ಬಿಜೆಪಿ ಟಿಕೆಟ್ ಗಾಗಿ ಲಾಭಿ ಆರಂಭಿಸಿದ ಸತ್ಯಜಿತ್ ಸುರತ್ಕಲ್
ಮಂಗಳೂರು, ಮಾರ್ಚ್ 15: ದಕ್ಷಿಣ ಕನ್ನಡ ಕಮಲ ಪಾಳಯದಲ್ಲಿ ಸಂಸದ ನಳಿನ್ ಕುಮಾರ ಕಟೀಲ್ ವಿರುದ್ಧ ಅಸಮಾಧಾನ ಹೊಗೆಯಾಡಲು ಆರಂಭಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ತಣ್ಣಗಾಗಿದ್ದ ರಾಜ್ಯ ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮತ್ತೆ ಲೋಕಸಭಾ ಟಿಕೆಟ್ ಗಾಗಿ ಲಾಬಿ ಆರಂಭಿಸಿದ್ದಾರೆ.
ದ.ಕ.ಬಿಜೆಪಿ ಪಾಳಯದಲ್ಲಿ ಗೊಂದಲ ಸೃಷ್ಟಿಸುತ್ತಿರುವ ಸತ್ಯಜಿತ್ ಸುರತ್ಕಲ್ ಫ್ಲೆಕ್ಸ್
ತುಳುನಾಡಿನ ವೀರಪುರುಷರಾದ ಕೋಟಿ-ಚೆನ್ನಯರ ಜನ್ಮಸ್ಥಳ ಗೆಜ್ಜೆಗಿರಿ ನಂದನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು, ಕಳೆದ 35 ವರ್ಷಗಳಿಂದ ಬಿಜೆಪಿ ಪಕ್ಷ ಹಾಗೂ ಸಂಘಟನೆಗಳಲ್ಲಿ ದುಡಿಯುತ್ತಿದ್ದು, ಈ ಬಾರಿ ಪಕ್ಷ ತನಗೆ ಲೋಕಸಭಾ ಅಭ್ಯರ್ಥಿ ಸ್ಥಾನಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಈಗಾಗಲೇ ಎರಡು ಬಾರಿ ಅಭ್ಯರ್ಥಿಯಾಗಿರುವ ಹಾಲಿ ಸಂಸದರನ್ನು ಬದಲಾವಣೆ ಮಾಡಿ, ತನಗೆ ಅವಕಾಶ ನೀಡಬೇಕೆಂದು ಈಗಾಗಲೇ ಒತ್ತಾಯ ಮಾಡಲಾಗಿದೆ. ನನ್ನ ಹೋರಾಟ ಯಾರ ವಿರುದ್ಧವೂ ಅಲ್ಲ ಎಂದು ಸ್ಪಷ್ಟಪಡಿಸಿದರು.
ಎಲ್ಲಾ ಕಾರ್ಯಕರ್ತರ ಆಶಯ ಈ ಬಾರಿ ಬಿಜೆಪಿ ಪಕ್ಷದಿಂದ ಅಭ್ಯರ್ಥಿ ಬದಲಾವಣೆಯಾಗಬೇಕು ಎನ್ನುವುದಾಗಿದ್ದು, ಕಳೆದ ಮೂವತ್ತೈದು ವರ್ಷಗಳಿಂದ ಬಿಜೆಪಿಗಾಗಿ ಹಾಗೂ ಹಿಂದೂ ಸಂಘಟನೆಗಳಲ್ಲಿ ದುಡಿದ ತನಗೆ ಈ ಬಾರಿ ಲೋಕಸಭಾ ಅಭ್ಯರ್ಥಿ ಸ್ಥಾನದ ಟಿಕೆಟ್ ನೀಡಬೇಕು ಎಂದರು.
ಯಡಿಯೂರಪ್ಪ ಆದೇಶ, ಜಿಲ್ಲಾದ್ಯಂತ ಫ್ಲೆಕ್ಸ್ ಗಳನ್ನು ತೆರವು ಗೊಳಿಸಿದ ಸತ್ಯಜೀತ್
ದೇವರ ಅನುಗ್ರಹದಿಂದ ಆ ಅವಕಾಶ ಒದಗಿ ಬರುವುದು. ಹಿಂದಿನ ವಿಧಾನಸಭಾ ಚುನಾವಣೆಗೂ ಈ ಬಾರಿಯ ಲೋಕಸಭಾ ಚುನಾವಣೆಗೂ ವ್ಯತ್ಯಾಸವಿದೆ ಎಂದು ತಿಳಿಸಿದರು.
ಕಳೆದ ಬಾರಿ ರಾಜ್ಯದಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಸಂದರ್ಭದಲ್ಲೂ ಸತ್ಯಜಿತ್ ಸುರತ್ಕಲ್ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಭರತ್ ಶೆಟ್ಟಿಯವರಿಗೆ ಟಿಕೆಟ್ ನೀಡಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.