ವಿವಾದದ ಸುಳಿಯಲ್ಲಿ ಟೀಮ್ ಮೋದಿಯ ಯಕ್ಷಗಾನ ಬಯಲಾಟ
ಮಂಗಳೂರು, ಡಿಸೆಂಬರ್ 27 : ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಮಂಗಳೂರಿನ ಟೀಂ ಮೋದಿ ಹರಕೆಯ ಪದ್ದತಿಯ ಮೂಲಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸಲು ಮುಂದಾಗಿದ್ದಾರೆ.
ಟೀಂ ಮೋದಿ ಸದಸ್ಯರು, ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಕಡೆಯಿಂದ 'ಸಂಪೂರ್ಣ ದೇವಿ ಮಹಾತ್ಮೆ' ಯಕ್ಷಗಾನ ಬಯಲಾಟ ನಡೆಸಲು ಮುಂದಾಗಿದ್ದಾರೆ. ಇದೇ ಬರುವ ಡಿಸೆಂಬರ್ 29 ಮಣ್ಣಗುಡ್ಡೆ ಗುರ್ಜಿ ಸಮೀಪದ ಮೈದಾನದಲ್ಲಿಈ ಹರಕೆಯ ಬಯಲಾಟ ನಡೆಯಲಿದೆ.
ಆದರೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳದಿಂದ 'ಶ್ರೀದೇವಿ ಮಹಾತ್ಮೆ' ಯಕ್ಷಗಾನವನ್ನು ಆಯೋಜಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಕಟೀಲು ಮೇಳದ ಹರಕೆಯ ಯಕ್ಷಗಾನ ಆಟ ಆಡಿಸಬೇಕಾದರೆ ವರ್ಷಗಟ್ಟಲೆ ಕಾಯುವ ಪರಿಸ್ಥಿತಿ ಇದೆ.

ಆದರೆ ಇತ್ತೀಚೆಗಷ್ಟೆ ಸ್ಥಾಪನೆಯಾದ ಟೀಂ ಮೋದಿಗೆ ಡಿಸೆಂಬರ್ .29ರಂದು ಯಕ್ಷಗಾನ ಆಡಿಸಲು ಅವಕಾಶ ಲಭಿಸಿದ್ದಾದರೂ ಹೇಗೆ? ಇದರ ಹಿಂದೆ ಭ್ರಷ್ಟಾಚಾರದ ವಾಸನೆ ಬರುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷ ಗಾನ ಮಂಡಳಿಯಲ್ಲಿ ಯಾರದೋ ಹೆಸರಿನ ಯಕ್ಷ ಗಾನವನ್ನು ಇನ್ಯಾರಿಗೋ ನೀಡಲಾಗುತ್ತಿದೆ ಮತ್ತು ಸರದಿ ಪ್ರಕಾರ ಭಕ್ತರಿಗೆ ಯಕ್ಷಗಾನ ಮಂಜೂರು ಮಾಡಲಾಗುತ್ತಿಲ್ಲ ಎಂದು ಆರೋಪಿಸಲಾಗಿದೆ.
ಆದರೆ ಇದಕ್ಕೆ ಟೀಮ್ ಮೋದಿ ಮುಖಂಡ ನರೇಶ್ ಶೆಣೈ ಸಮಜಾಯಿಶಿ ನೀಡಿದ್ದಾರೆ. ಕಟೀಲು ಮೇಳದಲ್ಲಿ ತತ್ಕಾಲ್ ಕೋಟಾದಲ್ಲಿ ಯಕ್ಷಗಾನಕ್ಕೆ ಬುಕ್ಕಿಂಗ್ ಮಾಡಿದ್ದು,ಅವಕಾಶಕ್ಕಾಗಿ ಕಾಯುತ್ತಿದ್ದೆವು. ಯಾರಿಗೋ ಸೂತಕ ಬಂದ ಕಾರಣ ಕೆಲ ದಿನ ಹಿಂದೆ ಕಟೀಲಿನಿಂದ ಕರೆ ಮಾಡಿ ಡಿಸೆಂಬರ್29ರಂದು 'ಯಕ್ಷಗಾನಕ್ಕೆ ಅವಕಾಶವಿದೆ, ನೀವು ರೆಡಿ ಇದ್ದೀರಾ?' ಎಂದು ಕೇಳಿದ್ದರು. ಅದಕ್ಕೆ ನಾವು ಒಪ್ಪಿಗೆ ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಮಹಾರುದ್ರಯಾಗ ನಡೆಸಲಾಗಿತ್ತು. ಮೋದಿಯವರ ನಕ್ಷತ್ರ, ಹೆಸರಿನಲ್ಲಿ ಸಂಕಲ್ಪ ಮಾಡಿ ಪೂರ್ಣಾಹುತಿ ನೀಡಲಾಗಿತ್ತು.












Click it and Unblock the Notifications