ಮಂಗಳೂರು : ಪದ್ಮವಿಭೂಷಣ ವೀರೇಂದ್ರ ಹೆಗ್ಗಡೆಗೆ ಭವ್ಯ ಸ್ವಾಗತ
ಮಂಗಳೂರು, ಏ.10 : ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಂಳೂರಿಗೆ ಆಗಮಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಗುರುವಾರ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಪ್ರಶಸ್ತಿ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳ್ತಂಗಡಿ ಶಾಸಕ ವಸಂತ ಬಂಗೇರ ಸೇರಿದಂತೆ ಹಲವು ನಾಯಕರು ವೀರೇಂದ್ರ ಹೆಗ್ಗಡೆ ಅವರನ್ನು ಬರಮಾಡಿಕೊಂಡರು. ವಿಮಾನ ನಿಲ್ದಾಣದಿಂದ ಅವರನ್ನು ಧರ್ಮಸ್ಥಳಕ್ಕೆ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲಾಯಿತು.

ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವೀರೇಂದ್ರ ಹೆಗ್ಗಡೆ ಅವರು, 'ಪ್ರಶಸ್ತಿ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ನಮ್ಮೊಂದಿಗೆ ಕೆಲಸ ಮಾಡುವ ಸಿಬ್ಬಂದಿಗೂ ಸ್ಫೂರ್ತಿ ಬರಲಿದ್ದು, ನಮ್ಮ ಸೇವಾಕಾರ್ಯಗಳು ವಿಸ್ತಾರಗೊಳ್ಳಲಿವೆ' ಎಂದು ಹೇಳಿದರು. [ರಾಷ್ಟ್ರಪತಿಯಿಂದ ಬುಧವಾರ 'ಪದ್ಮ' ಪ್ರಶಸ್ತಿ ಪ್ರದಾನ]
ಸಭಾ ಕಾರ್ಯಕ್ರಮ : ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಭವನದಲ್ಲಿ ಗುರುವಾರ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ವೀರೇಂದ್ರ ಹೆಗ್ಗಡೆಯವರು, 'ಯಾವುದನ್ನು ನಾವು ನಿರೀಕ್ಷೆ ಮಾಡುವುದಿಲ್ಲವೋ ಅದು ನಮಗೆ ಅನಾಯಾಸವಾಗಿ ಒದಗುತ್ತದೆ. ಇದು ಈ ಕ್ಷೇತ್ರದ ಮಹಾತ್ಮೆ' ಎಂದರು. [ಧರ್ಮಸ್ಥಳ ಸಾಮಾಜಿಕ ಜಾಲ ತಾಣಗಳ ಅನಾವರಣ]

'ಪದ್ಮವಿಭೂಷಣ ದೊರಕಿರುವುದು ಅನಂದ ತಂದಿದೆ. ಸುದೀರ್ಘ ಮತ್ತು ನಿರಂತರ ಕಾರ್ಯಗಳ ಸಫಲತೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದು ಶ್ರೀ ಮಂಜುನಾಥ ಸ್ವಾಮಿಯ ದೊಡ್ಡ ಅನುಗ್ರಹ ಎಂದು ಭಾವಿಸಿದ್ದೇನೆ' ಎಂದು ತಿಳಿಸಿದರು.












Click it and Unblock the Notifications