ಸಾವರ್ಕರ್ ವಿವಾದ: ಟಿಪ್ಪು ಬಗ್ಗೆ ಅವಾಚ್ಯ ಪದ ಬಳಸಿದ ಕಾರ್ಪೊರೇಟರ್
ಮಂಗಳೂರು, ಅಕ್ಟೋಬರ್ 29: ಮಂಗಳೂರಿನಲ್ಲಿ ಸಾವರ್ಕರ್ ವಿವಾದ ಮತ್ತೆ ಜೀವ ಪಡೆದಿದೆ. ಮಂಗಳೂರು ಮಹಾನಗರ ಪಾಲಿಕೆ ಸಾವರ್ಕರ್ ಹೆಸರಿನಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ರಂಪಾಟಕ್ಕೆ ಸಾಕ್ಷಿಯಾಗಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಾವರ್ಕರ್ಗೆ ಧಿಕ್ಕಾರ ಹಾಗೂ ಜೈಕಾರ ಮೊಳಗಿದ ಸಂದರ್ಭ ನಡೆದಿದೆ.
ಹಿಂದಿನ ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸುರತ್ಕಲ್ ಸರ್ಕಲ್ಗೆ ಸಾವರ್ಕರ್ ಹೆಸರಿಡುವ ಬಗ್ಗೆ ಕಾರ್ಯಸೂಚಿ ಅಂಗೀಕಾರವಾಗಿತ್ತು. ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ನವೀನ್ ಡಿಸೋಜ ಕೊನೆಯ ಕ್ಷಣದಲ್ಲಿ ಕಾರ್ಯಸೂಚಿಗೆ ಸೇರಿಸಿ ಏಕಾಏಕಿ ಸರ್ಕಲ್ಗೆ ನಾಮಕರಣ ಮಾಡುವ ಜಿಲ್ಲಾಡಳಿತದ ನಿರ್ಣಯಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಅನಿರ್ದಿಷ್ಟ ಧರಣಿ
ಈ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಅಬ್ದುಲ್ ರವೂಫ್ ಕೂಡಾ ದನಿಗೂಡಿಸಿ ಸದನದ ಬಾವಿಗಿಳಿದು ಮೇಯರ್ ಅವರಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಹೊರತುಪಡಿಸಿ ಇಂತಹ ವಿಚಾರದಲ್ಲಿ ಯಾಕೆ ಇಷ್ಟೊಂದು ಆತುರ, ತಕ್ಷಣ ಈ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ವೇಳೆ ಎಲ್ಲಾ ಕಾಂಗ್ರೆಸ್ ಸದಸ್ಯರು ಪಾಲಿಕೆ ಸದನಕ್ಕಿಳಿದು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿಯವರು, ಕಾಂಗ್ರೆಸ್ ಸದಸ್ಯರು ಕಾರ್ಯಸೂಚಿ ಮಂಡನೆ ಮಾಡುವ ವೇಳೆ ಸುಮ್ಮನಿದ್ದು ಸ್ಥಿರೀಕರಿಸುವ ವೇಳೆ ಆಕ್ಷೇಪ ವ್ಯಕ್ತಪಡಿಸಿರುವುದು ಸಮಂಜಸವಲ್ಲ. ಅವರು ಆಕ್ಷೇಪ ವ್ಯಕ್ತಪಡಿಸಲಿ ತಾವು ಈ ಕಾರ್ಯಸೂಚಿಯನ್ನು ಮಂಡನೆ ಮಾಡಿ ಎಂದು ಮೇಯರ್ ರವರಿಗೆ ಒತ್ತಾಯ ಮಾಡಿದ್ದಾರೆ.
ಮಂಗಳೂರು; ಅರಬ್ಬೀ ಸಮುದ್ರ ತೀರದಲ್ಲಿ ಮೊಳಗಿದ ಕೋಟಿ ಕಂಠ ಗಾಯನ
ಈ ವೇಳೆ ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿ ಸದನದಲ್ಲಿ ಸಾವರ್ಕರ್ ಅವರಿಗೆ ಧಿಕ್ಕಾರ ಕೂಗಿದರು. ಆಗ ಬಿಜೆಪಿ ಸದಸ್ಯರು ಸಾವರ್ಕರ್ ಗೆ ಜೈಕಾರ ಮೊಳಗಿಸಿದರು. ಈ ವೇಳೆ ಮನಪಾ ಸದಸ್ಯೆ ಶ್ವೇತಾ ಎ. ಅನಗತ್ಯ ಟಿಪ್ಪು ಹೆಸರನ್ನು ಎಳೆದು ತಂದು ಮತಾಂತರಿ ಟಿಪ್ಪು ಹಂದಿ ಎಂದು ಉಲ್ಲೇಖಿಸಿದರು. ಗೊಂದಲ ವಾತಾವರಣವಾಗುತ್ತಿದ್ದಂತೆ ತಾತ್ಕಾಲಿಕ ಸಭೆಯನ್ನು ಮುಂದೂಡಿದ ಮೇಯರ್ ಬಳಿಕ ಚರ್ಚಿಸಿ ಮತ್ತೆ ಸಭೆ ನಡೆದರೂ, ಯಾವುದೇ ನಿರ್ಣಯವಾಗದ ಹಿನ್ನೆಲೆ ಮತ್ತೆ ಧಿಕ್ಕಾರ ಮೊಳಗಿತು. ಬಳಿಕ ಸಭೆಯನ್ನು ಅರ್ಧದಲ್ಲೇ ಮೊಟಕುಗೊಳಿಸಲಾಯಿತು.
ಬಹುಪಾಲು ಆಡಳಿತ ರೂಢ ಬಿಜೆಪಿ ಸದಸ್ಯರನ್ನೇ ಹೊಂದಿರುವ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸಾವರ್ಕರ್ ಸರ್ಕಲ್ ನಿರ್ಮಿಸುವ ಉದ್ದೇಶ ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೊಸ ಸಮರಕ್ಕೆ ನಾಂದಿ ಹಾಡಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿಯವರ ಮಹತ್ವಾಕಾಂಕ್ಷೆಯ ಸುರತ್ಕಲ್ ನಲ್ಲಿ ಸಾವರ್ಕರ್ ವೃತ್ತ ನಿರ್ಮಾಣಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು ಕರಾವಳಿ ಯಲ್ಲಿ ಮತ್ತೆ ಸಾವರ್ಕರ್ ವಿವಾದ ಮುನ್ನಲೆಗೆ ಬರುವ ಸಾಧ್ಯತೆಗಳಿವೆ.