ಮಂಗಳೂರು : 'ಮಿಸ್ ಫೈರ್' ಸೃಷ್ಟಿಸಿತು ಆತಂಕದ ಅಲೆ
ಮಂಗಳೂರು ನಗರದ ಹೃದಯ ಭಾಗದಲ್ಲಿರುವ ನ್ಯೂ ಬಿಜಯ್ ರಸ್ತೆಯಲ್ಲಿರುವ ದಕ್ಷಿಣ ಕನ್ನಡದ ಪ್ರತಿಷ್ಠಿತ ಭಾರತಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಕಚೇರಿ ಮೇಲೆ ದುಷ್ಕರ್ಮಿಗಳು ಬಂದಿದ್ದಾರೆ. ಅವರ ಉದ್ದೇಶ ಬೆದರಿಕೆ ಒಡ್ಡುವುದಾಗಿತ್ತು. ಆದರೆ, ಆಕಸ್ಮಿಕವಾಗಿ ಗುಂಡು ಹಾರಿದ್ದರಿಂದ ಗಾಬರಿಗೊಂಡಿದ್ದಾರೆ.
ಆದರೆ ಅದೃಷ್ಟವಶಾತ್ ಈ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಬೆಳಗ್ಗೆ ಮೋಟಾರ್ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಭಾರತಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಕಚೇರಿ ಬಳಿ ಬಂದು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಕರಾವಳಿ ತೀರದಲ್ಲಿ ಉದ್ಯಮಿಗಳು ಮತ್ತು ಬಿಲ್ಡರ್ಸ್ ಗಳಿಗೆ ಬೆದರಿಕೆ ಕರೆ ಬರುವುದು, ನಂತರ ಗುಂಡಿನ ದಾಳಿಯಂತಹ ಘಟನೆಗಳು ನಡೆಯುತ್ತಿರುವುದರಿಂದ ಕರಾವಳಿ ಭಾಗದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಇಂದು ನಡೆದ ಗುಂಡಿನ ದಾಳಿಯಲ್ಲಿ ಸ್ಥಳೀಯರ ಸಹಕಾರವಿದೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳದಲ್ಲಿ ಎರಡು ಬುಲೆಟ್ ಗಳು ಸಿಕ್ಕಿದೆ. ಸಂಸ್ಥೆ ಮಾಲೀಕ ಲೋಕನಾಥ್ ಶೆಟ್ಟಿ ಅವರಿಗೆ ಈ ಮುಂಚೆ ಬೆದರಿಕೆ ಕರೆಗಳು ಬಂದಿದ್ದರೂ ಪೊಲೀಸರಲ್ಲಿ ದೂರು ನೀಡಿಲ್ಲ ಎಂದು ತಿಳಿದು ಬಂದಿದೆ. ಪೊಲೀಸ್ ಕಮೀಷನರ್ ಹಿತೇಂದ್ರ ಸೇರಿದಂತೆ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಡಿಸೆಂಬರ್ 21 ರಂದು ಬಿಜೆಪಿ ಮುಖಂಡ ಸಹಕಾರಿ ಕ್ಷೇತ್ರದ ಧುರೀಣ ಆರ್.ಎನ್.ನಾಯಕ್ ಅವರನ್ನು ದುಷ್ಕರ್ಮಿಗಳು ಅಂಕೋಲದಲ್ಲಿ ಹತ್ಯೆ ನಡೆಸಿದ್ದರು. 2013ರ ಆಗಸ್ಟ್ ತಿಂಗಳಂದು ಉದ್ಯಮಿ ವಿಜೇಂದ್ರ ಭಟ್ ಮೇಲೆ ರವಿ ಪೂಜಾರಿ ಗ್ಯಾಂಗ್ ನವರು ಎಂದು ಹೇಳಲಾದ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದರು.