Vande Bharat Express: ಮಡಗಾಂವ್-ಮಂಗಳೂರು ರೈಲಿನ ಪ್ರಯಾಣಿಕರ ಸಂಖ್ಯೆ ಏರಿಕೆಗೆ ಪರ್ಯಾಯ ಮಾರ್ಗ ಏನು?
ಮಂಗಳೂರು, ಫೆಬ್ರವರಿ, 23: ವಂದೇ ಭಾರತ್ ರೈಲು ದಿನದಿಂದ ದಿನಕ್ಕೆ ಪ್ರಸಿದ್ಧಿ ಪಡೆಯುತ್ತಲೇ ಇದೆ. ಇತ್ತೀಚೆಗಷ್ಟೇ ಈ ರೈಲು ಸೇವೆ ಮಡಗಾಂವ್ ಹಾಗೂ ಮಂಗಳೂರು ನಡುವೆ ಆರಂಭವಾಗಿದೆ. ಆದರೆ ಪ್ರಯಾಣಿಕರ ಪ್ರಮಾಣ ಮಾತ್ರ ತಗ್ಗುತ್ತಲ್ಲೇ ಇದೆ. ಹಾಗಾದರೆ ಇದಕ್ಕೆ ಪರ್ಯಾಯ ಮಾರ್ಗ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮಡಗಾಂವ್-ಮಂಗಳೂರು ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ರೈಲನ್ನು ಮುಂಬೈವರೆಗೂ ವಿಸ್ತರಣೆ ಮಾಡುವಂತೆ ಭಾರೀ ಬೇಡಿಕೆಗಳು ಬರುತ್ತಲೇ ಇವೆ. ಇತ್ತೀಚೆಗಷ್ಟೇ ಆರಂಭವಾಗಿರುವ ಈ ರೈಲಿನಲ್ಲಿ ನಿರೀಕ್ಷಿಸಿದಷ್ಟು ಪ್ರಯಾಣಿಕರು ಪ್ರಯಾಣ ಮಾಡುತ್ತಿಲ್ಲ. ಆದ್ದರಿಂದ ಈ ರೈಲು ಸಂಚಾರ ರದ್ದಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಈ ರೈಲನ್ನು ಮುಂಬೈಗೆ ವಿಸ್ತರಿಸಿದರೆ ಮತ್ತು ಹೆಚ್ಚು ನಿಲುಗಡೆ ಒದಗಿಸಿದರೆ ರೈಲು ಭರ್ತಿಯಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಈಗಾಗಲೇ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ರೈಲನ್ನು ವಿಸ್ತರಣೆ ಮಾಡುವ ಬಗ್ಗೆ ಪತ್ರ ಬರೆದಿದ್ದಾರೆ. ಪ್ರಸ್ತುತ ವಂದೇ ಭಾರತ್ ರೈಲು ಮಂಗಳೂರು ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದ್ದು, ಉಡುಪಿ, ಕಾರವಾರದಲ್ಲಿ ನಿಲುಗಡೆಯಾಗಲಿದೆ.
ಆದ್ದರಿಂದ ಇದು ಜನರಿಗೆ ಯಾವ ರೀತಿಯಲ್ಲೂ ಉಪಯೋಗಕ್ಕೆ ಇಲ್ಲದಂತಾಗಿದೆ. ಕೊಲ್ಲೂರು ಮೂಕಾಂಬಿಕಾ ನಿಲ್ದಾಣ, ಕುಂದಾಪುರ ಸೇರಿ ಕೆಲವು ನಿಲ್ದಾಣಗಳಲ್ಲಿ ನಿಲುಗಡೆ ನೀಡಿದರೆ, ಕನಿಷ್ಠ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಲು ಅನುಕೂಲ ಆದಂತಾಗುತ್ತದೆ. ರೈಲನ್ನು ಮುಂಬೈವರೆಗೂ ವಿಸ್ತರಣೆ ಮಾಡಿದರೆ ಪ್ರತಿನಿತ್ಯ ಎಲ್ಲ ಸೀಟುಗಳು ಭರ್ತಿಯಾಗಲಿದೆ.
ಕೊಂಕಣ ರೈಲ್ವೆ ಆರಂಭವಾಗಿ ಮೂರು ದಶಕ ಆಗಿದ್ದರೂ, ಇನ್ನೂ ಮಂಗಳೂರು ಮತ್ತು ಮುಂಬೈ ನಡುವೆ ಪೂರ್ಣ ಪ್ರಮಾಣದಲ್ಲಿ ಇರುವುದು ಎರಡು ರೈಲುಗಳು ಮಾತ್ರ. ಉಳಿದೆಲ್ಲ ರೈಲುಗಳು ಮಂಗಳೂರು ಮೂಲಕ ಹಾದು ಹೋಗುತ್ತವೆ. ಅಲ್ಲದೆ ಮುಂಬೈ-ಮಂಗಳೂರು ನಡುವೆ ಹಗಲು ಸಂಚರಿಸುವ ಎಲ್ಲ ರೈಲುಗಳು ಎಲ್ಲಾ ಸಮಯಲ್ಲೂ ಭರ್ತಿಯಾಗಿರುತ್ತವೆ.
ಬೇಸಿಗೆ ರಜೆ ಮತ್ತು ಹಬ್ಬ ಹರಿದಿನಗಳ ಸಮಯದಲ್ಲಿ ಈ ರೈಲುಗಳಲ್ಲಿ ಸೀಟು ಸಿಗುವುದೇ ಕಷ್ಟವಾಗಿರುತ್ತದೆ. ಇನ್ನೂ ಸೀಟು ಕಾಯ್ದಿರಿಸಿದವರು ಮಾತ್ರ ಆರಾಮವಾಗಿ ಪ್ರಯಾಣ ಮಾಡಬಹುದಾಗಿದೆ. ಆದ್ದರಿಂದ ವಂದೇ ಭಾರತ್ ರೈಲನ್ನು ಮುಂಬೈಗೆ ವಿಸ್ತರಣೆ ಮಾಡಬೇಕು ಹಾಗೂ 8 ಬೋಗಿ ಬದಲು 16 ಬೋಗಿ ಅಳವಡಿಸಬೇಕು ಎನ್ನುವ ಕೂಗುಗಳು ಜೋರಾಗಿಯೇ ಕೇಳಿಬರುತ್ತಿದೆ.












Click it and Unblock the Notifications