ಶಿರಾಡಿ ಘಾಟ್ ರಸ್ತೆ ದುರಸ್ತಿ ಪೂರ್ಣ: ವಾಹನ ಸಂಚಾರ ಆರಂಭ
ಮಂಗಳೂರು, ಅಕ್ಟೋಬರ್.03: ಕಳೆದ ಒಂದೂವರೆ ತಿಂಗಳಿನಿಂದ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದ್ದ ಶಿರಾಡಿ ಘಾಟ್ ರಸ್ತೆ ಬುಧವಾರದಿಂದ(ಅಕ್ಟೋಬರ್.03) ಪ್ರಯಾಣಿಕರ ವಾಹನಗಳಿಗೆ ತೆರೆದುಕೊಂಡಿದೆ.
ಇಂದು ಮುಂಜಾನೆಯಿಂದಲೇ ಶಿರಾಡಿಘಾಟ್ ನಲ್ಲಿ ಬೆಂಗಳೂರು - ಮಂಗಳೂರು ಸೇರಿದಂತೆ ಇತರ ನಗರಗಳನ್ನು ಸಂಪರ್ಕಿಸುವ ಬಸ್ ಗಳ ಸಂಚಾರ ಆರಂಭವಾಗಿದೆ.
ಘಟ್ಟ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಶಿರಾಡಿಘಾಟ್ ರಸ್ತೆಯ 12 ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿತ್ತು. ಇದರಿಂದಾಗಿ ಘಾಟ್ ನಲ್ಲಿ ಎಲ್ಲಾ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಹೆದ್ದಾರಿ ಇಲಾಖೆಯ ಇಂಜಿನಿಯರ್ ಗಳು ಹಾಗೂ ಅಧಿಕಾರಿಗಳ ತಂಡದ ಅವಿರತ ಪ್ರಯತ್ನದಿಂದ ರಸ್ತೆ ದುರಸ್ತಿ ಪೂರ್ಣಗೊಂಡಿದೆ. ಕೆಲದಿನಗಳ ಹಿಂದೆ ಘಾಟ್ ರಸ್ತೆಯಲ್ಲಿ ಲಘು ವಾಹನಗಳಿಗೆ ಅನುಮತಿ ನೀಡಲಾಗಿತ್ತು.
ಇಂದಿನಿಂದ ಬಸ್ ಗಳ ಸಂಚಾರಕ್ಕೂ ಘಾಟ್ ರಸ್ತೆಯನ್ನು ತೆರೆಯಲಾಗಿದೆ. ಆದರೆ ಈ ರಸ್ತೆಯಲ್ಲಿ ಗೂಡ್ಸ್ ಹಾಗು ಘನ ವಾಹನಗಳ ಸಂಚಾರಕ್ಕೆ ಅನುಮತಿ ನಿರಾಕರಿಸಲಾಗಿದೆ.

ಈ ಘಾಟ್ ರಸ್ತೆಯ 5 ಕಡೆಗಳಲ್ಲಿ ಏಕಮುಖ ಚಾಲನೆಯ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಇದೀಗ ಪ್ರಯಾಣಿಕ ಬಸ್ ಗಳಿಗೂ ಘಾಟ್ ರಸ್ತೆಯಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ.

ಮುಂದಿನ ಕೆಲವೇ ದಿನಗಳಲ್ಲಿ ರಸ್ತೆಯ ಸ್ಥಿತಿಯನ್ನು ಪರಿಶೀಲಿಸಿ ಸರಕು ಘನ ವಾಹನಗಳಿಗೂ ಅವಕಾಶವನ್ನು ನೀಡಲು ದಕ್ಷಿಣ ಕನ್ನಡ ಹಾಗೂ ಹಾಸನ ಜಿಲ್ಲಾಡಳಿತ ತೀರ್ಮಾನಿಸಿದೆ.












Click it and Unblock the Notifications