ತಾಕತ್ತಿದ್ದರೆ ಪ್ರಕಾಶ್ ರೈ ಅವರನ್ನು ಬರದಂತೆ ತಡೆಯಿರಿ: ಖಾದರ್ ಸವಾಲ್
ಮಂಗಳೂರು, ಡಿಸೆಂಬರ್ 22: ಮಂಗಳೂರಿನಲ್ಲಿ ಇಂದು ಕರಾವಳಿ ಉತ್ಸವಕ್ಕೆ ಖ್ಯಾತ ಚಿತ್ರನಟ ಪ್ರಕಾಶ್ ರೈ ಚಾಲನೆ ನೀಡಲಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಾಶ್ ರೈ ಅವರ ವಿರುದ್ಧ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, "ಕರಾವಳಿ ಉತ್ಸವ ಕಾರ್ಯಕ್ರಮಕ್ಕೆ ಪ್ರಕಾಶ ರೈ ಬಂದೇ ಬರುತ್ತಾರೆ. ವಿರೋಧ ವ್ಯಕ್ತಪಡಿಸುವವರು ತಾಕತ್ತಿದ್ದರೆ ನಿಲ್ಲಿಸಲಿ," ಎಂದು ಸವಾಲು ಹಾಕಿದ್ದಾರೆ .
"ಪ್ರಕಾಶ್ ರೈ ಈ ನಾಡಿನ ಮಣ್ಣಿನ ಮಗ. ಅವರು ಬರಬಾರದು ಅನ್ನಲು ಇವರ್ಯಾರು?" ಎಂದು ತೀಷ್ಣವಾಗಿ ಖಾದರ್ ಪ್ರತಿಕ್ರಿಯಿಸಿದರು. "ಇವರಿಗೆ ಬೇಕಾದಂತೆ ಮಾತನಾಡುವವರು ಮಾತ್ರ ಇಲ್ಲಿಗೆ ಬರಬೇಕಾ?" ಎಂದು ಅವರು ಪ್ರಶ್ನಿಸಿದರು.

ಲವ್ ಜಿಹಾದ್ ವಿರುದ್ದ ಹಿಂದೂ ಸಂಘಟನೆಗಳಿಂದ ಟಾಸ್ಕ್ ಫೋರ್ಸ್ ರಚನೆ ಕುರಿತು ಮಾತನಾಡಿದ ಅವರು, "ಹಿಂದೂ ಟಾಸ್ಕ್ ಫೋರ್ಸ್ ರಚನೆ ವಿಷಯ ಪೊಲೀಸ್ ಇಲಾಖೆ ಗಮನಕ್ಕೆ ಬಂದಿದೆ. ಚುನಾವಣೆ ಹತ್ತಿರ ಬಂದಾಗ ಒಂದೊಂದು ಫೋರ್ಸ್ ಗಳು ಹುಟ್ಟಿಕೊಳ್ಳುತ್ತದೆ. ಇದೆಲ್ಲಾ ಚುನಾವಣೆಯ ಗಿಮಿಕ್," ಎಂದು ಕಿಡಿಕಾರಿದರು.
ಸಮಾಜದ ನೆಮ್ಮದಿಗೆ ಅಡ್ಡಿಯುಂಟಾದಲ್ಲಿ ಅದರ ವಿರುದ್ಧ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.
"ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ರೈತ ಪರ ಯೋಜನೆಗಳನ್ನು ಜಾರಿ ಮಾಡಿದೆ. ಹೀಗಾಗಿ ರೈತರು ನೆಮ್ಮದಿ ಜೀವನ ನಡೆಸುತ್ತಿದ್ದಾರೆ," ಎಂದು ಹೇಳಿದ ಅವರು, "ಈವರೆಗೆ ರೈತರು ರಾಜ್ಯದಲ್ಲಿ ಎಲ್ಲೂ ಪ್ರತಿಭಟನೆ ನಡೆಸಿಲ್ಲ," ಎಂದು ತಿಳಿಸಿದರು.
"ಸರ್ಕಾರ ನೇರವಾಗಿ ರೈತರಿಂದ ರಾಗಿ ಖರೀದಿ ಮಾಡುತ್ತಿದೆ. ರಾಗಿಗೆ ಮಾರುಕಟ್ಟೆ ದರ 1,600 ರೂಪಾಯಿ ಇದೆ. ಆದರೆ ರಾಜ್ಯ ಸರಕಾರ ಕ್ವಿಂಟಾಲ್ ಗೆ 2,300 ರೂಪಾಯಿ ನೀಡಿ ರೈತರಿಂದ ನೇರ ರಾಗಿ ಖರೀದಿ ಮಾಡುತ್ತಿದೆ," ಎಂದು ಅವರು ಮಾಹಿತಿ ನೀಡಿದರು.












Click it and Unblock the Notifications