'ಮಂಗಳೂರು ಚಲೋ' ಹಿನ್ನಲೆ, ದಕ್ಷಿಣ ಕನ್ನಡದಾದ್ಯಂತ ಬಿಗಿ ಭದ್ರತೆ
ಮಂಗಳೂರು, ಸೆಪ್ಟೆಂಬರ್ 5: ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ 'ಮಂಗಳೂರು ಚಲೋ' ಬೈಕ್ ರ್ಯಾಲಿ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ಪಿಎಫ್ಐ ಮತ್ತು ಎಸ್'ಡಿಪಿಐ, ಕೆಎಫ್'ಡಿ ಮತ್ತಿತರ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಇಂದು 'ಮಂಗಳೂರು ಚಲೋ' ಜಾಥಾ ಆರಂಭಿಸಿದೆ. ಜಾಥಾಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ರಾಜ್ಯ ಸರಕಾರ ಇಂದು ದಿಢೀರ್ ಬ್ರೇಕ್ ಹಾಕಿದೆ.
ಜತೆಗೆ ಮಂಗಳೂರಿನಲ್ಲಿಯೂ ರ್ಯಾಲಿ ನಡೆಸಲು ಅನುಮತಿ ನಿರಾಕರಿಸಲಾಗಿದೆ. ಹೀಗಿದ್ದೂ ರ್ಯಾಲಿ ನಡೆಸಿಯೇ ನಡೆಸುತ್ತೇವೆ. ಮಂಗಳೂರಿನಲ್ಲಿ ಸೆಪ್ಟೆಂಬರ್ 7ರಂದು ರ್ಯಾಲಿ ನಡೆಯಲಿದೆ ಎಂದು ಬಿಜೆಪಿ ಹೇಳಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಹೊರ ಜಿಲ್ಲೆಗಳಿಂದ ಪೊಲೀಸರು
ಭದ್ರತೆಗಾಗಿ ಹೆಚ್ಚುವರಿ ಪೋಲೀಸರನ್ನು ಹಾಗೂ ಅರೆಸೇನಾ ಪಡೆಗಳನ್ನು ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ನಿಯೋಜಿಸಿದ್ದು, ಜಿಲ್ಲೆಯಾದ್ಯಂತ ಪೋಲೀಸ್ ಪಡೆಗಳು ಪಥಸಂಚಲವನ್ನೂ ನಡೆಸಿವೆ.
ಬಂದೋಬಸ್ತ್ ಹಿನ್ನಲೆಯಲ್ಲಿ ಜಿಲ್ಲೆಗೆ ನೂರಾರು ಪೋಲೀಸರು ಹೊರ ಜಿಲ್ಲೆಗಳಿಂದಲೂ ಬಂದಿದ್ದು, 1 ತುಕಡಿ ಕ್ಷಿಪ್ರ ಕಾರ್ಯಾಚರಣೆ ತಂಡ (ಆರ್'ಎಎಫ್), 15 ಕೆಎಸ್ಆರ್'ಪಿ ಪ್ಲಟೂನ್, 12 ಸಿಎಆರ್ ತುಕಡಿಗಳನ್ನು ಈಗಾಗಲೇ ಕರೆಸಿಕೊಳ್ಳಲಾಗಿದೆ.

ಭದ್ರತೆಯ ಉಸ್ತುವಾರಿಗೆ 6 ಎಸ್ಪಿ ಶ್ರೇಣಿ ಅಧಿಕಾರಿಗಳು
ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಬೆಳಗಾವಿ, ಸೇರಿದಂತೆ ನಾನಾ ಜಿಲ್ಲೆಯಿಂದ ಸುಮಾರು ನೂರಕ್ಕೂ ಅಧಿಕ ಪೊಲೀಸರು ಜಿಲ್ಲೆಗೆ ಭದ್ರತೆಗೆ ಆಗಮಿಸಿದ್ದಾರೆ.
6 ಎಸ್ಪಿ ಶ್ರೇಣಿಯ ಅಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಬಂದೋಬಸ್ತ್ ನ ಉಸ್ತುವಾರಿಯನ್ನು ವಹಿಸಿದ್ದಾರೆ.

ಬೈಕ್ ರ್ಯಾಲಿ ಜಿಲ್ಲೆ ಪ್ರವೇಶಿಸಲು ಬಿಡಲ್ಲ
"ಬೈಕ್ ರ್ಯಾಲಿ ನಡೆಸಲು ಯಾವುದೇ ಅನುಮತಿ ಇಲ್ಲದ ಕಾರಣ ರಾಲಿಯನ್ನು ಜಿಲ್ಲೆಗೆ ಪ್ರವೇಶಿಸಲು ಬಿಡುವುದಿಲ್ಲ," ಎಂದು ಮಂಗಳೂರು ಪೋಲೀಸ್ ಕಮಿಷನರ್ ಟಿ.ಆರ್. ಸುರೇಶ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಸಮೇವೇಶ ನಡೆಸಲು ಪರಿಶೀಲನೆ
ಈ ನಡುವೆ ಬೈಕ್ ರ್ಯಾಲಿ ಬದಲು ಮಂಗಳೂರಿನಲ್ಲಿ ಸಮಾವೇಶ ನಡೆಸಲು ಅನುಮತಿಯನ್ನು ನೀಡುವಂತೆ ಕೇಳಿಕೊಳ್ಳಲಾಗಿದ್ದು ಈ ಬಗ್ಗೆ ಪರಿಶೀಲನೆಯನ್ನು ನಡೆಸಲಾಗುತ್ತಿದೆ ಎಂದು ಟಿ.ಆರ್ ಸುರೇಶ್ ಕುಮಾರ್ ಹೇಳಿದ್ದಾರೆ.












Click it and Unblock the Notifications