ಬೆಳ್ತಂಗಡಿಯಲ್ಲಿ ಜ್ಯೋತಿಷಿ ತಂದೆಯಿಂದ ಮಗನ ಬರ್ಬರ ಹತ್ಯೆ
ಮಂಗಳೂರು, ಫೆಬ್ರವರಿ 12: ತಂದೆಯೇ ತನ್ನ ಮಗನನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಟ್ಲ ಎಂಬಲ್ಲಿ ನಡೆದಿದೆ. 28 ವರ್ಷದ ನವೀನ್ ಕೊಲೆಯಾದ ದುರ್ದೈವಿ.
ನವೀನ್ ತಂದೆ ಮಂಜುನಾಥ್ ಹಾಗೂ ನವೀನ್ ಅವರ ಸಹೋದರ ರಾಘವೇಂದ್ರ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಬಂಟ್ವಾಳದಲ್ಲಿ ಅಕ್ರಮ ಜಾನುವಾರು ಸಾಗಾಟ ಲಾರಿ ಪಲ್ಟಿ , ಜಾನುವಾರು ವಶ
ಕಳೆದ ಡಿಸೆಂಬರ್ 31 ರಂದು ರಾತ್ರಿ ಹೊಸ ವರ್ಷದ ಪಾರ್ಟಿ ಮುಗಿಸಿ ಮನೆಗೆ ಬಂದಿದ್ದ ನವೀನ್ ಕುಡಿದ ಮತ್ತಿನಲ್ಲಿ ಮನೆಯಲ್ಲಿ ಗಲಾಟೆ ಮಾಡಿದ್ದ. ತಂದೆ ಮಂಜುನಾಥ್ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ತಂದೆ ಮಂಜುನಾಥ್ ಅವರಿಗೆ ನವೀನ್ ಚೂರಿಯಿಂದ ತಿವಿದಿದ್ದರಿಂದ ಮಂಜುನಾಥ್ ಹೊಟ್ಟೆಗೆ ಗಾಯವಾಗಿತ್ತು.
ಇದೇ ದ್ವೇಷದಿಂದ ಅಪ್ಪ ಮತ್ತು ಮಗನ ಮಧ್ಯೆ ಮನೆಯಲ್ಲಿ ಕಾಳಗ ನಡೆಯುತ್ತಿತ್ತು. ಭಾನುವಾರ ರಾತ್ರಿ ಇದೇ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ನವೀನ್ ಮೇಲೆ ತಂದೆ ಮಂಜುನಾಥ್ ಹಾಗೂ ಇನ್ನೊಬ್ಬ ಮಗ ರಾಘವೇಂದ್ರ ಸೇರಿಕೊಂಡು ಚೂರಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಮನೆಯ ಮುಂಭಾಗದ ರಸ್ತೆಯಲ್ಲಿ ರಕ್ತ ಚೆಲ್ಲಾಡಿದ್ದು ನವೀನನ್ನು ಅಟ್ಟಾಡಿಸಿ ಕೊಂಡು ಹೋಗಿ ಕೊಲೆಗೈದಿರುವಂತೆ ಕಂಡು ಬಂದಿದೆ.
ಮಂಜುನಾಥ್ ಮತ್ತು ರಾಘವೇಂದ್ರ ಬೆಳ್ತಂಗಡಿಯಲ್ಲಿ ಜ್ಯೋತಿಷ್ಯ ವೃತ್ತಿ ಮಾಡಿಕೊಂಡಿದ್ದರೆ, ನವೀನ್ ಮನೆಯಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದ. ಇದೀಗ ಘಟನೆ ಬಗ್ಗೆ ನವೀನ್ ಪತ್ನಿ ಶ್ರೀಮತಿ ಬೆಳ್ತಂಗಡಿ ಠಾಣೆಯಲ್ಲಿ ಮಾವ ಮಂಜುನಾಥ್ ಹಾಗೂ ರಾಘವೇಂದ್ರ ವಿರುದ್ಧ ದೂರು ನೀಡಿದ್ದಾರೆ.
ಮಂಜುನಾಥ್ ಅವರದ್ದು ಮೂಲತಃ ಹಾಸನ ಜಿಲ್ಲೆಯ ಕುಟುಂಬವಾಗಿದ್ದು ಬೆಳ್ತಂಗಡಿಯಲ್ಲಿ ಮನೆ ಮಾಡಿಕೊಂಡು ನೆಲೆಸಿದ್ದರು. ಘಟನೆ ಸಂಬಂಧ ಆರೋಪಿ ತಂದೆ ಮಂಜುನಾಥ್ ಮತ್ತು ಇನ್ನೊಬ್ಬ ಮಗ ರಾಘವೇಂದ್ರ ಅವರನ್ನು ಪೊಲೀಸರು ಬಂಧಿಸಿದ್ದಾರೆ.