ಸೆಲ್ಫಿ ವಿತ್ ಸಿದ್ದು: ಶಾಂತಿವನಕ್ಕೆ ಹರಿದು ಬಂದ ಅಭಿಮಾನಿಗಳ ದಂಡು
ಮಂಗಳೂರು ಜೂನ್ 27: ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಪ್ರಕೃತಿ ಚಿಕಿತ್ಸಾಲಯ ಸೆಲ್ಫಿ ವಿತ್ ಸಿದ್ದು ಸ್ಥಳವಾಗಿ ಮಾರ್ಪಾಡಾಗಿದೆ. ಹೌದು, ಶಾಂತಿವನದಲ್ಲಿ ಪ್ರಾಕೃತಿಕ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೋಡಲು ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ.
ಮುಂಜಾನೆಯಿಂದ ರಾತ್ರಿ ತನಕ ಶಾಂತಿವನದ ಗೇಟಲ್ಲೇ ಕಾಯುವ ಸಿದ್ದರಾಮಯ್ಯ ಅಭಿಮಾನಿಗಳು, ಅವರು ಸಂಜೆ ವಾಕಿಂಗ್ ಗೆಂದು 5 ಗಂಟೆಗೆ ತನ್ನ ರೂಮ್ ನಿಂದ ಹೊರಡುವ ಸಮಯವನ್ನೇ ಕಾಯುವುದು ಸಾಮಾನ್ಯವಾಗಿದೆ.
ಎಚ್.ಡಿ.ಕೆ, ಕಾಂಗ್ರೆಸ್ ಹೈಕಮಾಂಡಿಗೆ ಸ್ಪಷ್ಟ ಸಂದೇಶ ರವಾನಿಸಿದ ಸಿದ್ದರಾಮಯ್ಯ
ಅಭಿಮಾನಿಗಳನ್ನು ಬೇಸರಪಡಿಸಬಾರದು ಎನ್ನುವ ಕಾರಣಕ್ಕಾಗಿ ವಾಕಿಂಗ್ ನೆಪದಲ್ಲಿ ಗೇಟ್ ಬಳಿಗೆ ಬರುವ ಸಿದ್ದರಾಮಯ್ಯ ಅಭಿಮಾನಿಗಳ ಜೊತೆಗೆ ಆತ್ಮೀಯವಾಗಿ ಬೆರೆಯುತ್ತಾರೆ. ಸೆಲ್ಫಿಗೆ ಪೋಸ್ ನೀಡುತ್ತಾರೆ.
ಕೆಲವು ಅಭಿಮಾನಿಗಳು ಪಕ್ಕದಲ್ಲೇ ಇರುವ ಧರ್ಮಸ್ಥಳ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆಯನ್ನೂ ನೆರವೇರಿಸಿ ಅದರ ಪ್ರಸಾದವನ್ನು ತಮ್ಮ ನೆಚ್ಚಿನ ನಾಯಕನಿಗೆ ನೀಡುತ್ತಿದ್ದಾರೆ.
ಸಿದ್ದರಾಮಯ್ಯ ಅವರು ಶಾಂತಿವನದಿಂದ ನಾಳೆ ಡಿಸ್ಚಾರ್ಜ್ ಆಗಲಿದ್ದು, ಇಂದು ಅವರೊಟ್ಟಿಗೆ ಸೆಲ್ಫಿ ತೆಗೆಸಿಕೊಳ್ಳುವ ಅವರ ಅಭಿಮಾನಿಗಳ ಸಂಖ್ಯೆ ಇನ್ನು ಹೆಚ್ಚಿತ್ತು.