ಯುಪಿಯಲ್ಲಿ ಯೋಗಿ ಪರ ಬಂಟ್ವಾಳ ಮೂಲದ ನಾಗಾಸಾಧು ಪ್ರಚಾರ!
ಮಂಗಳೂರು, ಫೆಬ್ರವರಿ 13; ದೇಶದ ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಹೇಳಲಾಗಿರುವ ಉತ್ತರ ಪ್ರದೇಶದಲ್ಲಿ ಒಂದನೇ ಹಂತದ ಚುನಾವಣೆ ಮುಕ್ತಾಯವಾಗಿದೆ. ಫೆಬ್ರವರಿ 14ರ ಸೋಮವಾರ ಎರಡನೇ ಹಂತದ ಚುನಾವಣೆ ನಡೆಯಲಿದೆ.
ಈ ಬಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜಕೀಯ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ. ಕಟ್ಟರ್ ಹಿಂದುತ್ವವಾದಿಯ ಪರ ಪ್ರಚಾರಕ್ಕೆ ದೇಶದ ಹಲವು ಸಾಧು ಸಂತರು ಉತ್ತರಪ್ರದೇಶದಲ್ಲಿ ಮೊಕ್ಕಾಂ ಹೂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಮೂಲದ ನಾಗಾಸಾಧು ಕೂಡಾ ಸಿಎಂ ಯೋಗಿ ಪರ ಚುನಾವಣಾ ಪ್ರಚಾರ ಮಾಡಿದ್ದಾರೆ.
ಬಂಟ್ವಾಳ ಮೂಲದ ತಪೋನಿಧಿ ನಾಗಾಸಾಧು ಬಾಬಾ ಶ್ರೀ ವಿಠಲಗಿರಿ ಮಹಾರಾಜ್ ಅವರು ಕಳೆದ ಒಂದು ತಿಂಗಳಿನಿಂದ ಯೋಗಿ ಆದಿತ್ಯನಾಥ್ ಪ್ರತಿನಿಧಿಸುತ್ತಿರುವ ಗೋರಖ್ ಪುರ ನಗರ ಸೇರಿದಂತೆ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ.
ಈಗಾಗಲೇ ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಚುನಾವಣೆ ಮುಕ್ತಾಯವಾಗಿದೆ. ಫೆಬ್ರವರಿ 13ರ ತನಕ ಮನೆ ಮನೆ ಪ್ರಚಾರಕ್ಕೆ ಅವಕಾಶವಿದೆ. ಯೋಗಿಯ ಪರವಾಗಿ ಬಂಟ್ವಾಳ ಮೂಲದ ನಾಗಾಸಾಧು ವಿಠಲಗಿರಿ ಮಹಾರಾಜ ಚುನಾವಣಾ ಪ್ರಚಾರ ಮಾಡಿದ್ದು, ಮತದಾನ ಮಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಪೂರ್ವಾಶ್ರಮದಲ್ಲಿ ವಿಠಲ ಪೂಜಾರಿ
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಡಬೆಳ್ಳೂರು ನಿವಾಸಿಯಾಗಿರುವ ತಪೋನಿಧಿ ನಾಗಾಸಾಧು ಬಾಬಾ ಶ್ರೀ ವಿಠಲಗಿರಿ ಮಹಾರಾಜ್ ಪೂರ್ವಾಶ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದರು. ಬಡಬೆಳ್ಳೂರು ನಿವಾಸಿ ದಿ.ರುಕ್ಮಯ್ಯ ಪೂಜಾರಿಯವರ ಪುತ್ರರಾದ ಇವರ ಹೆಸರು ಪೂರ್ವಾಶ್ರಮದಲ್ಲಿ ವಿಠಲ ಪೂಜಾರಿ ಎಂಬುವುದಾಗಿದೆ. ಪದವೀಧರರಾಗಿರುವ ಇವರು ಬಾಲ್ಯದಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಪರ್ಕಕ್ಕೆ ಬಂದು ಪೂರ್ಣಾವಧಿ ಕಾರ್ಯಕರ್ತರಾಗಿ, ಮೈಸೂರಿನಲ್ಲಿ ಧರ್ಮ ಜಾಗರಣ ದ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದಾರೆ.

ನಾಗಾ ಸಾಧು ದೀಕ್ಷೆ ಪಡೆದಿದ್ದಾರೆ
ಆಧ್ಯಾತ್ಮದ ಮೇಲೆ ವಿಶೇಷ ನಂಬಿಕೆಯುಳ್ಳ ಇವರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಕಲಿಸಿದ ಶಿಸ್ತು, ದೇಶದ ಆಧ್ಯಾತ್ಮತೆ ಸಾಧುವಾಗಲು ಪ್ರೇರಣೆ ನೀಡಿದೆ. ಈ ಹಿನ್ನಲೆ ಹಲವು ವರ್ಷಗಳ ಯೋಗ ಸಾಧನೆಯ ಬಳಿಕ ಹರಿದ್ವಾರದ ಕುಂಭನಿಧಿ ತಪೋನಿಧಿ ಪಂಚಾಯತ್ನ ಆನಂದ ಅಖಾಡ ಪರಮಹಂಸ ಬಾಬಾ ಶ್ರೀ ಬನ್ಖಂಡಿ ಮಹಾರಾಜ್ ರಿಂದ ನಾಗಾ ಸಾಧುವಾಗಿ ಶಿಷ್ಯ ದೀಕ್ಷೆಯನ್ನು ಪಡೆದಿದ್ದಾರೆ. ವಿಠಲಗಿರಿ ಮಹಾರಾಜರವರು ಉತ್ತರ ಭಾರತದ ಬದರೀನಾಥ್, ಕೇದಾರನಾಥ್, ಹರಿದ್ವಾರ ಯಾತ್ರೆ ಮಾಡುತ್ತಾ ಅಲ್ಲೇ ಕುಠೀರದಲ್ಲಿ ನೆಲೆಸುತ್ತಾ ಆಧ್ಯಾತ್ಮ ಸಾಧನೆ ಮಾಡಿದ್ದಾರೆ.

ಹಲವು ವರ್ಷಗಳ ಆಧ್ಯಾತ್ನ ಸಾಧನೆ
ತಮ್ಮ ನಾಗಾಸಾಧು ಜೀವನದ ಬಗ್ಗೆ ಮಾತನಾಡಿದ್ದ ಶ್ರೀ ವಿಠಲಗಿರಿ ಮಹಾರಾಜ್ ಅವರು, "ಶಿಷ್ಯ ದೀಕ್ಷೆ ಪಡೆದ ಸಂದರ್ಭದಲ್ಲಿ ಹಲವು ವರ್ಷಗಳ ಆಧ್ಯಾತ್ಮದ ಸಾಧನೆಯ ಬಳಿಕ ಗುರುವಿನ ಎದುರು ನಗ್ನವಾಗಿ ನಿಲ್ಲಬೇಕು. ಆಗ ಕಿವಿಗೆ ಮಂತ್ರ ಹೇಳುವ ಗುರುಗಳು ದೇಹಕ್ಕೆ ಭಸ್ಮಧಾರಣೆ ಮಾಡಿ ದೀಕ್ಷೆ ನೀಡುತ್ತಾರೆ. ನಾಗಾಸಾಧು ನಿಯಮಗಳು ಬಹಳ ಕಠಿಣವಾಗಿದ್ದು, ಮುಂಜಾನೆ ಮೂರು ಗಂಟೆಯ ಬ್ರಾಹ್ಮೀ ಮೂಹೂರ್ತದ ವೇಳೆಗೆ ಗಂಗೆಯಲ್ಲಿ ಮಿಂದು ಸೂರ್ಯನಿಗೆ ಅರ್ಘ್ಯ ಸಲ್ಲಿಸಬೇಕು. ಗಂಗಾರತಿಯ ಬಳಿಕ ದೇವರಿಗೆ ನೈವೇದ್ಯ ಸಿದ್ಧಪಡಿಸಿ, ನೈವೇದ್ಯ ಸಮರ್ಪಣೆಯಾದ ಬಳಿಕ ನೀರಾಹರ ತೆಗೆದುಕೊಳ್ಳಬಹುದು. ಕುಠೀರದಲ್ಲಿರುವ ಅಗ್ನಿಕುಂಡ ದಿನದ 24 ಗಂಟೆಯೂ ಉರಿಯುತ್ತಲೇ ಇರಬೇಕು. ಅಗ್ನಿಕುಂಡ ದಲ್ಲಿ ಎಲ್ಲಾ ಶಕ್ತಿಯೂ ಅಡಕವಾಗಿರೋದರಿಂದ ಪಾವಿತ್ರ್ಯತೆಯಿಂದ ನೋಡಿಕೊಳ್ಳಬೇಕು. ಕುಠೀರಕ್ಕೆ ಬಂದ ಎಲ್ಲಾ ನಾಗಾಸಾಧುಗಳನ್ನು ಅತಿಥಿ ದೇವೋಭವ ಎಂಬಂತೆ ಸತ್ಕರಿಸಬೇಕೆಂದು" ಹೇಳಿದ್ದಾರೆ.

ಸಂತನಾಗಿ ಯೋಗಿ ಪರ ಪ್ರಚಾರ
ಇನ್ನು ಉತ್ತರಪ್ರದೇಶದ ಚುನಾವಣಾ ಪ್ರಚಾರದ ಬಗ್ಗೆ ಮಾತನಾಡಿರುವ ಶ್ರೀ ವಿಠಲ ಗಿರಿ ಮಾಹಾರಾಜ ಅವರು, "ನಾನು ಕರ್ನಾಟಕದ ಪರವಾಗಿ ಸಂತನಾಗಿ ಯೋಗಿ ಪರ ಪ್ರಚಾರ ಮಾಡಿದ್ದೇನೆ. ಕಳೆದ ಒಂದು ತಿಂಗಳಿನಿಂದ ಉತ್ತರ ಪ್ರದೇಶದ ಹಲವು ಜಿಲ್ಲೆಗಳನ್ನು ಸಂಪರ್ಕಿಸಿ ಪ್ರಚಾರ ಕಾರ್ಯ ಮಾಡಿದ್ದೇನೆ" ಎಂದು ಹೇಳಿದ್ದಾರೆ.












Click it and Unblock the Notifications