ಮಂಗಳೂರು; ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಸೋಂಕಿನಿಂದ ಆಸ್ಪತ್ರೆಗಳಲ್ಲಿ ಒತ್ತಡ
ಮಂಗಳೂರು, ಅಕ್ಟೋಬರ್ 2: ಕರಾವಳಿ ಜಿಲ್ಲೆಗಳ ವೈದ್ಯಕೀಯ ಕಾಲೇಜು/ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸಕರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕೊರೊನಾ ಸೋಂಕಿಗೆ ನಿರಂತರವಾಗಿ ತುತ್ತಾಗುತ್ತಿರುವುದು ಸೋಂಕಿನ ವಿರುದ್ಧ ಹೋರಾಡಲು ತೊಡಕಾಗಿ ಪರಿಣಮಿಸಿದೆ.
ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ಆರೋಗ್ಯ ಸಿಬ್ಬಂದಿ ಸೋಂಕಿಗೆ ತುತ್ತಾಗುತ್ತಿದ್ದಂತೆ ಐಸೊಲೇಷನ್ ಗೆ ಒಳಗಾಗಬೇಕಿದೆ. ಕೆಲಸಕ್ಕೆ ಹಾಜರಾಗುವ ಕಾರಣವಾಗಿ ಆದಷ್ಟು ಬೇಗನೆ ಚೇತರಿಸಿಕೊಳ್ಳಬೇಕಾಗಿದೆ. ಅಷ್ಟೇ ಅಲ್ಲ, ಹೆಚ್ಚು ಸಿಬ್ಬಂದಿ ಸೋಂಕಿಗೆ ಒಳಗಾಗುತ್ತಿರುವ ಕಾರಣ, ಆಸ್ಪತ್ರೆಗಳಲ್ಲಿ ಆರೋಗ್ಯ ಸಿಬ್ಬಂದಿಯ ಕೊರತೆಯೂ ಹೆಚ್ಚಾಗಿದೆ. ಈ ಒಂದು ಸಂಗತಿ ಇಡೀ ಆಸ್ಪತ್ರೆಯ ವ್ಯವಸ್ಥೆಯಲ್ಲೇ ಒತ್ತಡವನ್ನು ಸೃಷ್ಟಿಸುತ್ತಿದೆ.
ಮಂಗಳೂರಿನ ಕಸ್ತೂರ ಬಾ ಆಸ್ಪತ್ರೆಯನ್ನೇ ನೋಡಿ... ಅಲ್ಲಿ ಸುಮಾರು 70 ಪಿ.ಜಿ. ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಪದವಿಪೂರ್ವ ಇಂಟರ್ನೀಗಳು ಸೋಂಕಿಗೆ ತುತ್ತಾಗಿದ್ದಾರೆ. "ನಾವು ಈ ಸೋಂಕಿತ ಸಿಬ್ಬಂದಿಗೆ ಐಸೊಲೇಷನ್ ನಲ್ಲಿರಲು ವ್ಯವಸ್ಥೆ ಹಾಗೂ ಸೌಲಭ್ಯಗಳನ್ನು ಒದಗಿಸಿದ್ದೇವೆ" ಎಂದು ತಿಳಿಸಿದ್ದಾರೆ ಅಲ್ಲಿನ ಡೀಜ್ ಡಾ. ವೆಂಕಟರಾಯ ಪ್ರಭು. "ದೀರ್ಘ ಅವಧಿಯಲ್ಲಿ ಈ ರೀತಿ ಆರೋಗ್ಯ ಸಿಬ್ಬಂದಿಗೇ ತೊಂದರೆ ಎದುರಾದರೆ ಇಡೀ ವ್ಯವಸ್ಥೆಯೇ ತಲೆಕೆಳಗಾಗುತ್ತದೆ" ಎಂದೂ ಹೇಳುತ್ತಾರೆ.

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಆರೋಗ್ಯ ಸಿಬ್ಬಂದಿಗೆ ಸೋಂಕು ತಗುಲುವುದನ್ನು ತಡೆಯಲು ಹಲವು ಕ್ರಮ ತೆಗೆದುಕೊಳ್ಳುವುದರೊಂದಿಗೆ ವ್ಯವಸ್ಥಿತವಾಗಿ ಸಿಬ್ಬಂದಿ ನಿಯೋಜಿಸಲಾಗಿದೆಯಂತೆ. ಕರಾವಳಿ ಜಿಲ್ಲೆಯ ಹಲವು ಆಸ್ಪತ್ರೆಗಳಲ್ಲಿ ಈಗ ಆಸ್ಪತ್ರೆ ಸಿಬ್ಬಂದಿಗೆಂದೇ ಪ್ರತ್ಯೇಕ ವ್ಯವಸ್ಥೆ ರೂಪಿಸಿ ಅವರಿಗೆ ಆರೋಗ್ಯ ವಿಮೆಯನ್ನೂ ನೀಡಲಾಗಿದೆ. ಈ ಮೂಲಕ ಅವರ ಒತ್ತಡ ಕಡಿಮೆ ಮಾಡುವ ಮೂಲಕ ಆಸ್ಪತ್ರೆಗಳ ಮೇಲಿನ ಒತ್ತಡವನ್ನೂ ತಗ್ಗಿಸುವ ಪ್ರಯತ್ನ ನಡೆಸಲಾಗುತ್ತಿದೆ.












Click it and Unblock the Notifications