ಕರಾವಳಿ ಭಾಗದಲ್ಲಿ ಸಮುದ್ರ ಉಬ್ಬರ:ಎಚ್ಚರಿಕೆ ರವಾನಿಸಿದ ಹವಾಮಾನ ಇಲಾಖೆ
ಮಂಗಳೂರು, ಫೆಬ್ರವರಿ 22:ಕರ್ನಾಟಕ ಸೇರಿದಂತೆ ದೇಶದ ಇತರ ರಾಜ್ಯಗಳ ಕರಾವಳಿ ಭಾಗದ ತಗ್ಗು ಪ್ರದೇಶಗಳಿಗೆ ಸಮುದ್ರದ ನೀರು ನುಗ್ಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ರಾಜ್ಯದ ಕರಾವಳಿ ಭಾಗದ ಕೆಲವು ಪ್ರದೇಶಗಳಲ್ಲಿ ಮುಂದಿನ ಕೆಲ ದಿನಗಳಲ್ಲಿ ನೆರೆ ಉಂಟಾಗುವ ಸಾಧ್ಯತೆಯಿದ್ದು, ಭೂಮಿ ಮತ್ತು ಚಂದ್ರನ ನಡುವೆ ವರ್ಷದ ಕೆಲದಿನಗಳಲ್ಲಿ ಅಂತರ ಕಡಿಮೆಯಾಗಿ ಇಂತಹ ಪರಿಣಾಮ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ವಿದ್ಯಮಾನಕ್ಕೆ ಪೆರಿಜಿಯನ್ ಸ್ಪ್ರಿಂಗ್ ಟೈಡ್ ಎಂದು ಕರೆಯಲಾಗುತ್ತದೆ. ಫೆಬ್ರವರಿ 24ರೊಳಗೆ ಸ್ಪ್ರಿಂಗ್ ಟೈಡ್ ಉಂಟಾಗುವ ಸಾಧ್ಯತೆಯಿದ್ದು, ಕರ್ನಾಟಕ ಮತ್ತು ಗೋವಾ ಕರಾವಳಿಯಲ್ಲಿ ಮಧ್ಯಾಹ್ನ 1ರಿಂದ ತಡರಾತ್ರಿ 2ರವರೆಗೆ ಸಮುದ್ರದಲ್ಲಿ ಅಲೆಗಳು ಹೆಚ್ಚಾಗುವ ಸಾಧ್ಯತೆಯಿದೆ.

ಈ ವೇಳೆ ಭಾರೀ ಮಳೆ, ಸಮುದ್ರ ಉಬ್ಬರದಿಂದ ನೆರೆ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಆದರೆ, ಸಮುದ್ರದಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ ಎಂದು ಮೀನುಗಾರರು ಹೇಳಿದ್ದಾರೆ.
ಗುಜರಾತ್ , ಮಹಾರಾಷ್ಟ್ರ, ಗೋವಾ, ಕರ್ನಾಟಕ , ಕೇರಳ, ಪಶ್ಚಿಮ ಬಂಗಾಳ,ಒಡಿಶಾ, ಆಂದ್ರ ಪ್ರದೇಶ, ತಮಿಳುನಾಡು, ಲಕ್ಷದ್ವೀಪ, ಅಂಡಮಾನ್ ನಿಕೋಬಾರ್ ಭಾಗದ ಕಡಲ ತಡಿಯ ಭಾಗದ ಜನರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸಂದೇಶ ರವಾನಿಸಿದೆ.












Click it and Unblock the Notifications