ಸಂತಾಕ್ಲಾಸ್ ವೇಷ ಧರಿಸಿ ಕ್ರಿಸ್ಮಸ್ ಶುಭಾಶಯ ಹೇಳುವ ಮಂಗಳೂರಿನ ಸಂತ
ಮಂಗಳೂರು, ಡಿಸೆಂಬರ್.23 : ಬರುವ ಭಾನುವಾರ ಕ್ರಿಸ್ ಮಸ್ ಹಬ್ಬ. ಪ್ರತಿ ವರ್ಷದಂತೆ ಈ ವರ್ಷ ಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಿಸಲು ಕ್ರೈಸ್ತ ಬಾಂಧವರು ತೀರ್ಮಾನಿಸಿದ್ದಾರೆ.
ಹಬ್ಬವನ್ನು ಕಲರ್ ಫುಲ್ ಆಗಿ ಆಚರಿಸುವ ಮುನ್ನ ಖರೀದಿ ಬಲು ಜೋರಾಗಿದೆ. ಮಾಲ್ ಗಳಲ್ಲಿ ಜನವೋ ಜನ..ಎಲ್ಲೆಡೆ ಖುಷಿ ವಾತವರಣ ಕಂಡು ಬರುತ್ತಿದೆ.

ಸಂತ ಮನರಂಜನೆ: ಸಂತಾಕ್ಲಾಸ್ ವೇಷಧಾರಿ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಜನರಿಗೆ ಕ್ರಿಸ್ಮಸ್ ಶುಭಾಶಯ ಹೇಳುತ್ತಾ ಎಲ್ಲರನ್ನು ಖುಷಿಪಡಿಸುತ್ತ 'ಜಿಂಗೆಲ್ ಬೆಲ್ ಜಿಂಗೆಲ್ ಬೆಲ್' ಅಂತ ಗಾಡಿಯಲ್ಲಿ ಸಾಗುತ್ತಿರುವ ಸಂತಕ್ಲಾಸ್ ನದ್ದೇ ಹವಾ.
ಮಂಗಳೂರು ನಗರದ ಮುಖ್ಯ ರಸ್ತೆಗಳಲ್ಲಿ ಆ ಕೆಂಪು ಗಾಡಿಯಲ್ಲಿ ಟೋಪಿ ಬಣ್ಣ ಬಣ್ಣದ ಬಲೂನ್, ಕ್ರಿಸ್ಮಸ್ ಸ್ಟಾರ್ ಹಾಗೂ ಬಾಲ್ ಗಳಿವೆ. ಈ ಗಾಡಿಯನ್ನು ಸುಂದರವಾಗಿ ಅಲಂಕಾರ ಮಾಡಲಾಗಿದೆ. ಜೊತೆಗೆ ಈ ಸಂತನ ಕೈಯಲ್ಲಿ ಗಿಫ್ಟ್ ಗಳ ರಾಶಿಯೇ ಇದೆ. ಹಾಗಿದ್ದರೇ ಆ ಸಂತ ಯಾರು ಎಂಬುವುದನ್ನು ತಿಳಿಯಲು ಮುಂದೆ ಓದಿ...

ಈ ಸಂತ ಯಾರು..?
ಅಂದಹಾಗೇ ಈ ಸಂತ ಮಂಗಳೂರಿನಲ್ಲಿ ಕಳೆದ 17 ವರ್ಷಗಳಿಂದ ಈ ರೀತಿ ಕ್ರಿಸ್ಮಸ್ ಶುಭಾಶಯ ಹೇಳುತ್ತಿದ್ದಾರೆ. ಹೌದು. ಹೀಗೆ ಯೇಸು ಕ್ರಿಸ್ತರ ಹುಟ್ಟುಹಬ್ಬದ ಪ್ರಯುಕ್ತ ಸಂದೇಶ, ಶುಭಾಶಯ ಕೋರಿ ಸಿಹಿ ತಿಂಡಿ ಹಂಚುತ್ತಾ ಸಾಗುವ ಇವರೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕೌಕ್ರಾಡಿ ಗ್ರಾಮದ ವಿನ್ಸೆಂಟ್ ಮಿನೇಜಸ್.
ಪದವೀಧರರಾಗಿರುವ ಇವರು ಕೃಷಿಕ ಹಾಗೂ ಸಮಾಜ ಸೇವಕರೂ ಕೂಡಾ ಹೌದು. ಜೊತೆಗೆ ಕಲಾವಿದರು.

ವಿನ್ಸೆಂಟ್ 2000 ರಿಂದಲೂ ಪ್ರತಿ ವರ್ಷ ಕ್ರಿಸ್ಮಸ್ ಹಬ್ಬಕ್ಕೆ ಮುಂಚಿತವಾಗಿ ತನ್ನ ಕೃಷಿ ಕಾರ್ಯಗಳನ್ನು ಬದಿಗಿಟ್ಟು ದ್ವಿಚಕ್ರ ವಾಹನವನ್ನು ಶೃಂಗಾರಗೊಳಿಸಿ.
ಸಂತಕ್ಲಾಸ್ ವೇಷವನ್ನು ಧರಿಸಿ 300-400 ಕಿ.ಮೀ. ಪ್ರಯಾಣ ಮಾಡಿ 4 ದಿನಗಳ ಕಾಲ ಊರಿಂದೂರಿಗೆ ಪ್ರಯಾಣ ಮಾಡಿ. ಆಶ್ರಮಗಳಿಗೆ, ಸ್ಲಂ ಏರಿಯಾಗಳಿಗೆ ಭೇಟಿ ಕೊಟ್ಟು ಯೇಸು ಕ್ರಿಸ್ತರ ಸಂದೇಶ ಸಾರುತ್ತ ಸಿಹಿ ತಿಂಡಿ ಹಂಚುತ್ತಾ ತನ್ನ ಯಾತ್ರೆಯನ್ನು ಕೊನೆಗೊಳಿಸುತ್ತಾರೆ.












Click it and Unblock the Notifications