Mangaluru Blast Case: ಶಂಕಿತ ಉಗ್ರ ಶಾರಿಕ್ ಗುಣಮುಖನಾಗಲು ಬೇಕು 25 ದಿನ
ಮಂಗಳೂರು, ನವೆಂಬರ್ 23: ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಆಟೋರಿಕ್ಷಾ ಬ್ಲಾಸ್ಟ್ನಲ್ಲಿ ಸುಟ್ಟು ಗಾಯಗೊಂಡಿರುವ ಶಂಕಿತ ಉಗ್ರ ಶಾರಿಕ್ ಗುಣಮುಖನಾಗಲು ಇನ್ನೂ 25 ದಿನಗಳು ಬೇಕಾಗುತ್ತದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
8 ಮಂದಿ ತಜ್ಞ ವೈದ್ಯರ ತಂಡ ಶಾರಿಕ್ನ ಆರೋಗ್ಯ ತಪಾಸಣೆ ಮಾಡುತ್ತಿದ್ದು, ಆಟೋರಿಕ್ಷಾದಲ್ಲಿ ಸಿಡಿದಿರುವ ಕುಕ್ಕರ್ ಮುಚ್ಚಳ ಶಾರಿಕ್ನ ಕುತ್ತಿಗೆಯ ಭಾಗಕ್ಕೆ ಬಡಿದಿದೆ. ಅಲ್ಲದೆ ಆತನಿಗೆ ಸುಟ್ಟ ಗಾಯಗಳಾಗಿರುವುದರಿಂದ ತೀವ್ರ ನಿಗಾದಲ್ಲಿ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಯಾವುದೇ ಕ್ಷಣದಲ್ಲಿ ಸೋಂಕು ತಗುಲಿ ಆರೋಗ್ಯ ಏರುಪೇರಾಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.
Mangaluru blast case: ಆಟೋ ಚಾಲಕನ ಕುಟುಂಬಸ್ಥರಿಗೆ 50 ಸಾವಿರ ರೂ ನೀಡಿದ ಆರಗ ಜ್ಞಾನೇಂದ್ರ
ಶಾರಿಕ್ಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡುತ್ತಿದ್ದು, ಶ್ವಾಸಕೋಶದಲ್ಲಿ ಹೊಗೆ ತುಂಬಿಕೊಂಡ ಕಾರಣ ವಿಶೇಷ ಚಿಕಿತ್ಸೆ ಒದಗಿಸಲಾಗುತ್ತಿದೆ. ಇನ್ನು ಮೂರು ವಾರಗಳ ಕಾಲ ಚಿಕಿತ್ಸೆ ಮುಂದುವರೆಯಲಿದೆ. ಶಾರಿಕ್ ಎಳೆಯ ಪ್ರಾಯವಾಗಿರುವುದರಿಂದ ಚಿಕಿತ್ಸೆಗೆ ಅನುಕೂಲವಾಗಿದೆ. ಸುಟ್ಟ ಗಾಯಗಳಾಗಿರುವುದರಿಂದ ಪರಿಸ್ಥಿತಿ ಸ್ಥಿರವಾಗಿದ್ದರೂ ಸೂಕ್ಷ್ಮವಾಗಿದೆ ಎಂದು ಆಸ್ಪತ್ರೆಯ ವೈದ್ಯ ಮೂಲಗಳ ಮಾಹಿತಿ ನೀಡಿದೆ.
ಇನ್ನು ಕುಕ್ಕರ್ ಬ್ಲಾಸ್ಟ್ ಪ್ರಕರಣದ ಹಿಂದೆ ಸಮಾಜದಲ್ಲಿ ಆತಂಕ ಸೃಷ್ಟಿಸುವ ಹುನ್ನಾರ ಅಡಗಿದ್ದು, ದೇಶದ ಕೋಮು ಸೌಹಾರ್ದತೆಯನ್ನು ಕೆಡಿಸುವ ಷಡ್ಯಂತರ ಎಂದು ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರ ಪ್ರಶ್ನಿಗಳಿಗೆ ಉತ್ತರಿಸಿದ ಅವರು, ಆರೋಪಿ ಶಾರಿಕ್ ವಿಚಾರಣೆಯಿಂದ ಮತ್ತಷ್ಟು ಸತ್ಯ ಹೊರಬರುವ ಸಾಧ್ಯತೆಯಿದೆ. ಆದ್ದರಿಂದ ಆತನ ಪ್ರಾಣ ಉಳಿಸುವುದು ನಮಗೆ ಅತೀ ಅಗತ್ಯವಾಗಿದೆ. ಪ್ರಾರಂಭದ ದಿನದಿಂದಲೂ ಎನ್ಐಎ ಹಾಗೂ ಕೇಂದ್ರದ ಇನ್ನಿತರ ತನಿಖಾ ಸಂಸ್ಥೆಗಳು ನಮ್ಮೊಂದಿಗೆ ಇದೆ. ಸದ್ಯದಲ್ಲಿಯೇ ಈ ಪ್ರಕರಣವನ್ನು ಔಪಚಾರಿಕವಾಗಿ ಎನ್ಐಎಗೆ ಹಸ್ತಾಂತರಿಸಲಾಗುತ್ತದೆ. ಆದರೂ ನಮ್ಮ ಕಾರ್ಯಾಚರಣೆ ಈಗಾಗಲೇ ಮಂಗಳೂರು, ಕೊಚ್ಚಿ, ಕೊಯಮತ್ತೂರು ಮೊದಲಾದೆಡೆಗಳಲ್ಲಿ ನಡೆಯುತ್ತಿದೆ ಎಂದರು.
ಪ್ರಕರಣದ ತನಿಖೆಗೆಂದು ನಾವು ಹಲವಾರು ಮಂದಿಯನ್ನು ವಶಕ್ಕೆ ಪಡೆದಿದ್ದೇವೆ. ಆದರೆ ಅವರೆಲ್ಲರೂ ಆರೋಪಿಳಾಗಿರುವುದಿಲ್ಲ. ನಾವು ಅವರನ್ನು ಬಂಧಿಸುತ್ತಿಲ್ಲ. ಬರೀ ವಿಚಾರಣೆಗೆ ಕರೆ ತರುತ್ತಿದ್ದೇವೆ. ಬೆಂಗಳೂರು ಸೇರಿದಂತೆ ಎಂಟು ಕಡೆಗಳಲ್ಲಿ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದೇವೆ. ಆರೋಪಿಗಳೆಂದು ನಾವು ಯಾರನ್ನೂ ವಶಕ್ಕೆ ಪಡೆದಿಲ್ಲ. ಎಲ್ಲಾ ರೀತಿಯಿಂದ ತನಿಖೆ ಮಾಡುತ್ತಿದ್ದೇವೆ. ನಾವು ಒಬ್ಬರನ್ನು ಹಿಡಿಯುವ ಪ್ರಶ್ನೆಯಿಲ್ಲ, ಬದಲಾಗಿ ಕೃತ್ಯದ ಹಿಂದಿರುವ ಶಕ್ತಿಯನ್ನು ಹಿಡಿಯುವ ಉದ್ದೇಶವಿದೆ ಎಂದು ಪ್ರವೀಣ್ ಸೂದ್ ಹೇಳಿದ್ದಾರೆ.
ಇನ್ನೂ ಆಟೋ ಬ್ಲಾಸ್ಟ್ನಲ್ಲಿ ಗಾಯಗೊಂಡಿರುವ ಚಾಲಕ ಪುರುಷೋತ್ತಮ್ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಬರಿಸಲಿದೆ ಎಂದು ಗೃಹ ಸಚಿವ ಭರವಸೆ ನೀಡಿದ್ದು, ಕುಟುಂಬಸ್ಥರಿಗೆ 50 ಸಾವಿರ ರೂ. ಪರಿಹಾರವಾಗಿ ನೀಡಿದ್ದಾರೆ. ಅಲ್ಲದೆ ವೈದ್ಯರ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ.