ಅನಂತ್ ಕುಮಾರ್ ಸಾವು ಸಂಭ್ರಮಿಸಿದ 'ಮಂಗಳೂರು ಮುಸ್ಲಿಮ್ಸ್: ತಿರುಗೇಟು ಕೊಟ್ಟ ನೆಟ್ಟಿಗರು
ಮಂಗಳೂರು, ನವೆಂಬರ್ 12:ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನವನ್ನು ಸಂಭ್ರಮಿಸಿದ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಪ್ರಧಾನಿ ಮೋದಿ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್, ಎಲ್ ಕೆ ಅಡ್ವಾಣಿ ಅವರ ಸಾವನ್ನು ಬಯಸಿ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ನಲ್ಲಿ ಬರೆದಿರುವ ಬರಹದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಂಗಳೂರು ಮುಸ್ಲಿಂ ಪೇಜ್ ನಲ್ಲಿ 'ಹಿಂದೂ ಮುಸ್ಲಿಂ ಮಧ್ಯೆ ವಿಷ ಬಿತ್ತಿ ಹೋಗುವಾಗ ರಾಮ ಮಂದಿರ ತೋರಿಸಿ ಇವನಿಗೆ ಭಕ್ತರೇ. ವಾಜಪೇಯ್ ಅಶೋಕ್ ಸಿಂಘಾಲ್ , ಅನಂತ ಕುಮಾರ್ ಮುಂದೆ ಮನೋಹರ್ ಪಾರಿಕ್ಕರ್ , ಅಡ್ವಾಣಿ, ಉಮಾಭಾರತಿ, ಮೋದಿ, ಯೋಗಿ ಹೀಗೆ ದೇಶ ದ್ರೋಹಿಗಳ ಪಟ್ಟಿ ಬೆಳೆದರೂ ನಿಮ್ಮಿಂದ ಈ ಮುಂದೆ ಈ ದೇಶದ್ರೋಹಿಗಳ ಸಾವನ್ನು ನೋಡ ಬಹುದು ಹೊರತು ಸಾಮರಸ್ಯವಲ್ಲ. ಜಾತಿ, ಮಸೀದಿ, ಮುಸ್ಲಿಂ ಅನ್ನುವ ವಿಷ ಬೀಜ ಬಿತ್ತಿ ಅಧಿಕಾರ ನಡೆಸಿ ದೇಶ ಹಾಳು ಮಾಡುವ ಬದಲು ಇವರೆಲ್ಲ ನೀವು ನಂಬಿದ ಶಿವನ ಪಾದವೇ ಆದಷ್ಟು ಬೇಗ ಸೇರಲಿ' ಎಂದು ಬರೆದು ಪ್ರಕಟಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಇಂತಹ ಪೋಸ್ಟ್ ಮಾಡಿರುವ ಕಿಡಿಗೇಡಿಗಳನ್ನು ಶೀಘ್ರವೇ ಬಂಧಿಸುವಂತೆ ಒತ್ತಾಯಿಸಲಾಗಿದೆ.

ಇವರು ಭಯೋತ್ಪಾದಕರು
ಇದೀಗ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ವಿರುದ್ಧ ನೆಟ್ಟಿಗರು ಕಮೆಂಟ್ ಗಳ ಸುರಿಮಳೆ ಗೈದಿದ್ದಾರೆ. 'ಮುಸ್ಲಿಂ ನಾಮಧಾರಿ ಆದರೆ ಸಾಲೋದಿಲ್ಲ. ನಿಜವಾದ ಮುಸಲ್ಮಾನನಾಗಬೇಕು ಈ ಪೇಜನ್ನು ತನಿಖೆಗೆ ಒಳಪಡಿಸಿ . ಸಾವನ್ನು ಸಂಭ್ರಮಿಸುವ ವಿಕೃತ ಮನೋಭಾವ ಉಳ್ಳವ ಮುಸಲ್ಮಾನನಾಗಲಾರ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಕೆಲವರು ತಮ್ಮ ಕಮೆಂಟ್ ನಲ್ಲಿ ಅನಂತ ಕುಮಾರ್ ಅವರ ಸಾವನ್ನು ಸಂಭ್ರಮಿಸಿದ 'ಮಂಗಳೂರು ಮುಸ್ಲಿಂ' ಫೇಸ್ ಬುಕ್ ಪೇಜ್ ನವರು ಭಯೋತ್ಪಾದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಸಾಮರಸ್ಯಕ್ಕೆ ತೊಂದರೆ
ಸಾವನ್ನು ಸಂಭ್ರಮಿಸುವ ಯಾರೊಬ್ಬನನ್ನು ಸಮರ್ಥಿಸಲು ಸಾಧ್ಯವಿಲ್ಲ. ಈ ಫೇಸ್ ಬುಕ್ ಪೇಜ್ ಅನ್ನು ತನಿಖೆಗೆ ಒಳಪಡಿಸಿ. ಈ ಅವಹೇಳಕಾರಿ ಪೋಸ್ಟ್ ಪ್ರಕಟಿಸಿದವರನ್ನು ಬಂಧಿಸಿ ಎಂದು ಒತ್ತಾಯ ಕೂಡ ಕೇಳಿಬರತೊಡಗಿದೆ. ಉಗ್ರರು ಎಂದಾದರೂ ಶ್ರದ್ಧಾಂಜಲಿ ಹೇಳಬಹುದೇ ಎಂದು ನೆಟ್ಟಿಗರು ಪ್ರಶ್ನಿಸಿ ಚಾಟಿ ಏಟು ನೀಡಿದ್ದಾರೆ.
ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟವಾಗಿರುವ ಪೋಸ್ಟ್ ಸಾಮಾಜಿಕ ಸಾಮರಸ್ಯಕ್ಕೆ ತೊಂದರೆ ಮಾಡುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಕೇಳಿಬರುತ್ತಿದೆ.

ಅವಹೇಳನಕಾರಿಯಾಗಿ ಬರೆದು ಪೋಸ್ಟ್
ಈ ಹಿಂದೆ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ವಿವಾದ ಭುಗಿಲೆದ್ದು ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದ ಸಂದರ್ಭದಲ್ಲಿ ಈ ಮಂಗಳೂರು ಮುಸ್ಲಿಂ ಪೇಜ್ ವಿವಾದಿತ ಪೋಸ್ಟ್ ಪ್ರಕಟಿಸಿತ್ತು. ಮಂಗಳೂರು ಮುಸ್ಲಿಂ ಪೇಜ್ ಎಂಬ ಫೇಸ್ ಬುಕ್ ಖಾತೆಯಲ್ಲಿ ಚೈತ್ರಾ ಕುಂದಾಪುರ ಅವರ ವಿರುದ್ಧ ಅವಹೇಳನಕಾರಿಯಾಗಿ ಬರೆದು ವಿವಾದಾತ್ಮಕ ಪೋಸ್ಟ್ ಪ್ರಕಟಿಸಲಾಗಿತ್ತು.
"ನಿನ್ನ ಅಹಂಕಾರಕ್ಕೆ ಇಲ್ಲಿಂದಲೇ ಅಂಕುಶ ಬೀಳಲಿ. ಹಿಂದುತ್ವವಾದಿಗಳೇ ನೀವೇ ಇವಳ ಕೈ ಕಾಲು ಮುರಿಯಿರಿ. ಈ ಮಾರಾಮಾರಿ ಚೈತ್ರಾ ಕುಂದಾಪುರ ಬೀದಿ ಹೆಣವಾಗುವ ತನಕ ಹೋಗಲಿ ಎಂದು ಅಲ್ಲಾಹುನಲ್ಲಿ ಬೇಡಿಕೊಳ್ಳುತ್ತೇನೆ" ಎಂದು ವಿವಾದಾತ್ಮಕ ಪೋಸ್ಟ್ ಪ್ರಕಟಿಸಲಾಗಿತ್ತು.

ಹಲವಾರು ಪ್ರಕರಣಗಳು ದಾಖಲು
ಇದಲ್ಲದೇ ಈ ಹಿಂದೆ ಕೂಡ ಮಂಗಳೂರು ಮುಸ್ಲಿಂ ಪೇಜ್ ನಲ್ಲಿ ಹವಾರು ವಿವಾದಿತ, ಪ್ರಚೋದನಾತ್ಮಕ ಪೋಸ್ಟ್ ಪ್ರಕಟಿಸಲಾಗಿತ್ತು. ಇತ್ತೀಚಿನ ದಿಗಳಲ್ಲಿ ಈ ಪೇಜ್ ನಲ್ಲಿ ಲಂಗು ಲಗಾಮಿಲ್ಲದೇ ವಿವಾದಿತ ಪೋಸ್ಟ್ ಪ್ರಕಟಿಸಲಾಗುತ್ತಿದೆ. ಈ ಫೇಸ್ ಬುಕ್ ಪೇಜ್ ವಿರುದ್ಧ ಈ ವರೆಗೆ ಹಲವಾರು ಪ್ರಕರಣಗಳು ದಾಖಲಾಗಿದೆ.

ಅಸಹಾಯಕರಾದ ಪೊಲೀಸರು
ಆದರೆ, ಈ ಫೇಸ್ ಬುಕ್ ಪೇಜ್ ನಲ್ಲಿ ವಿವಾದಿತ ಬರಹ ಪ್ರಕಟಿಸುವವರನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಈ ಪೇಜ್ ನಲ್ಲಿ ಬರಹ ಪ್ರಕಟಿಸುವವರು ವಿದೇಶದಲ್ಲಿ ಕುಳಿತು ಈ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ ಎಂದು ಸಂಶಯಿಸಲಾಗಿದೆ.
ಆದರೆ ಸಾಮರಸ್ಯ ಕದಡುತ್ತಿರುವ ಈ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ವಿರುದ್ಧ ಕೈಗೊಳ್ಳಲು ಪೊಲೀಸರು ಅಸಹಾಯಕರಾಗಿರುವುದು ಮಾತ್ರ ದುರಂತ.












Click it and Unblock the Notifications