ಶೋಭಾ ಸಂವಿಧಾನ ತಿಳಿದುಕೊಳ್ಳಲಿ - ಯುಟಿ ಖಾದರ್ ವಾಗ್ದಾಳಿ
ಮಂಗಳೂರು, ಜುಲೈ 21: "ಇತ್ತೀಚೆಗೆ ಕೇಂದ್ರ ಗೃಹ ಸಚಿವರಿಗೆ ನೀಡಿದ ಕೊಲೆಗಳ ಪಟ್ಟಿಯ ಬಗ್ಗೆ ಶೋಭಾ ಆತ್ಮಾವಲೋಕನ ಮಾಡಿಕೊಳ್ಳಲಿ. ಅವರು ಸಂವಿಧಾನ ತಿಳಿದುಕೊಳ್ಳಲಿ," ಎಂದು ಸಚಿವ ಯುಟಿ ಖಾದರ್ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆಯನ್ನು ಟೀಕಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಶರತ್ ಪ್ರಕರಣವಲ್ಲದೆ ಅಶ್ರಫ್ ಕಲಾಯಿ, ಹರೀಶ್ ಪೂಜಾರಿ, ವಿನಾಯಕ ಬಾಳಿಗಾ, ಪ್ರವೀಣ್ ಪೂಜಾರಿ ಹತ್ಯೆಯ ಬಗ್ಗೆ ಶೋಭಾ ಯಾಕೆ ಮಾತನಾಡುತ್ತಿಲ್ಲ?" ಎಂದು ಪ್ರಶ್ನಿಸಿದ್ದಾರೆ.

"ಸಂಸದೆ ಶೋಭಾ ಕರಂದ್ಲಾಜೆ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದ ಕೊಲೆಯಲ್ಲಿ ಭಯೋತ್ಪಾದಕರ ಪಾತ್ರ ಇದೆ ಎಂಬ ಮಾಹಿತಿ ಬಂದ ತಕ್ಷಣ ರಾಜ್ಯ ಸರಕಾರ ಯಾರದೇ ಬೇಡಿಕೆಗೆ ಕಾಯದೆ ಸ್ವಯಂ ಆಗಿ ಎನ್ಐಎ ತನಿಖೆಗೆ ಒಪ್ಪಿಸಿದೆ," ಎಂಬುದನ್ನು ಶೋಭಾ ಕರಂದ್ಲಾಜೆ ತಿಳಿದುಕೊಳ್ಳಬೇಕು ಎಂದು ಖಾದರ್ ಖಾರವಾಗಿ ಹೇಳಿದರು.
"ಐಎಎಸ್ ಅಧಿಕಾರಿ ಅನುರಾಗ್ ತಿವಾರಿಯ ಅಸಹಜ ಸಾವಿನ ಸಂದರ್ಭವೂ ಶೋಭಾ ಸಹಿತ ಬಿಜೆಪಿಗರು ಬೇಕಾಬಿಟ್ಟಿ ಆರೋಪ ಸುರಿಸಿದರು. ಆದರೆ, ವಿಧಾನಸಭೆಯಲ್ಲಿ ಬಿಜೆಪಿ ಶಾಸಕರೇ ಇದರ ಬಗ್ಗೆ ಸೊಲ್ಲೆತ್ತಲಿಲ್ಲ. ಹೀಗೆ ಅಸ್ತಿತ್ವ ಕಳಕೊಂಡಿರುವ ಶೋಭಾ ಶರತ್ ಹತ್ಯೆಯನ್ನು ಎನ್ಐಎಗೆ ಕೊಡಿ ಎನ್ನುತ್ತಾರೆ. ಎನ್ಐಎಗೆ ಯಾವುದನ್ನು ಕೊಡಬೇಕು ಮತ್ತು ಕೊಡಬಾರದು ಎಂಬ ಕನಿಷ್ಠ ಜ್ಞಾನ ಸಂಸದೆಯಾದ ಶೋಭಾರಿಗೆ ಇಲ್ಲವೇ?
ಅವರು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ," ಎಂದು ಸಚಿವ ಯು.ಟಿ.ಖಾದರ್ ಆರೋಪಿಸಿದರು.












Click it and Unblock the Notifications