ವೆಕ್ಟರ್ ಆರ್ಟ್ ನಲ್ಲಿ ಮೂಡಿ ಬಂದ ತುಳುನಾಡಿನ ದೈವ ಸ್ವಾಮಿ ಕೊರಗಜ್ಜ
ಮಂಗಳೂರು, ಫೆಬ್ರವರಿ 17: ತುಳುನಾಡಿನಲ್ಲಿ ಭೂತಾರಾಧನೆಗೆ ಪ್ರಮುಖ ಸ್ಥಾನ. ಭೂತಾರಾಧನೆ ಅಥವಾ ದೈವಾರಾಧನೆ ತುಳುನಾಡಿನ ಸಂಪ್ರದಾಯ, ಸಂಸ್ಕೃತಿಯ ಅವಿಭಾಜ್ಯ ಅಂಗ .
ಈ ತುಳುನಾಡಿನಲ್ಲಿ ಜನರು ಭೂತಗಳನ್ನು ದೈವಿಕ ಶಕ್ತಿಗಳೆಂದು ನಂಬಿ ಆರಾಧಿಸುತ್ತಾರೆ. ಅಗೆಲು, ತಂಬಿಲ, ಕೋಲ, ನೇಮೋತ್ಸವ ಮುಂತಾದ ಆಚರಣೆಗಳ ಮೂಲಕ ಭೂತ ಅಥವಾ ದೈವ ಗಳನ್ನು ಆರಾಧಿಸುತ್ತಾರೆ.
ಈ ನಡುವೆ ತುಳುನಾಡಿನ ದೈವಗಳಿಗೂ ತಂತ್ರಜ್ಞಾನದ ಟಚ್ ನೀಡಲಾಗುತ್ತಿದೆ. ಹೌದು, ಇದೀಗ ತುಳುನಾಡಿನ ಪ್ರಮುಖ ದೈವವಾದ ಸ್ವಾಮಿ ಕೊರಗಜ್ಜನ ಮುಖವರ್ಣಿಕೆಯನ್ನು ಬಿಂಬಿಸುವ ವೆಕ್ಟರ್ ಆರ್ಟ್ ಭಾರೀ ಪ್ರಸಿದ್ದಿ ಪಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೆಕ್ಟರ್ ಆರ್ಟ್ ನಲ್ಲಿ ಮೂಡಿ ಬಂದ ಸ್ವಾಮಿ ಕೊರಗಜ್ಜನ ಮುಖವರ್ಣಿಕೆ ವೈರಲ್ ಆಗಿದೆ.

ಈ ಹಿಂದೆ ಮಂಗಳೂರಿನ ಕಲಾವಿದ ಕರಣ್ ಆಚಾರ್ಯ ಅವರ ವೀರ ಬಜರಂಗಿ ಮತ್ತು ಶಿವನ ವೆಕ್ಟರ್ ಆರ್ಟ್ ಚಿತ್ರಗಳು ದೇಶ ವಿದೇಶಗಳಲ್ಲಿ ಪ್ರಸಿದ್ಧವಾಗಿದ್ದವು.
ಅಂದಹಾಗೆ ಕೊರಗಜ್ಜನ ವೆಕ್ಟರ್ ಆರ್ಟ್ ಚಿತ್ರವನ್ನು ಬಿಡಿಸಿರುವವರು ಮಂಗಳೂರು ಎಸ್.ಜೆ. ಶಶಾಂಕ್ ಆಚಾರ್ಯ. ಮಂಗಳೂರಿನ ಹೃದಯ ಭಾಗದಲ್ಲಿರುವ ರಥಬೀದಿಯಲ್ಲಿ ಡಿಸೈನ್ ಸ್ಟುಡಿಯೋ ಹೊಂದಿರುವ ಎಸ್ ಜೆ ಶಶಾಂಕ್ ಆಚಾರ್ಯ ವೆಕ್ಟರ್ ಆರ್ಟ್ ನಲ್ಲಿ ಸ್ವಾಮಿ ಕೊರಗಜ್ಜನ ಚಿತ್ರ ಪೂರ್ಣಗೊಳಿಸಲು ತೆಗೆದುಕೊಂಡಿರುವುದು ಕೇವಲ ಒಂದು ದಿನ ಮಾತ್ರ ಎಂಬುದು ವಿಶೇಷ.
ಶಶಾಂಕ್ ತಮ್ಮ ಸ್ಟುಡಿಯೋದ ಕಂಪ್ಯೂಟರ್ ನಲ್ಲಿ ಫೋಟೋಶಾಪ್ ನಲ್ಲಿ ಬಿಳಿಯ ಖಾಲಿ ಪುಟಕ್ಕೆ ಕಪ್ಪು ಬಣ್ಣ ಹಾಕಿ ಮೂರು ನಾಮ ಬಿಡಿಸಿದರು. ಆ ಚಿತ್ರವು ಕೊರಗಜ್ಜನನ್ನು ಹೋಲುತ್ತಿತ್ತು. ಈ ಚಿತ್ರಕ್ಕೆ ಮತ್ತಷ್ಟು ಶ್ರಮ ಹಾಕಿ ಕೊರಗಜ್ಜನ ಸುಂದರ ಪೈಂಟಿಂಗ್ ಮಾಡುವ ಹಠ ತೊಟ್ಟರು.

ಅದರಂತೆಯೇ ಒಂದೇ ದಿನದಲ್ಲಿ ಚಿತ್ರ ಕೂಡ ಸಿದ್ಧವಾಯಿತು. ಮುಂದಿನ ದಿನಗಳಲ್ಲಿ ಶಶಾಂಕ ಬ್ರಹ್ಮಶ್ರೀ ನಾರಾಯಣ ಗುರು, ಮಂತ್ರ ದೇವತೆ, ಭಾರತ ಮಾತೆ ಮತ್ತಿತರ ವೆಕ್ಟರ್ ಪೈಂಟಿಂಗ್ ರಚನೆ ಮಾಡುವ ಚಿಂತನೆಯಲ್ಲಿದ್ದಾರೆ.












Click it and Unblock the Notifications