮನ ಸೆಳೆದ 'ಈಗ'
ವಿಟ್ಲಪಿಂಡಿ ಉತ್ಸವದಲ್ಲಿ ಪಾಲ್ಗೊಂಡಿದ್ದ ನೊಣದ ಪ್ರತಿಕೃತಿ ಎಲ್ಲರ ಗಮನ ಸೆಳೆಯಿತು.












Click it and Unblock the Notifications