ಮಂಗಳೂರು ಶೂಟೌಟ್ ಹಿಂದೆ ಭೂಗತ ಪಾತಕಿ ರವಿ ಪೂಜಾರಿ?
ಮಂಗಳೂರು, ಡಿಸೆಂಬರ್ 9: ಮಂಗಳೂರಿನ ಹೃದಯ ಭಾಗದಲ್ಲಿರುವ ಕಾರ್ ಸ್ಟ್ರೀಟ್ ನಲ್ಲಿ ಶುಕ್ರವಾರ ರಾತ್ರಿ ಮೊಳಗಿದ ಗುಂಡಿನ ಸದ್ದಿನಿಂದ ಇಲ್ಲಿನ ಜನರು ಬೆಚ್ಚಿ ಬಿದ್ದಿದ್ದಾರೆ.
ನಗರದ ಕಾರ್ ಸ್ಟ್ರೀಟ್ ರಥ ಬೀದಿಯ ಎಂ. ಸಂಜೀವ ಶೆಟ್ಟಿ ಸಿಲ್ಕ್ ಅಂಡ್ ಸಾರೀಸ್ ಬಟ್ಟೆ ಅಂಗಡಿಯ ಮೆಲೆ ನಡೆದ ಶೂಟೌಟ್ ಪ್ರಕರಣದಲ್ಲಿ ಭೂಗತ ಪಾತಕಿ ರವಿ ಪೂಜಾರಿ ಹಾಗು ಕಲಿಯೋಗಿಶ್ ಎನ್ನುವರ ಹೆಸರು ಕೇಳಿ ಬಂದಿವೆ. ಹಫ್ತಾಕ್ಕಾಗಿ ಭೂಗತ ಪಾತಕಿಗಳು ಈ ಶೂಟೌಟ್ ನಡೆಸಿದ್ದಾರೆ ಎಂದು ಪೋಲಿಸ್ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಪ್ರಮುಖವಾಗಿ ಭೂಗತ ದೊರೆ ರವಿ ಪೂಜಾರಿ ಹಾಗು ಕಲಿಯೋಗಿಶ ಅವರ ಹೆಸರಗಳು ಕೇಳಿಬಂದಿವೆ. ರಥ ಬೀದಿಯ ಎಂ .ಸಂಜೀವ ಶೆಟ್ಟಿ ಸಿಲ್ಕ್ ಅಂಡ್ ಸಾರೀಸ್ ಬಟ್ಟೆ ಅಂಗಡಿಯ ಮೇಲೆ ಶುಕ್ರವಾರ ರಾತ್ರಿ ಬಂದ ದುಷ್ಕರ್ಮಿಗಳಿಬ್ಬರು ಗುಂಡು ಹಾರಿಸಿ ಪರಾರಿಯಾಗಿದ್ದರು.
ಮಹಾಲಿಂಗ ನಾಯ್ಕ್ ಅವರ ತೊಡೆಗೆ ಹೊಕಿದ್ದ ಗುಂಡನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದ್ದು, ಚೇತರಿಸಿ ಕೊಳ್ಳುತ್ತಿದ್ದಾರೆ. ಸ್ಥಳಕ್ಕೆ ಹಿರಿಯ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.

ಹಫ್ತಾಕ್ಕಾಗಿ ದುಷ್ಕರ್ಮಿಗಳಿ ಬೆದರಿಕೆ ಕರೆಗಳು
ಮೂಲಗಳ ಪ್ರಕಾರ ಕಳೆದ ಅನೇಕ ಬಾರಿ ಸಂಜೀವ ಶೆಟ್ಟಿ ಬಟ್ಟೆ ಅಂಗಡಿ ಮಾಲೀಕರಿಗೆ ಭೂಗತ ದೊರೆಯಿಂದ ಹಫ್ತಾ ಬೇಡಿಕೆಯನ್ನಿಟ್ಟು ನಿರಂತರವಾಗಿ ಕರೆಗಳು ಬರುತ್ತಿದ್ದುವು ಎನ್ನಲಾಗಿದೆ. ಪುತ್ತೂರಿನಲ್ಲಿ ಹಾಗು ಮಂಗಳೂರಿನ ರಥ ಬೀದಿಯಲ್ಲಿ ಸಂಜೀವ ಶೆಟ್ಟಿ ಅವರು ಬಟ್ಟೆ ಅಂಗಡಿಯ ಬ್ರಾಂಚ್ ತೆರೆದಾಗಲೂ ಈ ಹಫ್ತಾ ಬೇಡಿಕೆಯ ಕರೆಗಳು ಬಂದಿದ್ದುವು ಎಂದು ಹೇಳಲಾಗಿದೆ.

ಗಿರಾಕಿಗಳ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳು
ಶುಕ್ರವಾರ ರಾತ್ರಿ ಸುಮಾರು 8.30ಕ್ಕೆ ಎಂ. ಸಂಜೀವ ಶೆಟ್ಟಿ ಸಿಲ್ಕ್ ಅಂಡ್ ಸಾರೀಸ್ ಬಟ್ಟೆ ಅಂಗಡಿ ಮುಚ್ಚುವ ವೇಳೆ ದುಷ್ಕರ್ಮಿಗಳು ನಡೆದುಕೊಂಡು ಗಿರಾಕಿಗಳ ಸೋಗಿನಲ್ಲಿ ಬಂದು ಬಟ್ಟೆ ಬೇಕು ಎಂದಿದ್ದಾರೆ. ಆಗ ಅಂಗಡಿ ಸಿಬಂದಿ ಈಗ ಅಂಗಡಿ ಮುಚ್ಚುವ ಸಮಯ ಇವತ್ತು ಆಗುವುದಿಲ್ಲ. ನಾಳೆ ಬನ್ನಿ ಎಂದಿದ್ದಾರೆ. ಆ ಸಂದರ್ಭದಲ್ಲಿ ಹೊರ ಹೋಗುತ್ತಿದ್ದಂತೆ ದುಷ್ಕರ್ಮಿಗಳು ಬಟ್ಟೆ ಅಂಗಡಿ ನೌಕರ ಮಹಾಲಿಂಗ ಅವರ ಕಾಲಿಗೆ ಶೂಟ್ ಮಾಡಿ ಪರಾರಿಯಾಗಿದ್ದರು.

ಕಿನ್ನಿಗೋಳಿಯ ರಾಜಶ್ರೀ ಜ್ಯುವೆಲ್ಲರ್ಸ್ ಮಾಲೀಕನಿಗೂ ಬೆದರಿಕೆ
ಮಂಗಳೂರು ಹೊರವಲಯದ ಕಿನ್ನಿಗೋಳಿಯ ರಾಜಶ್ರೀ ಜ್ಯುವೆಲ್ಲರ್ಸ್ ಮಾಲೀಕರಿಗೂ ದುಷ್ಕರ್ಮಿಗಳು ಗುಂಡಿನ ಮೂಲಕ ಬೆದರಿಸಲು ಯತ್ನಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಎರಡು ದಿನಗಳಹಿಂದೆ ಕಿನ್ನಿಗೋಳಿಯ ರಾಜಶ್ರೀ ಜ್ಯುವೆಲ್ಲರ್ಸ್ ಗೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪಿಸ್ತೂಲ್ ನ ಸಜೀವ ಗುಂಡನ್ನು ಅಂಗಡಿಯೊಳಗೆ ಎಸೆದು ಪರಾರಿಯಾಗಿದ್ದರು. ಅಷ್ಟೇ ಅಲ್ಲದೇ ಜ್ಯುವೆಲ್ಲರ್ಸ್ ಮಾಲೀಕನಿಗೆ ವಿದೇಶದಿಂದ ದೂರವಾಣಿ ಕರೆಗಳು ಬಂದಿದ್ದರೂ ಅದನ್ನು ಅವರು ಸ್ವೀಕರಿಸಿರಲಿಲ್ಲ. ಭೂಗತ ಪಾತಕಿ ಕಲಿಯೋಗಿಶ್ ಹೆಸರಿನಲ್ಲಿ ಮೊಬೈಲ್ ಗೆ ಕರೆ ಸ್ವೀಕರಿಸಲು ಮೆಸೇಜ್ ಕಳುಹಿಸಲಾಗಿದೆ.

ರಿಯಲ್ ಎಸ್ಟೇಟ್ ಉದ್ಯಮಿಗಳೇ ಟಾರ್ಗೆಟ್
ಕಳೆದ 3 ವರ್ಷಗಳಿಂದ ತಣ್ಣಗಿದ್ದ ಭೂಗತ ಜಗತ್ತು ಮತ್ತೇ ಸಕ್ರೀಯಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ಭೂಗತ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಈ ಹಿಂದೆ ಭೂಗತ ದೊರೆಗಳು ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಬೆದರಿಸಿ ಹಣ ಕೀಳುತ್ತಿದ್ದರು. ಆದರೆ ರಿಯಲ್ ಎಸ್ಟೇಟ್ ಉದ್ಯಮ ನೆಲಕ್ಕಚ್ಚಿದ ಪರಿಣಾಮ ಭೂಗತ ಪಾತಕಿಗಳು ಇತರ ಉದ್ಯಮಗಳತ್ತ ಕಣ್ಣು ಹಾಯಿಸಿದ್ದಾರೆ. ಈ ಭೂಗತ ಪಾತಕಿಗಳ ಬೆನ್ನಿಂದೆ ಕೆಲ ಪೊಲೀಸರು ಶಾಮೀಲಾಗಿದ್ದಾರೆ ಎಂಬ ಮಾತು ಕೇಳಿಬಂದಿವೆ.












Click it and Unblock the Notifications