ಮೋದಿಯವರಿಗೆ ತಪ್ಪನ್ನು ಒಪ್ಪಿಕೊಳ್ಳುವ ಮನೋಭಾವವಿಲ್ಲ:ಶತ್ರುಘ್ನ ಸಿನ್ಹಾ
ಮಂಗಳೂರು, ಏಪ್ರಿಲ್ 14: ಬಿಜೆಪಿಯಲ್ಲಿ ಒನ್ ಮೆನ್ ಶೋ, ಟೂ ಮೆನ್ಸ್ ಆರ್ಮಿ ರೀತಿಯಲ್ಲಿ ದರ್ಬಾರ್ ನಡೆಯುತ್ತಿದೆ. ತಪ್ಪನ್ನು ಒಪ್ಪಿಕೊಳ್ಳದ ಅಹಂಕಾರದ ಮನೋಭಾವ ಮೋದಿಯವರಲ್ಲಿದೆ ಎಂದು ಮೋದಿ ಅವರ ವಿರುದ್ಧ ಶತ್ರುಘ್ನ ಸಿನ್ಹಾ ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಂಗಳೂರು ಹೊರವಲಯದ ಮುಡಿಪು ಎಂಬಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಮೋದಿ ಹಾಗೂ ಅಮಿತ್ ಶಾ ಅವರ ತುಘಲಕ್ ದರ್ಬಾರ್ ನಡೆಯುತ್ತಿದೆ ಎಂದು ಕಿಡಿಕಾರಿದರು.
ಯಾರಾದರೂ ನೀವು ಮಾಡುತ್ತಿರುವುದು ತಪ್ಪು ಎಂದು ಹೇಳಿದ್ದರೂ ಅದನ್ನು ಒಪ್ಪಿಕೊಳ್ಳುವ ಮನೋಭಾವ ಮೋದಿಯವರಲ್ಲಿ ಇಲ್ಲ. ಪಕ್ಷವನ್ನು ಕಟ್ಟಿ ಬೆಳೆಸಿದ ಅಡ್ವಾಣಿ, ವಾಜಪೇಯಿಯಂತವರ ಮಾತಿಗೂ ಬಿಜೆಪಿಯಲ್ಲಿ ಬೆಲೆ ಇಲ್ಲದಂತಾಗಿದೆ ಎಂದು ಶತ್ರುಘ್ನ ಸಿನ್ಹಾ ಆಕ್ರೋಶ ವ್ಯಕ್ತಪಡಿಸಿದರು.

ನಾನು ಸರ್ವಧರ್ಮ, ಸರ್ವಜಾತಿ ಒಂದೇ ತತ್ವವನ್ನು ಪಾಲಿಸಿಕೊಂಡು ಬಂದವನು . ಯಾವಾಗ ನನ್ನ ಸೈದ್ದಾಂತಿಕ ನಿಲುವಿಗೆ, ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬಿಜೆಪಿಯಲ್ಲಿ ಬೆಲೆ ಸಿಗಲಿಲ್ಲವೋ ಬಿಜೆಪಿ ಪಕ್ಷದಿಂದ ಅನಿವಾರ್ಯವಾಗಿ ಹೊರಬರಬೇಕಾಯಿತು ಎಂದು ಸಿನ್ಹಾ ಅಭಿಪ್ರಾಯಪಟ್ಟರು.
ಮೋದಿಯವರು ಕಳೆದ ಐದು ವರ್ಷದಲ್ಲಿ ವಿದೇಶ ಪ್ರಯಾಣ ಮಾಡುವುದು ಕೇವಲ ವೈಯಕ್ತಿಕ ವರ್ಚಸ್ಸಿಗಾಗಿ ಮಾತ್ರ. ಹಾಗೆಯೇ ಈ ಚುನಾವಣೆಗಾಗಿ ಸುಮಾರು 10 ಸಾವಿರ ರೂಪಾಯಿ ಕೋಟಿ ಹಣ ಖರ್ಚು ಮಾಡುತ್ತಿದ್ದಾರೆ. ಇದೆಲ್ಲ ದೇಶದ ಜನರಿಗೆ ಗೊತ್ತಾಗಬೇಕಿದೆ ಎಂದ ಶತ್ರುಘ್ನ ಸಿನ್ಹಾ, ಮೋದಿ ನೋಟ್ ಬ್ಯಾನ್, ಜಿಎಸ್ಟಿ ಕಾನೂನುಗಳನ್ನು ಏಕಾಏಕಿ ತಂದು ದೇಶದಲ್ಲಿ ಅದೆಷ್ಟೋ ವ್ಯಾಪಾರಸ್ಥರು, ಬಡವರು ಸಂಕಷ್ಟವನ್ನೆದರಿಸುವಂತೆ ಮಾಡಿದ್ದಾರೆ. ನೋಟ್ ಬ್ಯಾನ್ ಸಂದರ್ಭದಲ್ಲಿ ಆರಂಭದಲ್ಲಿ ನಾನು ಅದನ್ನು ವಿರೋಧಿಸಿದ್ದೆ ಎಂದರು.
ರಾಹುಲ್ ಗಾಂಧಿ ದೇಶದ ಭರವಸೆಯ ನಾಯಕರಾಗಿದ್ದಾರೆ. ದೇಶದ ಅಭಿವೃದ್ಧಿಯ ಬಗ್ಗೆ ಕನಸು ಹೊತ್ತಿರುವ ಅವರಿಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿ ಮಿಥುನ್ ರೈಗೆ ಎಲ್ಲರೂ ವಿಜಯಿಯಾಗಿಸುವ ಮೂಲಕ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬೆಲೆ ಕೊಡುವ ಜನರನ್ನು ಆಯ್ಕೆ ಮಾಡೋಣ ಎಂದು ಸಿನ್ಹಾ ಹೇಳಿದರು.












Click it and Unblock the Notifications