ಮಂಗಳೂರು ನಗರಕ್ಕೆ ಚೀನಾ ಕಂಪನಿಯ ಸಿಸಿ ಕ್ಯಾಮೆರಾಗಳೇ ಕಂಟಕ, ಕಾಂಗ್ರೆಸ್ನಿಂದ ಆರೋಪ
ಮಂಗಳೂರು, ಡಿಸೆಂಬರ್, 21: ಮಂಗಳೂರು ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಳವಡಿಕೆಯಾಗಿರುವ ಸಿಸಿಟಿವಿ ಕ್ಯಾಮರಾಗಳಿಂದಲೇ ಭದ್ರತಾ ಆತಂಕ ಎದುರಾಗುತ್ತಿದೆ ಎಂಬ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ನಗರದ ಭದ್ರತೆಗೆಂದೇ ಅಳವಡಿಕೆ ಆಗಿರುವ ಸಿಸಿ ಕ್ಯಾಮೆರಾಗಳೇ ಸೆಕ್ಯೂರಿಟಿಗೆ ಅಡ್ಡಿ ಮಾಡುತ್ತಿದೆ ಎಂಬ ಆರೋಪವು ಜನತೆಯನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಇದರಿಂದ ಜನರ ವೈಯಕ್ತಿಕ ದತ್ತಾಂಶಗಳು ಕಳುವು ಆಗುತ್ತಿವೆ. ಇದಕ್ಕೆ ಮುಖ್ಯ ಕಾರಣ ಬಿಜೆಪಿಯೇ ಆಗಿದೆ ಎಂದು ಕಾಂಗ್ರೆಸ್ನ ಆರೋಪವಾಗಿದೆ.
ಮಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆ ವಿರುದ್ಧ ಭದ್ರತಾಲೋಪದ ಅಪಸ್ವರ ಕೇಳಿ ಬಂದಿದೆ. ಚೀನಾ ಮೂಲದ ಕಂಪನಿಯಾದ 'ಹಿಕ್ವಿಷನ್' ಬ್ರ್ಯಾಂಡ್ ಹಾಗೂ 'ದ ಹುವಾ' ಸಿಸಿಟಿವಿ ಕ್ಯಾಮರಾಗಳನ್ನು ಮಂಗಳೂರು ನಗರದಲ್ಲಿ ಕಣ್ಗಾವಲಾಗಿ ಅಳವಡಿಕೆಯಾಗಿದೆ. ಈ ಕಂಪನಿಗೆ ಚೀನಾ ಸರ್ಕಾರವೇ ಪಾಲುದಾರ ಎನ್ನಲಾಗುತ್ತಿದೆ. ಈಗಾಗಲೇ ಅಮೆರಿಕಾ, ಯುಕೆ ಸೇರಿದಂತೆ ಹಲವಾರು ದೇಶಗಳಲ್ಲಿ ಹಿಕ್ವಿಷನ್ ಕಂಪನಿ ಕ್ಯಾಮೆರಾಗಳನ್ನು ನಿಷೇಧಿಸಲಾಗಿದೆ. ವೈಯಕ್ತಿಕ ದತ್ತಾಂಶಗಳ ಕಳವು, ಗುಪ್ತ ಮಾಹಿತಿಗಳ ಕಳವು ಹಿನ್ನೆಲೆಯಲ್ಲಿ ದೇಶದ ಆಂತರಿಕ ಭದ್ರತೆಗೆ ಅಪಾಯವನ್ನು ತಂದೊಡ್ಡುತ್ತಿದೆ ಎಂದು ಆ ದೇಶಗಳು ಈ ಸಿಸಿ ಕ್ಯಾಮೆರಾಗಳಿಗೆ ನಿರ್ಬಂಧ ವಿಧಿಸಿತ್ತು.
ಕೈ ಕಾರ್ಯಕರ್ತರಿಂದ ಸಿಟಿ ರವಿ ಮನೆಗೆ ಮುತ್ತಿಗೆ ಯತ್ನ: ಬಿಗುವಿನ ವಾತಾವರಣ
ಜನರ ವೈಯಕ್ತಿಕ ದತ್ತಾಂಶಗಳ ಕಳವು, ಆರೋಪ
ಭಾರತದಲ್ಲೂ ಸರ್ಕಾರಿ ಟೆಂಡರ್ಗಳಲ್ಲಿ ಹಿಕ್ವಿಷನ್ ಬ್ರ್ಯಾಂಡ್ ಸಿಸಿ ಕ್ಯಾಮೆರಾಗಳಿಗೆ ನಿರ್ಬಂಧ ವಿಧಿಸಿದೆ. ಭಾರತದ ಆಂತರಿಕ ಭದ್ರತೆಗೆ ಚೀನಾದಿಂದ ಅಪಾಯ ಇದ್ದರೂ, ಸರ್ಕಾರದಿಂದಲೇ ಕಮಾಂಡ್ ಕಂಟ್ರೋಲ್ ಸೆಂಟರ್ ಯೋಜನೆಯಡಿ ಚೀನಾ ಬ್ರಾಂಡ್ಗಳ ಸಿಸಿಟಿವಿ ಕ್ಯಾಮೆರಾ ಬಳಕೆಯಾಗುತ್ತಿದೆ. ಮಂಗಳೂರು ಮನಪಾದಿಂದಲೇ ಚೀನಾ ವಸ್ತುಗಳಿಗೆ ಮಣೆ ಹಾಕಲಾಗಿದೆ. ಕಮಿಷನ್ ಆಸೆಗೆ ಚೀನಾ ವಸ್ತುಗಳನ್ನೇ ಸ್ಮಾರ್ಟ್ ಸಿಟಿ ಯೋಜನೆಗೆ ಬಳಕೆ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಬಿಜೆಪಿ ಆಡಳಿತದ ವಿರುದ್ಧ ಕಾಂಗ್ರೆಸ್ ಕಿಡಿ
ಮೊದಲ ಹಂತದಲ್ಲಿ 23 ಕೋಟಿ ರೂಪಾಯಿ ಸ್ಮಾರ್ಟ್ ಸಿಟಿ ಕಮಾಂಡ್ ಕಂಟ್ರೋಲ್ ಸೆಂಟರ್ ಯೋಜನೆ ಪೂರ್ಣಗೊಂಡಿದೆ. 2ನೇ ಹಂತದಲ್ಲಿ 32 ಕೋಟಿ ರೂಪಾಯಿ ವೆಚ್ಚದ ಯೋಜನೆ ಜಾರಿಗೆ ಸಿದ್ಧತೆಯಾಗಿದೆ. ಮತ್ತೆ ಚೀನಾ ಮೂಲದ ಹಿಕ್ವಿಷನ್ ಮತ್ತು ದ ಹುವಾ ಬ್ರ್ಯಾಂಡ್ ಸಿಸಿಟಿವಿ ಕ್ಯಾಮೆರಾ ಬಳಕೆಗೆ ಪ್ಲ್ಯಾನ್ ಮಾಡಲಾಗಿದೆ.
ಬಿಜೆಪಿಯಿಂದ ನಗರದ ಭದ್ರತೆಗೆ ಲೋಪ
ಈ ರೀತಿ ಭದ್ರತೆಗೆ ಲೋಪ ಎಸಗುತ್ತಿರುವ ಮಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತದ ವಿರುದ್ಧ ಕಾಂಗ್ರೆಸ್ ಕಿಡಿ ಕಾರುತ್ತಿದೆ. ಕಮಿಷನ್ ಆಸೆಗೆ ನಗರದ ಭದ್ರತೆ ವಿಚಾರದಲ್ಲಿ ರಾಜಿ ಮಾಡಿದ್ದಲ್ಲದೆ ಕಡಿಮೆ ದರದ ಚೀನಾ ಸಿಸಿ ಕ್ಯಾಮೆರಾ ಅಳವಡಿಸಿದೆ. ಈ ಮೂಲಕ ಬಿಜೆಪಿ ಭಾರಿ ಗೋಲ್ಮಾಲ್ ಮಾಡಿದೆ ಎಂದು ಆರೋಪ ಮಾಡಿದೆ.
ಸಿಸಿ ಕ್ಯಾಮೆರಾದ ಬಗ್ಗೆ ವಿನಯ್ರಾಜ್ ಹೇಳಿದ್ದೇನು?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಎ.ಸಿ ವಿನಯ್ರಾಜ್, ಹಣದಾಸೆಗೆ ಮಂಗಳೂರು ನಗರದ ಭದ್ರತೆಯನ್ನು ಮಾರಾಟ ಮಾಡಲಾಗುತ್ತಿದೆ. ಚೀನಾ ಸರ್ಕಾರದ ಅಧೀಕೃತ ಪಾಲುದಾರ ಕಂಪನಿಯ ಸಿಸಿ ಕ್ಯಾಮೆರಾವನ್ನು ನಗರದಲ್ಲಿ ಹಾಕಲಾಗಿದೆ. ಈ ಕ್ಯಾಮೆರಾದ ಕಂಪನಿ ಈಗಾಗಲೇ ಬ್ಲ್ಯಾಕ್ ಲೀಸ್ಟ್ನಲ್ಲಿದೆ. ಭಾರತೀಯ ನೌಕಾದಳ ಕೂಡ ಈ ಕಂಪನಿಯ ಸಿಸಿ ಕ್ಯಾಮೆರಾವನ್ನು ಅಳವಡಿಸಲು ಅಪೇಕ್ಷೆ ವ್ಯಕ್ತಪಡಿಸಿದೆ. ಪಾಲಿಕೆ ಮತ್ತು ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಚೀನಾ ಕಂಪನಿಯ ಸಿಸಿ ಕ್ಯಾಮೆರಾಗಳನ್ನು ತೆಗೆಯಬೇಕು ಅಂತಾ ಆಗ್ರಹಿಸಿದರು.