ಮಂಗಳೂರಿಗೆ ಹೊಸ ರೈಲ್ವೆ ವಿಭಾಗ: ಮೌನ ಮುರಿದ ರೈಲ್ವೆ ಇಲಾಖೆ
ಮಂಗಳೂರು, ಜುಲೈ 22: ಕರ್ನಾಟಕದ ಕರಾವಳಿ ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಬೇಕು ಎಂಬ ಬಹುಕಾಲದ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರತ್ಯೇಕ ವಿಭಾಗಕ್ಕೆ ಒಪ್ಪಿಗೆ ಸಿಕ್ಕಿದೆ ಎಂಬ ಸುದ್ದಿಗಳು ಸಹ ಹರಿದಾಡುತ್ತಿವೆ.
ಸೋಮವಾರ ಈ ಕುರಿತು ಪಾಲಕ್ಕಾಡ್ ರೈಲ್ವೆ ವಿಭಾಗ ಪ್ರಕಟಣೆಯ ಮೂಲಕ ಮಾಹಿತಿ ನೀಡಿದೆ. ಮಂಗಳೂರು ಪ್ರತ್ಯೇಕ ರೈಲ್ವೆ ವಿಭಾಗವಾಗಲಿದೆ ಎಂಬ ಸುದ್ದಿಗಳು ಆಧಾರರಹಿತ. ಈ ಕುರಿತು ಯಾವುದೇ ತೀರ್ಮಾನವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ದಕ್ಷಿಣ ರೈಲ್ವೇ ವ್ಯಾಪ್ತಿಯ ಪಾಲಕ್ಕಾಡ್ ವಿಭಾಗದಿಂದ ಮಂಗಳೂರು ಪ್ರತ್ಯೇಕಿಸಲು ಯಾವುದೇ ಪ್ರಸ್ತಾವನೆ ಬಂದಿಲ್ಲ, ಪ್ರಾಥಮಿಕ ಕಾರ್ಯಗಳನ್ನು ಆರಂಭಿಸಿಲ್ಲ. ಈ ಕುರಿತು ಹರಿದಾಡುತ್ತಿರುವ ವರದಿಗಳು ನಿರಾಧಾರ ಎಂದು ಹೇಳಿದೆ.
ಮಂಗಳೂರು ನಗರದಲ್ಲಿ ಕೆಲವು ದಿನಗಳ ಹಿಂದೆ ನಡೆದ ಸಭೆಯಲ್ಲಿ ಪ್ರತ್ಯೇಕ ರೈಲ್ವೆ ವಿಭಾಗದ ಕುರಿತು ಚರ್ಚೆ ನಡೆದಿಲ್ಲ. ಮಂಗಳೂರಿಗೆ ರೈಲು ಸೇವೆ ಉತ್ತಮಗೊಳಿಸಲು ಚರ್ಚೆ ನಡೆದಿದೆ. ಪಾಲಕ್ಕಾಡ್ ವಿಭಾಗ ಪ್ರತ್ಯೇಕಿಸುವ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಶನಿವಾರ ಪಾಲಕ್ಕಾಡ್ ರೈಲು ವಿಭಾಗ ವಿಭಜನೆ ಮಾಡುವ ಕುರಿತ ಸುದ್ದಿಗಳ ಬಗ್ಗೆ ದಕ್ಷಿಣ ರೈಲ್ವೇ ವಿಭಾಗೀಯ ರೈಲ್ವೇ ಮ್ಯಾನೇಜರ್ ಅರುಣ್ ಕುಮಾರ್ ಚತುರ್ವೇದಿ ಸ್ಪಷ್ಟನೆ ನೀಡಿದ್ದರು. ಸೋಮವಾರ ಪಾಲಕ್ಕಾಡ್ ರೈಲು ವಿಭಾಗವೇ ಸ್ಪಷ್ಟನೆಯನ್ನು ನೀಡಿದೆ.
ಏಕೆ ಆರಂಭವಾಯಿತು ಚರ್ಚೆ?; ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಕಳೆದ ವಾರ ಮಂಗಳೂರು ನಗರಕ್ಕೆ ಭೇಟಿ ನೀಡಿದ್ದರು. ಮಂಗಳೂರು ಭಾಗದಲ್ಲಿನ ರೈಲ್ವೆ ಸಂಬಂಧಿತ ಸಮಸ್ಯೆಗಳ ನಿವಾರಣೆಗಾಗಿ ಪರಿಶೀಲನಾ ಸಭೆ ನಡೆಸಿ, ಸಾರ್ವಜನಿಕರ ಬೇಡಿಕೆಗಳನ್ನು ಪರಿಹರಿಸಲು ಜನಪ್ರತಿನಿಧಿಗಳು ಹಾಗೂ ಇತರೆ ಇಲಾಖೆಗಳೊಂದಿಗೆ ನಿಯಮಿತ ಸಭೆಗಳನ್ನು ನಡೆಸಬೇಕು ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ವಿ. ಸೋಮಣ್ಣ ಭೇಟಿಯ ಸಮಯದಲ್ಲೇ ಮಂಗಳೂರಿಗೆ ಪ್ರತ್ಯೇಕ ರೈಲ್ವೇ ವಿಭಾಗ ಬೇಕು ಎಂಬ ಬೇಡಿಕೆ ಇತ್ತು. ಸದ್ಯ ಮಂಗಳೂರು ಪಾಲಕ್ಕಾಡ್ ರೈಲು ವಿಭಾಗದ ವ್ಯಾಪ್ತಿಗೆ ಸೇರುತ್ತದೆ. ಇದನ್ನು ಪ್ರತ್ಯೇಕಿಸಿ, ಮಂಗಳೂರನ್ನು ಪ್ರತ್ಯೇಕ ವಿಭಾಗವಾಗಿ ಮಾಡಬೇಕು ಎಂಬ ಕೂಗು ಎದ್ದಿದೆ. ಇದರ ಜೊತೆಗೆ ಆನ್ಲೈನ್ ಅಭಿಯಾನವೂ ನಡೆಯುತ್ತಿದೆ.
ಮಂಗಳೂರಿಗೆ ಪ್ರತ್ಯೇಕ ರೈಲು ವಿಭಾಗಕ್ಕಾಗಿ ಆಗ್ರಹಿಸಿ ಆಗಸ್ಟ್ 2ರ ತನಕ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ. ಮಂಗಳೂರು ಪ್ರಸ್ತುತ ದಕ್ಷಿಣ ರೈಲ್ವೇ ವಲಯದ ಪಾಲಕ್ಕಾಡ್ ವಿಭಾಗ, ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗ, ಕೊಂಕಣ ರೈಲ್ವೇ ವಿಭಾಗದ ನಡುವೆ ಹಂಚಿಕೆಯಾಗಿದೆ. ಇದರಿಂದಾಗಿ ಮಂಗಳೂರಿಗೆ ಸಿಗಬೇಕಾದ ಮಾನ್ಯತೆ ಸಿಗುತ್ತಿಲ್ಲ, ರೈಲು ಸೇವೆಗಳ ಅಭಿವೃದ್ಧಿಯಾಗುತ್ತಿಲ್ಲ ಎಂದು ಆರೋಪಿಸಲಾಗಿದೆ.
ಕೊಂಕಣ ರೈಲ್ವೆ ವಿಭಾಗವನ್ನು ಭಾರತೀಯ ರೈಲ್ವೆಯಡಿ ಸೇರಿಸಬೇಕು, ಪಾಲಕ್ಕಾಡ್ನಿಂದ ಮಂಗಳೂರು ಪ್ರತ್ಯೇಕಗೊಳಿಸಿ ಪ್ರತ್ಯೇಕ ವಿಭಾಗ ಮಾಡಬೇಕು ಎಂಬುದು ಬೇಡಿಕೆಯಾಗಿದೆ. ಮಂಗಳೂರು-ಮಡಗಾಂವ್, ಮಂಗಳೂರು-ಸಕಲೇಶಪುರ ಮತ್ತು ಹಾಸನವನ್ನು ಸೇರಿಸಿ ಹೊಸ ರೈಲ್ವೆ ವಿಭಾಗ ಮಾಡಬಹುದು ಎಂಬುದು ಒತ್ತಾಯವಾಗಿದೆ.
ಈಗ ಇರುವ ವ್ಯವಸ್ಥೆ ಕಾರಣ ಒಂದು ಹೊಸ ರೈಲು ಘೋಷಣೆ ಮಾಡಲು ಮೂರು ವಿಭಾಗದ ಅನುಮತಿ ಪಡೆಯಬೇಕಿದೆ. ಆದ್ದರಿಂದ ಪ್ರತ್ಯೇಕ ರೈಲು ವಿಭಾಗ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ. ಪಶ್ಚಿಮ ಕರಾವಳಿ ರೈಲ್ವೇ ಅಭಿವೃದ್ಧಿ ಸಮಿತಿ, ರೈಲ್ವೇ ಹೋರಾಟಗಾರರು ಈ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ.












Click it and Unblock the Notifications