157 ವರ್ಷಗಳ ನಂತರ ನಡೆದ ಜಠಾಧಾರಿ ಶ್ರೀ ಪಾರ್ಥಂಪಾಡಿ ಮೈಮೆ ನೇಮೋತ್ಸವ
ಮಂಗಳೂರು, ಫೆಬ್ರವರಿ 10: ತುಳುನಾಡು ಎಂದಾಕ್ಷಣ ಕಣ್ಣೆದುರಿಗೆ ಬರುವುದು ಒಂದು ಕಡೆ ವಿಶಾಲ ನೀಲಿ ಸಮುದ್ರ. ಮತ್ತೊಂದು ಕಡೆ ಹಚ್ಚ ಹಸುರಿನ ಪ್ರಾಕೃತಿಕ ಸುಂದರ ಪರಿಸರ ,ಹೆಜ್ಜೆಗೊಂದು ದೇವಾಲಯ, ಯಕ್ಷಗಾನ, ಕೋಲಾ, ನೇಮ,ನಾಗಾರಾಧನೆ ,ಕಂಬಳ.
ಆದರೆ ಅಭಿವೃದ್ದಿ ಪಥದ ನಾಗಾಲೋಟದ ಸ್ಫರ್ಧೆಯಲ್ಲಿ ಹೆಚ್ಚಿನ ಪರಿಸರ ಇಂದು ಕಾಂಕ್ರಿಟ್ ಕಾಡುಗಳಾಗಿ ಪರಿವರ್ತನೆಗೊಂಡಿವೆ.ತುಳುನಾಡಿನ ವಿಶಿಷ್ಟವಾದ ಸಂಸ್ಕೃತಿ, ಪರಂಪರೆ ನಶಿಸುತ್ತಿದೆ. ತುಳುನಾಡಿನ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಕೋಲಾ - ನೇಮದಂತಹ ಆಚರಣೆಗಳು ಅಲ್ಲಿ ಇಲ್ಲಿ ನಡೆಯುತ್ತಲೇ ಇರುತ್ತವೆ.
ತುಳುನಾಡಿನಲ್ಲಿ ಭೂತಾರಾಧನೆಗೆ ಪ್ರಮುಖ ಸ್ಥಾನ. ಭೂತಾರಾಧನೆ ಅಥವಾ ದೈವಾರಾಧನೆ ತುಳುನಾಡಿನ ಸಂಪ್ರದಾಯ ಸಂಸ್ಕೃತಿಯ ಅವಿಭಾಜ್ಯ ಅಂಗ. ಈ ತುಳುನಾಡಿನಲ್ಲಿ ಜನರು ಭೂತಗಳನ್ನು ದೈವಿಕ ಶಕ್ತಿಗಳೆಂದು ನಂಬಿ ಆರಾಧಿಸುತ್ತಾರೆ. ಅಗೆಲು, ತಂಬಿಲ, ಕೋಲ, ನೇಮೋತ್ಸವ ಮುಂತಾದ ಆಚರಣೆಗಳ ಮೂಲಕ ಭೂತ ಅಥವಾ ದೈವಗಳನ್ನು ಆರಾಧಿಸುತ್ತಾರೆ.
ಇಲ್ಲಿಯ ಪ್ರತಿ ಕುಟುಂಬಕ್ಕೂ ಕುಟುಂಬ ದೈವಗಳಿದ್ದು, ಅವು ಕುಟುಂಬವನ್ನು ರಕ್ಷಿಸುತ್ತವೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ವರ್ಷಂಪ್ರತಿ ಇಲ್ಲಿಯ ಕುಟುಂಬಗಳು ಮೂಲ ಮನೆ ಹಾಗೂ ದೇವಾಲಯದ ಆವರಣಗಳಲ್ಲಿ ಭೂತಕೋಲೋತ್ಸವ ನೇಮೋತ್ಸವ, ಧರ್ಮ ನೇಮೋತ್ಸವ ನಡೆಸಿಕೊಂಡು ಬರುತ್ತಿವೆ. ದೇವರನ್ನು ಆರಾಧಿಸದ ಜನರಿರಬಹುದು ಆದರೆ ದೈವಗಳನ್ನು ಆರಾಧಿಸದ ತುಳುವರು ಅತ್ಯಂತ ವಿರಳ.
ತುಳುನಾಡು ದೈವಗಳ ನಾಡೆಂದೇ ಪ್ರಸಿದ್ದಿ ಪಡೆದಿದೆ. ಇಲ್ಲಿ ಸೀಮೆ , ಮಾಗಣಿ ,ಗ್ರಾಮ,ಗುತ್ತು, ಬಾರಿಕೆ, ಬೂಡು, ತರವಾಡು ದೈವಗಳಾಗಿ ಆರಾಧನೆ ನಡೆಯುತ್ತದೆ. ಶತಮಾನಗಳಷ್ಟು ಹಿಂದಿನ ಕಾಲದಿಂದ ಅರಾಧಿಸಲ್ಪಟ್ಟ ದೈವ ಕ್ಷೇತ್ರಗಳು ಕಾಲಾಂತರದಲ್ಲಿ ಶಿಥಿಲಾವಸ್ಥೆ ಹೊಂದಿದರೂ ಮತ್ತೊಂದು ಕಾಳದಲ್ಲಿ ದೈವಾರಾಧಕರ ಮೂಲಕ ನವೀಕರಣ ಪುನರ್ ನಿರ್ಮಾಣಗೊಳ್ಳುತ್ತದೆ. ದೈವಗಳ ನೇಮೋತ್ಸವ ನಡೆಯುತ್ತದೆ .
ಇಂತಹುದೇ ಒಂದು ಅತ್ಯಂತ ಅಪರೂಪದ ನೇಮೋತ್ಸವ ಒಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಈ ನೇಮೋತ್ಸವ ನಡೆದಿರುವುದು ಬರೋಬ್ಬರಿ 157 ವರ್ಷಗಳ ನಂತರ . ಹೌದು ಇಂತಹ ಅಪರೂಪದ ನೇಮೋತ್ಸವ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದಿದೆ.ವಿಟ್ಲ ದನ ಪ್ರಾಚೀನ ದೈವಸ್ಥಾನಗಳಲ್ಲಿ ಒಂದದಾದ ವಿಟ್ಲ ಶ್ರೀ ಪಾರ್ಥಂಪಾಡಿ ಜಠಾಧಾರಿ ದೈವಸ್ಥಾನ ಶಿಥಿಲಗೊಂಡು ಈ ಸನ್ನಿಧಾನದಲ್ಲಿ ಜಠಾಧಾರಿ ಮೈಮೆ ನಡೆಯದೇ 157ವರ್ಷ ಕಳೆದು ಹೋಗಿತ್ತು. ಮುಂದೆ ಓದಿ..

ಮಠದ ಹಿತ್ಲು ಎಂಬಲ್ಲಿರುವ ದೈವಸ್ಥಾನ
ಶತಮಾನಗಳ ಇತಿಹಾಸ ಹೊಂದಿರುವ ವಿಟ್ಲ ಶ್ರೀ ಪಾರ್ಥಂಪಾಡಿ ದೈವಸ್ಥಾನದ ಜೀರ್ಣೋದ್ದಾರ ಪೂರ್ಣಗೊಂಡು, ದೈವ ಸ್ಥಾನದ ಸ್ಥಾನ ಪ್ರದಾನ, ಪುನಃ ಪ್ರತಿಷ್ಠೆ ಮತ್ತು ಮೈಮೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ವಿಟ್ಲ ಪೇಟೆಯಿಂದ ಸ್ವಲ್ಪ ದೂರದಲ್ಲಿ ವಿಟ್ಲ - ಕಾಸರಗೋಡು ರಸ್ತೆಯ ಅಂಚಿನಲ್ಲಿರುವ ವಿಟ್ಲ ಅರಮನೆಯ ಎದುರು ಮಠದ ಹಿತ್ಲು ಎಂಬಲ್ಲಿ ಈ ದೈವಸ್ಥಾನ ವಿದೆ. ಇದು ವಿಟ್ಲ ಅರಸು ಅನುವಂಶಿಕ ಆಡಳಿತಕ್ಕೆ ಒಳಪಟ್ಟ ದೈವಸ್ಥಾನವಾಗಿದೆ. ಪಾರ್ಥಂಪಾಡಿ ಶ್ರೀ ಜಠಾಧಾರಿ ಪಾರ್ಥಂಪಾಡಿ ಚಾವಡಿ ಪಟ್ಟದ ದೈವವೆನಿಸಿದೆ.

ಪುನಃ ಪ್ರತಿಷ್ಠೆ, ಮೈಮೆ ಕಾರ್ಯಕ್ರಮ
ಸಂಪೂರ್ಣ ಶಿಥಿಲಾವಸ್ಥೆಗೆ ತಲಪಿದ್ದ ಶ್ರೀ ಜಠಧಾರಿ ದೈವಸ್ಥಾನವನ್ನು ಊರವರು ಇತ್ತೀಚೆಗೆ ಸೇರಿ ಜೀರ್ಣೋದ್ದಾರ ಮಾಡಿದ್ದು, ಇದೀಗ ಸುಂದರವಾದ ದೈವಸ್ಥಾನ,ನಾಗಸಾನಿಧ್ಯ, ಗುಳಿಗನ ಕಟ್ಟೆ ಪುನರ್ ನಿರ್ಮಾಣಗೊಂಡಿದೆ. ದೈವಸ್ಥಾನದ ಜೀರ್ಣೋದ್ದಾರ ಕಾರ್ಯ ಪೂರ್ಣಗೊಂಡ ಹಿನ್ನ್ನೆಲೆಯಲ್ಲಿ ದೈವಸ್ಥಾನದಲ್ಲಿ ದೈವ ಸ್ಥಾನದ ಸ್ಥಾನ ಪ್ರದಾನ, ಪುನಃ ಪ್ರತಿಷ್ಠೆ ಮತ್ತು ಮೈಮೆ ಕಾರ್ಯಕ್ರಮ ನಡೆಯಿತು.

ಆ ಪೀಳಿಗೆಯವರು ಈಗ ಯಾರು ಇಲ್ಲ
ಸುಮಾರು 157 ವರ್ಷಗಳ ಹಿಂದೆ ಬಾಡೂರು ಕೊಟೇಲು ಚಾವಡಿಯಿಂದ ಭಂಡಾರ ಬಂದು ಬಾಕಿಮಾರು ಗದ್ದೆ ಸಮೀಪದ (ಮೈಮೆದ ಕಂಡ)ಮಹಿಮೆಯ ಗದ್ದೆಯಲ್ಲಿ ಜಠಾಧಾರಿ ದೈವದ ಮಹಿಮೆ ಜರುಗಿತ್ತು. ಆದರೆ ಆ ನೇಮೋತ್ಸವ ನೋಡಿದ ಪೀಳಿಗೆಯವರು ಈಗ ಯಾರು ಇಲ್ಲ.

ಒಂದೂವರೆ ಶತಮಾನಗಳ ನಂತರ
ಈಗ ಮತ್ತೆ ದೈವಸ್ಥಾನದ ಜೀರ್ಣೋದ್ದಾರ ನಡೆಸಿದ ನಂತರ ಸುಮಾರು ಒಂದೂವರೆ ಶತಮಾನಗಳ ನಂತರ ಜಠಾಧಾರಿ ಮೈಮೆ ದೈವಸ್ಥಾನದಲ್ಲಿ ಮೈಮೆಯ ಗದ್ದೆಯಲ್ಲಿ ಜಠಾಧಾರಿ ದೈವದ ಮಹಿಮೆಯ ನೇಮೋತ್ಸವ ಕಾರ್ಯಕ್ರಮ ನಡೆಯಿತು.












Click it and Unblock the Notifications