ಮಂಗಳೂರಿನ ಉಳ್ಳಾಲದಲ್ಲಿ ಮತ್ತೆ ಕಡಲ್ಕೊರೆತ
ಮಂಗಳೂರು, ಜುಲೈ 8: ಮಂಗಳೂರು ಹೊರವಲಯದ ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲ ಪ್ರದೇಶದಲ್ಲಿ ಕಡಲ ಕೊರೆತ ಮತ್ತೆ ಆರಂಭವಾಗಿದೆ. ಕಡಲ ಕೊರೆತ ತಡೆಯುವ ನಿಟ್ಟಿನಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ತಡೆಗೋಡೆಯ ಕಲ್ಲುಗಳೂ ಸಮುದ್ರಪಾಲಾಗಿವೆ. ಈ ಪರಿಸರದಲ್ಲಿ ಸಮುದ್ರ ತೀರದ ಕೆಲ ಮನೆಗಳು ಅಪಾಯದಲ್ಲಿವೆ.
ಕರಾವಳಿಯಲ್ಲಿ ಕೆಲವು ದಿನಗಳಿಂದ ಮಳೆ ಕಡಿಮೆಯಿದ್ದರೂ ಭಾರೀ ಗಾಳಿ ಬೀಸುತ್ತಿರುವುದರಿಂದ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಸಮುದ್ರದಲ್ಲಿ ಆಳೆತ್ತರದ ಅಲೆಗಳು ಅಬ್ಬರಿಸುತ್ತಿದ್ದು, ನಿನ್ನೆ ಸಂಜೆ ವೇಳೆಗೆ ಸುಮಾರು 200 ಮೀಟರ್ ಉದ್ದಕ್ಕೆ ಕಡಲ ತೀರದಲ್ಲಿ ಹಾಕಲಾಗಿರುವ ಕಲ್ಲುಗಳ ಅಡಿಯ ಮರಳು ಕರಗಿ ಕಲ್ಲುಗಳು ಸಮುದ್ರದ ಪಾಲಾಗುತ್ತಿವೆ. ಈ ಭಾಗದಲ್ಲಿ ತಾತ್ಕಾಲಿಕ ಬ್ರೇಕ್ವಾಟರ್ ಕಾಮಗಾರಿ ಆರಂಭದಿಂದ ಈ ಸಮಸ್ಯೆ ಹೆಚ್ಚಾಗಿದೆ ಎಂದು ಆರೋಪಿಸಲಾಗಿದೆ. ಉಳ್ಳಾಲದ ಕಿಲೇರಿಯಾ ನಗರ, ಮುಕ್ಕಚ್ಚೇರಿ ಪ್ರದೇಶದಲ್ಲೂ ಸಮುದ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿವೆ.

ಇಲ್ಲಿಯ ರೂಪೇಶ್, ಸಂತೋಷ್, ತಾರಾನಾಥ್, ಸಂಜೀವ, ಕಿಶೋರ್, ಚಿದಾನಂದ, ಪ್ರದೀಪ್ ಅವರ ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿದ್ದು, ಚಂದಪ್ಪ ಅವರ ಅಂಗಡಿಗೂ ಹಾನಿಯಾಗಿದೆ. ಉಡುಪಿಯಲ್ಲೂ ಕಡಲ ಕೊರೆತ ಸಂಭವಿಸುವ ಆತಂಕ ವ್ಯಕ್ತವಾಗಿದೆ. ಉಡುಪಿಯ ಮಲ್ಪೆ ಪರಿಸದಲ್ಲೂ ಸಮುದ್ರ ಪ್ರಕ್ಷುಬ್ಧವಾಗಿದ್ದು, ಬೃಹತ್ ಅಲೆಗಳು ದಂಡೆಗೆ ಅಪ್ಪಳಿಸುತ್ತಿವೆ.











Click it and Unblock the Notifications