ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನ ರಜೆ ನೀಡುವಂತೆ ವಿಶ್ವ ಹಿಂದೂ ಪರಿಷತ್ ಮನವಿ
ಮಂಗಳೂರು, ಜನವರಿ 18: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳಲಿದ್ದು, ಸೋಮವಾರ ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ. ಅಯೋಧ್ಯೆ ಶ್ರೀರಾಮ ಮಂದಿರದ ಲೋಕಾರ್ಪಣೆ ದಿನವನ್ನು ಐತಿಹಾಸಿಕ ಕ್ಷಣವನ್ನು ಆಚರಿಸುವ ಸಲುವಾಗಿ ಜನವರಿ 22ರಂದು ರಜೆ ನೀಡುವಂತೆ ವಿಶ್ವ ಹಿಂದೂ ಪರಿಷತ್ ಮುಖಂಡರು ಮನವಿ ಮಾಡಿದ್ದಾರೆ.
ಜನವರಿ 22ರಂದು ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಜನರಿಗೆ ಭಾಗಿಯಾಗಲು ಅವಕಾಶ ಕಲ್ಪಿಸುವಂತೆ ಜನವರಿ 22ರ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯ ಅವಧಿಯಲ್ಲಿ ರಜೆ ನೀಡುವಂತೆ ವ್ಯಾಪಾರ ಮಳಿಗೆಗಳು, ಹೊಟೇಲ್ ಉದ್ಯಮಿಗಳು, ಫ್ಯಾಕ್ಟರಿಗಳು, ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳು, ಉದ್ಯಮಿಗಳಲ್ಲಿ ಶರಣ್ ಪಂಪುವೆಲ್ ಮನವಿ ಮಾಡಿದ್ದಾರೆ.

ರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಶುಭದಿನ ವಿವಿಧ ಮಂದಿರಗಳಲ್ಲಿ ಹೋಮ, ಪೂಜೆ, ಪ್ರವಚನ ನಡೆಯಲಿದೆ. ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದ ನೇರಪ್ರಸಾರದ ವ್ಯವಸ್ಥೆ ಸಹ ಇರಲಿದೆ. ಹೀಗಾಗಿ ಜನರಿಗೆ ಭಾಗವಹಿಸಲು ಅನುಕೂಲವಾಗುವಂತೆ ರಜೆ ನೀಡಬೇಕು. ಈ ಮೂಲಕ ತಮ್ಮಲ್ಲಿ ಕೆಲಸ ಮಾಡುವವರಿಗೆ, ವಿದ್ಯಾರ್ಥಿಗಳಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರು ಮನವಿ ಮಾಡಿದ್ದಾರೆ.
ಸಾರ್ವತ್ರಿಕ ರಜೆ ಘೋಷಣೆಗಾಗಿ ಸಿಎಂಗೆ ಪತ್ರ ಬರೆದಿದ್ದ ಶಾಸಕ ಯಶ್ಪಾಲ್ ಸುವರ್ಣ
ಇನ್ನು ಈ ಹಿಂದೆ ಜನವರಿ 22ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮನವಿ ಮಾಡಿದ್ದರು. ಕೋಟ್ಯಾಂತರ ಭಾರತೀಯರ ಶತಮಾನಗಳ ಕನಸು ಜನವರಿ 22 ರಂದು ನನಸಾಗುತ್ತಿದೆ. ಹಿಂದೂಗಳ ಶ್ರದ್ಧಾ ಭಕ್ತಿ ಕೇಂದ್ರವಾದ ಅಯೋಧ್ಯೆಯಲ್ಲಿ ಜನವರಿ 22 ರಂದು ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಯೊಂದಿಗೆ ಭವ್ಯ ರಾಮ ಮಂದಿರವು ಉದ್ಘಾಟನೆಗೊಳ್ಳುತ್ತಿದೆ.
ಶ್ರೀರಾಮ ಮಂದಿರದ ಭಕ್ತರ ಭಾವನಾತ್ಮಕ ಮತ್ತು ಧಾರ್ಮಿಕತೆಯ ಐತಿಹಾಸಿಕ ಕ್ಷಣವಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ . ಈ ಪೂಜ್ಯ ದಿನವನ್ನು ದೇಶಾದ್ಯಂತ ದೇವಸ್ಥಾನ, ಮಂದಿರ, ಸಂಘ ಸಂಸ್ಥೆಗಳು ಮತ್ತು ಮನೆ ಮನೆಗಳಲ್ಲಿ ರಾಮ ಜ್ಯೋತಿ ಬೆಳಗಿಸುವುದರೊಂದಿಗೆ ವಿಶೇಷ ಪೂಜೆಗಳು, ಭಜನಾ ಹಾಗೂ ಅನ್ನ ಸಂತರ್ಪಣೆಗಳ ಮೂಲಕ ಅತ್ಯಂತ ಸಂಭ್ರಮ ಸಡಗರದಿಂದ ದೀಪಾವಳಿಯ ಹಬ್ಬದಂತೆ ಆಚರಿಸಲು ಕೋಟ್ಯಾಂತರ ಶ್ರೀರಾಮ ಭಕ್ತರು ಇಚ್ಛಿಸಿರುತ್ತಾರೆ.
ರಾಮ ಮಂದಿರದ ದಿನದದಂದು ಶ್ರೀರಾಮ ದೇವರ ಸೇವೆಯಲ್ಲಿ ಪಾಲ್ಗೊಂಡು ಮತ್ತು ದೇವರ ಕೃಪೆಗೆ ಪಾತ್ರರಾಗಲು ಅಯೋಧ್ಯೆ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ದಿನಾಂಕ 22/01/2024ರ ಶಾಲಾ ಕಾಲೇಜು, ಸರಕಾರಿ ಕಛೇರಿ ಹಾಗೂ ಬ್ಯಾಂಕ್ ಮತ್ತಿತರ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆ ಘೋಷಿಸುವಂತೆ ಈ ಮೂಲಕ ಕೋರುತ್ತೇನೆ ಎಂದು ಶಾಸಕರು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದರು. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.












Click it and Unblock the Notifications