ಕ್ರೀಡೋತ್ಸವಕ್ಕೆ ಬಂದ ಇಬ್ಬರು ಸುರತ್ಕಲ್ ನಲ್ಲಿ ಸಮುದ್ರಪಾಲು
ಮಂಗಳೂರು, ಜುಲೈ 8: ಕೆಸರುಗದ್ದೆ ಕ್ರೀಡೋತ್ಸವಕ್ಕೆ ಬಂದವರು ಸಮುದ್ರದಲ್ಲಿ ನೀರು ಪಾಲಾದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಸಮೀಪದ ಸಸಿಹಿತ್ಲು ಎಂಬಲ್ಲಿ ಜುಲೈ 7ರ ಭಾನುವಾರ ನಡೆದಿದೆ. ಸಸಿಹಿತ್ಲು ಅಗ್ಗಿದಕಳಿಯದಲ್ಲಿ ಭಾನುವಾರ ನಡೆದ ಕೆಸರುಗದ್ದೆ ಕ್ರೀಡೋತ್ಸವಕ್ಕೆ ಬಂದ ಬಜಪೆ ಯುವಟೈಗರ್ ತಂಡದ 7 ಜನ ಕ್ರೀಡಾಳುಗಳು ಒಂದು ಸುತ್ತಿನ ಕ್ರೀಡೋತ್ಸವ ಮುಗಿಸಿ ಅದರಲ್ಲಿ 4 ಮಂದಿ ಸ್ನಾನಕ್ಕೆಂದು ಸಮುದ್ರಕ್ಕಿಳಿದಿದ್ದರು.
ಈ ಸಂದರ್ಭದಲ್ಲಿ ಕಾವೂರು ನಿವಾಸಿ ಗುರುಪ್ರಸಾದ್, ಬಜಪೆ ಸಿದ್ದಾರ್ಥನಗರದ ನಿವಾಸಿ ಸುಚಿತ್ ನೀರು ಪಾಲಾಗಿದ್ದು, ಸೃಜನ್ ಮತ್ತು ಕಾರ್ತಿಕ್ ಅವರನ್ನು ಸ್ಥಳೀಯರು ಪಾರು ಮಾಡಿ ಖಾಸಗಿ ಅಸ್ಪತ್ರೆಗೆ ದಾಖಲಿಸಿದ್ದಾರೆ.

ಏಕಾಏಕಿ ನಾಲ್ಕು ಮಂದಿ ಸಮುದ್ರದ ಅಲೆಯಲ್ಲಿ ಸಿಲುಕಿಕೊಂಡಾಗ ಸ್ಥಳೀಯರು ಇಬ್ಬರನ್ನು ರಕ್ಷಿಸಲು ಸಾಧ್ಯವಾಯಿತಾದರೂ ಇನ್ನಿಬ್ಬರು ಕಡಲಿನ ಅಬ್ಬರದ ಸೆಳೆತಕ್ಕೊಳಗಾದರು. ಘಟನೆ ನಡೆದ ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರು. ಸುರತ್ಕಲ್ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ.












Click it and Unblock the Notifications