ಅನ್ಲಾಕ್; ಮೊದಲ ದಿನವೇ ಧರ್ಮಸ್ಥಳದಲ್ಲಿ ಭಕ್ತಜನಸಾಗರ
ಮಂಗಳೂರು, ಜುಲೈ 05; ಅನ್ಲಾಕ್ ಆದ ಮೊದಲ ದಿನವೇ ಶ್ರೀ ಕ್ಷೇತ್ರ ಧರ್ಮಸ್ಥಳದತ್ತ ಭಕ್ತ ಸಾಗರ ಹರಿದುಬಂದಿದೆ. ರಾಜ್ಯ ಸರ್ಕಾರ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ದರ್ಶನಕ್ಕೆ ಸೋಮವಾರದಿಂದ ಅವಕಾಶ ಮಾಡಿಕೊಟ್ಟಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳದತ್ತ ಆಗಮಿಸಿದ್ದಾರೆ. ಪ್ರಾತಃ ಕಾಲದಲ್ಲೇ ನೇತ್ರಾವತಿ ಸ್ನಾನಘಟ್ಟದಲ್ಲಿ ತೀರ್ಥ ಸ್ನಾನ ಮಾಡಿ ಭಕ್ತರು ಮಂಜುನಾಥನ ದರ್ಶನ ಪಡೆಯುತ್ತಿದ್ದಾರೆ.
ಬೆಳಗ್ಗಿನಿಂದಲೇ ಭಕ್ತರು ಸರತಿಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದಿದ್ದು, ದೇವಸ್ಥಾನದೊಳಗೆ ಭಕ್ತರು ಪ್ರವೇಶಿಸುವಾಗ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಬೇಕೆಂದು ಕ್ಷೇತ್ರದ ಆಡಳಿತ ಮಂಡಳಿ ಸೂಚಿಸಿದೆ.

ಧರ್ಮಸ್ಥಳದಲ್ಲಿ ಎಲ್ಲಾ ಸೇವೆಗಳೂ ಆರಂಭಗೊಂಡಿದ್ದು, ಅನ್ನ ಪ್ರಸಾದವೂ ನಿತ್ಯ ನಿರಂತರವಾಗಿ ನಡೆಯಲಿದೆ. ಆಟೋಮ್ಯಾಟಿಕ್ ಟೆಂಪರೇಚರ್ ಚೆಕ್ ಮಿಷನ್ನಲ್ಲಿ ಭಕ್ತರ ದೇಹದ ಉಷ್ಣಾಂಶ ತಪಾಸಣೆ ಮಾಡುವ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ದೇಹದ ಉಷ್ಣಾಂಶ ಹೆಚ್ಚಿದ್ದರೆ ಮೆಷಿನ್ನಲ್ಲಿ ಕೆಂಪು ದೀಪ ಉರಿದು ಬೀಪ್ ಸೌಂಡ್ ಬರುತ್ತದೆ.
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಕ್ಷೇತ್ರದ ಪ್ರಮುಖ ಸೇವೆಗಳಾದ ಆಶ್ಲೇಷ ಹಾಗೂ ಸರ್ಪಸಂಸ್ಕಾರ ಸೇವೆಗಳಿಗೆ ಅವಕಾಶವಿಲ್ಲ.
ಕೇವಲ ಮಂಗಳಾರತಿ ಸೇವೆಗೆ ಮಾತ್ರ ಅವಕಾಶವಿದೆ. ಭಕ್ತಾಧಿಗಳ ಅನುಕೂಲಕ್ಕಾಗಿ ಪ್ರತಿ 15 ನಿಮಿಷಕ್ಕೊಮ್ಮೆ ದೇವರಿಗೆ ಮಂಗಳಾರತಿ ಸೇವೆ ನಡೆಯಲಿದ್ದು, ಅನ್ನಸಂತರ್ಪಣೆಗೂ ಸಹ ಅವಕಾಶವನ್ನು ಕೊಟ್ಟಿಲ್ಲ.
ಇನ್ನುಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ದೇವಸ್ಥಾನಗಳಲ್ಲೂ ಭಕ್ತರಿಗೆ ಪ್ರವೇಶ ಮುಕ್ತವಾಗಿದ್ದು, ಕೊರೊನಾ ನಿಯಮದ ಪ್ರಕಾರ ಅವಕಾಶ ನೀಡುತ್ತಿದೆ.












Click it and Unblock the Notifications