ಕ್ಲಬ್ಹೌಸ್ ಸಂವಾದ: ಶ್ರೀರಾಮ ಸಲಿಂಗಕಾಮಿ ಎಂದವರ ವಿರುದ್ಧ ಮಂಗಳೂರಿನಲ್ಲಿ ದೂರು ದಾಖಲು
ಮಂಗಳೂರು, ಜೂನ್ 19: ಕ್ಲಬ್ಹೌಸ್ನಲ್ಲಿ ನಡೆದ ಸಂವಾದದಲ್ಲಿ ಶ್ರೀರಾಮ, ಸೀತಾಮಾತೆಯ ಬಗ್ಗೆ ತುಚ್ಛವಾಗಿ ನಿಂದಿಸಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡೆ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಹಿಂದೆಯೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಕಾಂಗ್ರೆಸ್ ಐಟಿ ಸೆಲ್ನ ಕಾರ್ಯದರ್ಶಿ, ಪುತ್ತೂರು ಕಾಂಗ್ರೆಸ್ ಮುಖಂಡೆ ಶೈಲಜಾ ಅಮರನಾಥ್ ಮತ್ತು ಹಲವರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಹಿಂದೂ ಸಂಘಟನೆಗಳು ದೂರು ನೀಡಿದ್ದವು.
'ಸಂಡೆ ಅಂಕಲ್ ಮಂಡೇ ಸನ್ಸ್' ಎಂಬ ಗ್ರೂಪ್ ರಚಿಸಿ ರಾಮನ ಬಗ್ಗೆ, ಸೀತೆಯ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಅವಹೇಳನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹಿಂದೂ ದೇವರ ಅವಹೇಳನ ಮಾಡಿರುವ ಕಾಂಗ್ರೆಸ್ ಐಟಿ ಸೆಲ್ ನ ಕಾರ್ಯದರ್ಶಿ ಶೈಲಜಾ ಅಮರನಾಥ, ಪ್ರೀತು ಶೆಟ್ಟಿ, ಅನೀಲ್, ಪುನಿತ್ ಇತರರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಶೈಲಜಾ ಸೇರಿ ಹಲವರ ವಿರುದ್ಧ ದೂರು
ಈ ಕ್ಲಬ್ಹೌಸ್ ಕಾರ್ಯಕ್ರಮದಲ್ಲಿ ಶ್ರೀರಾಮ ಸಲಿಂಗಕಾಮಿ, ರಾಮನಿಗೆ ಹಂದಿ ಮಾಂಸ ಇಷ್ಟ ಎಂದು ಅವಹೇಳನ ಮಾಡಿದ್ದು, ಹಿಂದೂಗಳ ಧಾರ್ಮಿಕ ನಂಬಿಕೆಗೆ ಭಾವನೆಗೆ ಧಕ್ಕೆ ತಂದಿರುವುದಾಗಿ ದೂರು ನೀಡಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಒತ್ತಾಯವನ್ನು ಮಾಡಿದೆ. ಕ್ಲಬ್ ಹೌಸ್ ಚರ್ಚೆಯಲ್ಲಿ ಶೈಲಜಾ ಅವರು ಸೀತಾಮಾತೆ ಹೆಸರಿನಲ್ಲಿ ಮಾತನಾಡಿದ್ದು, ಹೀನಾಯವಾಗಿ ರಾಮನ ಬಗ್ಗೆ ಮಾತನಾಡಿದ್ದಾರೆ. ಶೈಲಜಾ ಜೊತೆಗೆ ತಬಸ್ಸುಮ್ ,ಅನಿಲ್, ಪುನೀತ್ ಮಾತನಾಡಿರುವ ಆಡಿಯೋ ತುಣುಕುಗಳನ್ನೂ ಆಧಾರವಾಗಿಟ್ಟು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರಾಮ-ಸೀತೆ ಹೆಸರಿನಲ್ಲಿ ಹೀನಾಯ ಸಂಭಾಷಣೆ
ಚರ್ಚೆಯ ವೇಳೆ ತಬಸ್ಸುಮ್ "ರಾಮ ಯಾವಾಗಲೂ ಹನುಮಂತನನ್ನು ತಬ್ಬಿಕೊಂಡಿರೋದು ನೋಡಿದರೆ ನನಗೆ ಯಾಕೋ ರಾಮ ಗೇ(ಸಲಿಂಗ ಕಾಮಿ) ಅಂತ ಅನಿಸುತ್ತದೆ," ಎಂದು ಹೇಳಿದ್ದಾರೆ. ಅದಕ್ಕೆ ಶೈಲಜಾ," ಅಂದ್ರೆ ನಾನು ಮಾಡರ್ನ್ ಸೀತಾ ಮಾತೆ, ನನಗೆ ಹನುಮಂತ ನನ್ನ ರಾಮಕೊಟ್ಟ ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ ತಂದುಕೊಡುತ್ತಿದ್ದ. ರಾಮನಿಗೆ ಪೋರ್ಕ್ ಅಂದರೆ ತುಂಬಾ ಇಷ್ಟ ಎಂದು ಹೇಳಿದ್ದಾರೆ ". ಇದಕ್ಕೆ ಪ್ರೀತು ಶೆಟ್ಟಿ ಆಲಿಯಾಸ್ ಮಹಾಲಕ್ಷ್ಮಿ , " ಹನುಮಂತ ತಂದುಕೊಟ್ಟ ಉಂಗುರ ಎಷ್ಟು ಗ್ರಾಮ್ ಇತ್ತು" ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಅನಿಲ್ ಎಂಬಾತ ರಾವಣ ಬಂದ್ಬಿಟ್ಟು ಸೀತಾಮಾತೆಯ ತಂದೆಯಾಗಿದ್ದರು, ಅದು ಎಷ್ಟು ಜನಕ್ಕೆ ಗೊತ್ತಿಲ್ಲ, ವಿತೌಟ್ ಪಾಸ್ ಪೋರ್ಟ್ ನೀವು ಶ್ರೀಲಂಕಾ ಗೆ ಹೇಗೆ ಹೋದಿರಿ" ಅಂತಾ ಪ್ರಶ್ನಿಸಿದ್ದಾರೆ.
ಇದಕ್ಕೆ ಪುನೀತ್ ಎಂಬಾತ " ನೀವು ವನವಾಸದಲ್ಲಿ ಇದ್ದಾಗ ಸೊಳ್ಳೆ ಕಚ್ಚುತ್ತಿರಲಿಲ್ಲವೇ ಚಿಕುನ್ ಗುನ್ಯಾ, ಮಲೇರಿಯಾ, ಡೆಂಗ್ಯೂ ಯಾವುದೂ ಬರುತ್ತಿರಲಿಲ್ಲವೇ " ಅಂತಾ ಕೇಳಿದ್ದಾರೆ. ಅದಕ್ಕೆ ಶೈಲಜಾ, "ನಾವು ವನವಾಸಕ್ಕೆ ಹೋದದ್ದು ಅಲ್ಲ ಹನಿಮೂನ್ ಗೆ, ನಾವು ವನವಾಸದಲ್ಲಿ ಇದ್ದಾಗ ಒಳ್ಳೆಯ ಕೋಣೆಗಳನ್ನು ಅರಣ್ಯ ಅಧಿಕಾರಿಗಳು ನಮಗೆ ನೀಡಿದ್ದರು" ಎಂದೆಲ್ಲಾ ಹೀನಾಯವಾಗಿ ಸಂಭಾಷಣೆ ಮಾಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಶೈಲಜಾ ಮನೆಗೆ ದಾಳಿ
ಕ್ಲಬ್ ಹೌಸ್ ನಲ್ಲಿ ನಡೆದ ವಿವಾದಾತ್ಮಕ ಚರ್ಚೆಯ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ಕಾರ್ಯಕರ್ತರ ಈ ಆಡಿಯೋಗೆ ಜನ ಆಕ್ರೋಶ ವ್ಯಕ್ತಪಡಿಸಿದರು. ಪುತ್ತೂರಿನ ಬಪ್ಪಳಿಗೆಯಲ್ಲಿರುವ ನ್ಯಾಯಾವಾದಿ ಶೈಲಜಾ ಅವರ ಮನೆಗೆ ಕೆಲ ಯುವಕರು ನುಗ್ಗಿ ಕಿಟಕಿ ಗ್ಲಾಸ್ ಗಳನ್ನು ಧ್ವಂಸ ಮಾಡಿದ್ದಾರೆ. ಮನೆಗೆ ಕಪ್ಪು ಮಸಿ ಎರಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಶೈಲಜಾ ಅವರ ಮನೆಗೆ ಪುತ್ತೂರು ನಗರ ಪೊಲೀಸ್ ಭಧ್ರತೆ ನೀಡಿದ್ದಾರೆ..

ಕಾಂಗ್ರೆಸ್ ಪಕ್ಷ ಹಿಂದೂ ಧರ್ಮದ ವಿರೋಧಿ
ಸಾಮಾಜಿಕ ಜಾಲಾತಾಣದಲ್ಲಿ ಈ ಆಡಿಯೋಗಳು ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ನಾಯಕಿಯ ವಿರುದ್ಧ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ ಪ್ರತಿಕ್ರಿಯಿಸಿದ್ದು, "ಶ್ರೀರಾಮನ ಶಾಪದಿಂದಲೇ ಕಾಂಗ್ರೆಸ್ ಪಕ್ಷ ಸರ್ವನಾಶವಾಗುತ್ತದೆ. ಕೋಟ್ಯಂತರ ಹಿಂದೂಗಳು ಪೂಜಿಸುವ ಶ್ರೀರಾಮನ ಬಗ್ಗೆ ಏನೇ ಮಾತನಾಡಿದರೂ ಯಾರು ಕೇಳುವುದಿಲ್ಲ ಎನ್ನುವ ಬಂಡ ದೈರ್ಯ ಕಾಂಗ್ರೆಸ್ ಇಟ್ಟಿಕೊಳ್ಳುವುದು ಬೇಡ. ಈ ಹುಚ್ಚಾಟದ ಚರ್ಚೆಯಿಂದ ಹಿಂದುಗಳ ಸ್ವಾಭಿಮಾನನ್ನು ಕೆಣಕಿದ್ದೀರಿ. ಮತಕ್ಕಾಗಿ ಚುನಾವಣೆ ಬಂದಾಗ ನಾನಾ ನಾಟಕ ಮಾಡುವ ನಿಮ್ಮ ಪಕ್ಷ ಹಿಂದೂ ವಿರೋಧಿ ಎನ್ನುವುದನ್ನು ಸಾಬೀತು ಮಾಡಿದೆ," ಎಂದು ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications