ಲೋಕಲ್ ಫೈಟ್ ನಲ್ಲಿ ಎಸ್ ಡಿಪಿಐ ಸಾಧನೆ: ದ.ಕ. ಕೈ ಪಾಳಯದಲ್ಲಿ ಆತಂಕ
ಮಂಗಳೂರು, ಸೆಪ್ಟೆಂಬರ್ 05: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 31 ರಂದು ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಜಿಲ್ಲೆಯ 2 ನಗರಸಭೆ ಹಾಗೂ 1 ಪುರಸಭೆ ಗೆ ನಡೆದ ಚುನಾವಣೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( ಎಸ್ ಡಿ ಪಿ ಐ) ಹೆಚ್ಚಿನ ಸ್ಥಾನವನ್ನು ಗೆಲ್ಲುವ ಮೂಲಕ ಮೂರನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಕಿಂಗ್ ಮೇಕರ್ ಆಗುವ ಶಕ್ತಿ ಪಡೆದುಕೊಂಡಿದೆ.
ಜಿಲ್ಲೆಯ 2 ನಗರಸಭೆ ಹಾಗೂ 1 ಪುರಸಭೆಗೆ ನಡೆದ ಚುನಾವಣೆಗೆ ಒಟ್ಟು 24 ವಾರ್ಡ್ ಗಳಲ್ಲಿ ಎಸ್ ಡಿಪಿಐ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಉಳ್ಳಾಲ ನಗರಸಭೆಯ 9 ವಾರ್ಡ್ ಗಳಲ್ಲಿ ಸ್ಪರ್ಧಿಸಿದ್ದ ಎಸ್ ಡಿಪಿಐ ಅಭ್ಯರ್ಥಿಗಳು 6 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಬಂಟ್ವಾಳ ಪುರಸಭೆಗೆ ನಡೆದ ಚುನಾವಣೆಯಲ್ಲಿ 12 ವಾರ್ಡಿನಲ್ಲಿ ಸ್ಪರ್ಧಿಸಿದ್ದ ಎಸ್ ಡಿಪಿಐ ಅಭ್ಯರ್ಥಿಗಳ ಪೈಕಿ 4 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಹಾಗೆಯೇ ಪುತ್ತೂರು ನಗರಸಭೆಯಲ್ಲಿ 3 ವಾರ್ಡ್ ಗಳಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೈಕಿ 1 ವಾರ್ಡ್ ನಲ್ಲಿ ಅಭೂತಪೂರ್ವ ಜಯ ಸಾಧಿಸಿ ಇದೇ ಮೊದಲ ಬಾರಿಗೆ ಎಸ್ ಡಿಪಿಐ ಖಾತೆ ತೆರೆದಿದೆ.

ಈ ಹಿಂದೆ ಉಳ್ಳಾಲದಲ್ಲಿ ಕೇವಲ ಒಂದು ಸ್ಥಾನ ಗಳಿಸಿದ್ದ ಎಸ್ ಡಿಪಿಐ ಈ ಬಾರಿ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ಬಾರಿ ಚುನಾವಣೆಯಲ್ಲಿ ಎಸ್ ಡಿಪಿಐ ಖಾತೆ ತೆರೆದಿದ್ದ ಸರೀನಾ ಬಾನು ಈ ಬಾರಿಯೂ ಗೆಲುವು ದಾಖಲಿಸಿದ್ದಾರೆ .
ಅದಲ್ಲದೇ ಇನ್ನು 5 ಸ್ಥಾನಗಳನ್ನು ಎಸ್ ಡಿಪಿಐ ಬಾಚಿಕೊಂದಿದೆ. ಈ ಎಲ್ಲಾ ಸ್ಥಾನಗಳನ್ನು ಕಾಂಗ್ರೆಸ್ ನಿಂದ ಎಸ್ ಡಿಪಿಐ ಕಸಿದು ಕೊಂಡಿರುವುದು ಗಮನಾರ್ಹ. ಉಳ್ಳಾಲದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ದಾಖಲಿಸುವಲ್ಲಿ ತಡೆಯಾಗಿದ್ದೇ ಎಸ್ ಡಿಪಿಐ.
ಇನ್ನೊಂದೆಡೆ ಬಂಟ್ವಾಳದ ಪುರಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 4 ಸ್ಥಾನಗಳನ್ನು ಬಾಚಿಕೊಂಡು ಕಿಂಗ್ ಮೇಕರ್ ಸ್ಥಾನದಲ್ಲಿ ಎಸ್ ಡಿಪಿಐ ಇದೆ. ಇಲ್ಲಿಯೂ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುವಲ್ಲಿ ತೊಡಕಾಗಿದ್ದು ಎಸ್ ಡಿಪಿಐ ಎಂಬುದು ಗಮನಾರ್ಹ.

ಬಂಟ್ವಾಳ ಪುರಸಭೆಯ 27 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 12 , ಬಿಜೆಪಿ 11 ಮತ್ತು ಎಸ್ ಡಿಪಿಐ 4 ಸ್ಥಾನಗಳನ್ನು ಗಳಿಸಿದೆ. ಗೆದ್ದ ಸ್ಥಾನಗಳ ಆಧಾರದಲ್ಲಿ ಇಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಅಧಿಕಾರ ಹಿಡಿಯುವ ಸಂಖ್ಯಾಬಲವಿಲ್ಲ ಈ ಹಿನ್ನಲೆಯಲ್ಲಿ ಎಸ್ ಡಿ ಪಿ ಐ ದೊಂದಿಗೆ ಮೈತ್ರಿ ಅನಿವಾರ್ಯ.
"ಸ್ಥಳಿಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಮಟ್ಟಿಗೆ ಎಸ್ ಡಿಪಿಐ ಒಳ್ಳೆಯ ಸಾಧನೆ ತೋರಿದೆ. ಈ ಮುಖಾಂತರ ಜಿಲ್ಲೆಯಲ್ಲಿ ತನ್ನ ಶಕ್ತಿ ಹೆಚ್ಚಿಸಿಕೊಂಡಿದೆ" ಎಂದು ಈ ಕುರಿತು ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಹರ್ಷ ವ್ಯಕ್ತಪಡಿಸಿ, ಗೆಲುವಿಗೆ ಸಹಕರಿಸಿದ ಮತದಾರರಿಗೆ ಕೃತಜ್ಞತೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಈ ಚುನಾವಣಾ ಫಲಿತಾಂಶ ಬಹಳ ಮಹತ್ವದ್ದು.ಎಸ್ ಡಿಪಿಐ ತಳಮಟ್ಟದಲ್ಲಿ ಜನಪ್ರಿಯತೆ ಗಳಿಸುತ್ತಿದೆ ಎನ್ನುವುದಕ್ಕೆ ಈ ಫಲಿತಾಂಶ ಸ್ಪಷ್ಟ ಸಾಕ್ಷಿ.

ಈ ಚುನಾವಣಾ ಫಲಿತಾಂಶ ಮುಂಬರುವ ಮಂಗಳೂರು ಮಹಾನಗರ ಪಾಲಿಕೆ, ಬೆಳ್ತಂಗಡಿ, ಸುಳ್ಯ, ಮುಲ್ಕಿ ಮತ್ತು ಮೂಡಬಿದ್ರೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನು ಗಳಿಸುವ ಮುನ್ಸೂಚನೆಯಾಗಿದೆ. ಅದಲ್ಲದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಸ್ ಡಿಪಿಐ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications