ಕೃತಕ ಕಾವು ಯಶಸ್ವಿ, ಹೊರಬಂದ 38 ಕಾಳಿಂಗ ಸರ್ಪ!
ಮಂಗಳೂರು, ಜುಲೈ 10; ಮಂಗಳೂರಿನ ಪಿಲಿಕುಳ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ ಕೃತಕ ಕಾವಿನ ಮೂಲಕ 38 ಕಾಳಿಂಗ ಸರ್ಪದ ಮರಿಗಳು ಮೊಟ್ಟೆ ಒಡೆದು ಹೊರ ಬರುತ್ತಿವೆ.
8 ವರ್ಷಗಳ 'ನಾಗಿಣಿ' ಎಂಬ ಹೆಣ್ಣು ಕಾಳಿಂಗ ಸರ್ಪವು 38 ಮೊಟ್ಟೆಗಳನ್ನು ಇಟ್ಟಿತ್ತು. ಮೃಗಾಲಯದ ಅಧಿಕಾರಿಗಳು ಅವುಗಳಿಗೆ ಪ್ರಯೋಗಾಲಯದಲ್ಲಿ ಕೃತಕ ಕಾವು ನೀಡುವ ವ್ಯವಸ್ಥೆ ಕಲ್ಪಿಸಿದ್ದರು.
76 ದಿನಗಳ ಕಾವಿನ ಬಳಿಕ ಮೊಟ್ಟೆಯೊಡೆದು 38 ಮರಿಗಳು ಹೊರಬಂದಿದೆ. ಜನಿಸುವಾಗಲೇ ವಿಷಪೂರಿತವಾಗಿರುವ ಈ ಕಾಳಿಂಗ ಸರ್ಪದ ಮರಿಗಳು ಸುಮಾರು ಒಂದೂವರೆ ಅಡಿ ಉದ್ದವಿರುತ್ತದೆ.

ಈ ಕಾಳಿಂಗನ ಮರಿಗಳಿಗೆ ಒತ್ತಾಯಪೂರ್ವಕವಾಗಿ ಬಾಯಿಗೆ ಆಹಾರವನ್ನು ತಿನ್ನಿಸಲಾಗುತ್ತದೆ. ಮರಿಗಳು ಬೆಳೆದ ಬಳಿಕ ಅವುಗಳನ್ನು ಜನವಸತಿ ಇಲ್ಲದ ಕಾಡು ಪ್ರದೇಶದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಪಿಲಿಕುಳದಲ್ಲಿ ಸದ್ಯ 14 ಕಾಳಿಂಗ ಸರ್ಪಗಳಿವೆ. ಅವುಗಳಲ್ಲಿ 9 ಗಂಡು ಹಾಗೂ 5 ಹೆಣ್ಣು.
ದಾಖಲೆ ಮಾಡಲಾಗಿತ್ತು; ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವಿಶ್ವದಲ್ಲೇ ಪ್ರಥಮ ಬಾರಿಗೆ ಅಸಾಧ್ಯವೆಂದು ಪರಿಗಣಿಸಲಾಗಿದ್ದ ಸಂರಕ್ಷಿತ ಪರಿಸರದಲ್ಲಿನ ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಮಾಡಿ ದಾಖಲೆ ಸಾಧಿಸಲಾಗಿತ್ತು.
ಈ ವರ್ಷ ನವೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರವು ಪಿಲಿಕುಳ ಮೃಗಾಲಯಕ್ಕೆ ಕಾಳಿಂಗ ಸರ್ಪ ಮತ್ತು ಮಲಬಾರ್ ಕೆಂಚಳಿಲು ಸಂತಾನೋತ್ಪತ್ತಿಯ ಯೋಜನೆ ನೀಡಿತ್ತು.

ಕಾಳಿಂಗವು ಅರಣ್ಯದಲ್ಲಿ ಸಂತಾನೋತ್ಪತ್ತಿ ಮಾಡುವುದು ಸಾಮಾನ್ಯ, ಆದರೆ ಮಾನವನ ರಕ್ಷಣೆಯಲ್ಲಿ ಸಂತಾನೋತ್ಪತ್ತಿಯಾಗಿರುವುದು ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಪ್ರಥಮ ಎಂದು ತಿಳಿದುಬಂದಿದೆ.
"ಪಿಲಿಕುಳದಲ್ಲಿ 11 ವರ್ಷದ ಬಳಿಕ ಕಾಳಿಂಗ ಮರಿಗಳ ಜನನವಾಗಿದ್ದು,ಮಾನವನ ರಕ್ಷಣೆಯಲ್ಲಿ ಸಂತಾನೋತ್ಪತ್ತಿ ಆಗಿರುವುದು ವಿಶೇಷವಾಗಿದೆ. ಈಗ ಮರಿಗಳಿಗೆ ಒತ್ತಾಯ ಪೂರ್ವಕ ಬಾಯಿಗೆ ಆಹಾರವನ್ನು ತಿನಿಸಬೇಕಾಗಿದ್ದು, ಮರಿಗಳು ಬೆಳೆದ ನಂತರ ಅವುಗಳನ್ನು ಕಾಡಿಗೆ ಬಿಡುಗಡೆ ಮಾಡಲಾಗುವುದು" ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕರಾದ ಎಚ್. ಜಯಪ್ರಕಾಶ್ ಭಂಡಾರಿ ಹೇಳಿದ್ದಾರೆ..
ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 8 ವರ್ಷದ ನಾಗಿಣಿ ಎಂಬ ಕಾಳಿಂಗ ಸರ್ಪ 38 ಮೊಟ್ಟೆಗಳನ್ನು ಇಟ್ಟಿದ್ದು, ಕೃತಕ ಕಾವು ನೀಡಿ, ಇದೀಗ ಮೊಟ್ಟೆಯೊಡೆದು ಮರಿ ಹೊರ ಬರಲಾರಂಭಿಸಿವೆ.
ಮೃಗಾಲಯದ ಅಧಿಕಾರಿಗಳು ಮೊಟ್ಟೆಗಳನ್ನು ಪ್ರಯೋಗಾಲಯದಲ್ಲಿ ಇರಿಸಿ ಕೃತಕ ಕಾವು ನೀಡುವ ವ್ಯವಸ್ಥೆ ಕಲ್ಪಿಸಿದ್ದರು. 76 ದಿನಗಳ ನಂತರ ಮರಿಗಳು ಮೊಟ್ಟೆಯೊಡೆದು ಬರಲಾರಂಭಿಸಿದೆ. ಈಗಾಗಲೇ ಸುಮಾರು 31 ಮರಿಗಳುಹೊರಬಂದಿವೆ.











Click it and Unblock the Notifications