ಜನವರಿ 30ರಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ ಬ್ರಹ್ಮಕಲಶೋತ್ಸವ
ಮಂಗಳೂರು, ಜನವರಿ 29: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜನವರಿ 30ರಂದು ಬೆಳಗ್ಗೆ ಬ್ರಹ್ಮಕಲಶೋತ್ಸವ ಹಾಗೂ ಜನವರಿ 31ರಂದು ನಾಗಮಂಡಲ ಸೇವೆ ನಡೆಸಲು ತೀರ್ಮಾನಿಸಲಾಗಿದೆ.
ನಿನ್ನೆ ಸೋಮವಾರದಂದು ಕಟೀಲು ದೇವರಿಗೆ ಅಷ್ಟಬಂಧ ನಡೆದು, ಸಾನ್ನಿಧ್ಯ ಕಲಶಾಭಿಷೇಕ, ಚಿನ್ನದ ರಥೋತ್ಸವ ಸಂಪನ್ನಗೊಂಡಿದೆ. ಇಂದಿನಿಂದ ಹನ್ನೆರಡು ರಂಗಪೂಜೆಗಳು ಶ್ರೀ ಕ್ಷೇತ್ರದಲ್ಲಿ ನಡೆಯಲಿದ್ದು, ಮುಂದಿನ ಮೂರು ವರುಷಗಳಿಗಾಗುವಷ್ಟು ರಂಗಪೂಜೆಗಳು ಮುಂಗಡ ನೋಂದಣಿಯಾಗಿರುವುದರಿಂದ ಅಷ್ಟಬಂಧ ಸಾನ್ನಿಧ್ಯ ಕಲಶ ನಡೆದ ಬಳಿಕ ಇಂದಿನಿಂದ ದಿನಂಪ್ರತಿ ಹನ್ನೆರಡು ರಂಗಪೂಜೆಗಳು ನಡೆಯಲಿವೆ.
ಇದುವರೆಗೆ 9 ರಂಗಪೂಜೆಗಳು ನಡೆಯುತ್ತಿದ್ದು, ಭಕ್ತರಿಗೆ ಅನುಕೂಲವಾಗಲು ಇನ್ನು 12ರಂಗಪೂಜೆ ನಡೆಯಲಿವೆ. ಮುಂದಿನ ದಿನಗಳಲ್ಲಿ ಸರಳವಾಗಿ ಒಂದು ಸುತ್ತಿನ ಚಿನ್ನದ ರಥೋತ್ಸವ ನಡೆಸುವ ಚಿಂತನೆಯೂ ಮಾಡಲಾಗಿದೆ. ದೇವರಿಗೆ ರೇಷ್ಮೆ ಮತ್ತು ಹತ್ತಿಯ ಸೀರೆಗಳನ್ನಷ್ಟೇ ಉಡಿಸಲು ನಿರ್ಧರಿಸಲಾಗಿದೆ.

ಬ್ರಹ್ಮ ಕಲಶೋತ್ಸವದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದಲ್ಲಿ 45 ಕೋಟಿ ರೂಪಾಯಿ ವೆಚ್ಚದಲ್ಲಿ ಹಲವಾರು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ದೇವಸ್ಥಾನದ ಒಳ ಪ್ರಾಂಗಣದಲ್ಲಿ ಕುಸುರಿ ಕೆಲಸಗಳು, ಚಿತ್ರ ಚಿತ್ತಾರಗಳು ಮಾಡಿ ದೇವಳದ ಸೌಂದರ್ಯ ವೃದ್ಧಿಸುವುದು, ಚಿನ್ನದ ಧ್ವಜಸ್ಥಂಭ ನಿರ್ಮಾಣ, ಶ್ರೀ ದೇವರ ಚಿನ್ನದ ಮಂಟಪ, ತೀರ್ಥಮಂಟಪದ ಎದುರು ನಾಸಿಕ ನಡಪ್ಪರ್ ರಚನೆ, ಸರಳ ಮದುವೆಗಾಗಿ ದೇಗುಲದ ಎದುರು ಲಕ್ಷ್ಮೀಸ್ವಯಂವರ ಮಂಟಪ, ನೂತನ ಸುಸಜ್ಜಿತ ಪರಿಸರಸ್ನೇಹಿ ಅಡುಗೆಶಾಲೆ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.

ಭೋಜನಶಾಲೆಗಳ ನಿರ್ಮಾಣ, ಕುದುರುವಿನಲ್ಲಿ ಯಜ್ಞವನ, ಕಾಲುದಾರಿ, ಉದ್ಯಾನವನ ನಿರ್ಮಾಣ, ರಥಬೀದಿಯಿಂದ ಕುದುರುವಿಗೆ ಸೇತುವೆ ನಿರ್ಮಾಣ, ದೇಗುಲದ ಕಚೇರಿಯನ್ನು ಸ್ಥಳಾಂತರಿಸಿ ಇನ್ನಷ್ಟು ಸುವ್ಯವಸ್ಥಿತಗೊಳಿಸುವುದು, ಭ್ರಾಮರೀ ವಸತಿ ನವೀಕರಣ, ಬೆಳ್ಳಿ ರಥದ ಕೋಣೆಯನ್ನು ಬ್ರಹ್ಮರಥದ ಪಕ್ಕದಲ್ಲಿ ರಚಿಸುವುದು, ಬಸ್ ಸ್ಟಾಂಡ್ ಬಳಿ ಶೌಚಾಲಯ ಸಂಕೀರ್ಣ, ಘನತ್ಯಾಜ್ಯ ವಿಲೇವಾರಿ ಘಟಕ, ಎಸ್ಟಿಪಿ ದ್ವಿತೀಯ ಹಂತ ವಿಸ್ತರಣೆ, ಸರಸ್ವತೀ ಸದನದ ಜಾಗವನ್ನು ತಗ್ಗಿಸಿ ಪಾರ್ಕಿಂಗ್ ನಿರ್ಮಾಣ, ಹೊಸದಾದ ದೊಡ್ಡ ಸಭಾಭವನ ನಿರ್ಮಾಣದ ಯೋಜನೆಗಳ ಕಾಮಗಾರಿಗೆ ಶೀಘ್ರ ಚಾಲನೆ ದೊರಕಲಿದೆ.












Click it and Unblock the Notifications