'ಸಂಘಪರಿವಾರದಿಂದ ಮುಸ್ಲಿಮರ ವಿಭಜನೆಗೆ ಯತ್ನ'
ಮಂಗಳೂರು, ಜನವರಿ. 17 : ಸಂಘಪರಿವಾರ ಭಾರತದ ಇತಿಹಾಸದುದ್ದಕ್ಕೂ ರಾಷ್ಟ್ರದ ಅಲ್ಪಸಂಖ್ಯಾತರನ್ನು ಹಾಗೂ ದಲಿತರನ್ನು ದಮನ ಮಾಡುತ್ತಾ ಬಂದಿದೆ ಎಂದು ಮಂಗಳೂರು ಮುಸ್ಲಿಂ ಸಂಘಟನೆಗಳ ಒಕ್ಕೂಟ ಆರೋಪಿಸಿದೆ.
ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕ್ಷೇತ್ರ ಸೇರಿ ವಿವಿಧ ಹಂತದಲ್ಲೂ ಅದರ ವಿರುದ್ಧ ಷಡ್ಯಂತರಗಳನ್ನು ನಡೆಸುತ್ತಿದೆ. ರಾಷ್ಟ್ರದ ದಲಿತರು ಮತ್ತು ಮುಸ್ಲಿಮರು ಸಂಘಟಿತರಾಗುವುದು ಹಾಗೂ ಅಭಿವೃದ್ಧಿ ಹೊಂದುವುದನ್ನು ಸಂಘಪರಿವಾರಕ್ಕೆ ಸಹಿಸಿಕೊಳ್ಳಲಾಗುತ್ತಿಲ್ಲ.['ಸೌಹಾರ್ದತೆಯ' ಶೋಭಾಯಾತ್ರೆಗೆ ಮುಸ್ಲಿಮರಿಂದ ಸ್ವಾಗತ]
ರಾಷ್ಟ್ರದಾದ್ಯಂತ ವಿವಿಧ ರೀತಿಯ ವೈಭವೀಕೃತ ಹೆಸರುಗಳನ್ನು ಇಟ್ಟುಕೊಂಡು ಹೊಸ ಸಂಘಟನೆಗಳನ್ನು ರೂಪಿಸಿ ಸಮುದಾಯಗಳ ಮಧ್ಯ ವಿಷಬೀಜ ಬಿತ್ತಿ, ಐಕ್ಯತೆಯನ್ನು ಒಡೆಯುತ್ತಿದೆ ಎಂದು ಆರೋಪಿಸಿರುವ ಮಂಗಳೂರು ಮುಸ್ಲಿಂ ಸಂಘಟನೆಗಳ ಒಕ್ಕೂಟ ಇದಕ್ಕೆ ಖಂಡನೆ ವ್ಯಕ್ತಪಡಿಸಿದೆ.

ಜನವರಿ 9ರಂದು ಸಂಘಪರಿವಾರ ಪ್ರಾಯೋಜಕತ್ವದಲ್ಲಿ ಮಂಗಳೂರು ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಮೆಕ್ಕಾ ಮಸೀದಿ, ಅಜ್ಮೀರ್ ದರ್ಗಾದ ಬಾಂಬ್ ಸ್ಫೋಟದ ಆರೋಪಿ ಇಂದ್ರೇಶ್ ಕುಮಾರ್ ನ ನೇತೃತ್ವದಲ್ಲಿ 'ಸರ್ವ ಧರ್ಮ ಸದ್ಭಾವನಾ ಸಂಗೋಷ್ಠಿ' ಎಂಬ ಕಾರ್ಯಕ್ರಮ ನಡೆದಿತ್ತು.
ಈ ವೇಳೆ ಕೇರಳದ ಕ್ಯಾಡರ್ ನಿವೃತ್ತ ನಿರ್ದೇಶಕ ಡಿಜಿಪಿ ಎಂ.ಎನ್ ಕೃಷ್ಣಮೂರ್ತಿಯವರ ಉಸ್ತುವಾರಿಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್, ಡಿಸಿಪಿಗಳನ್ನು ಒಳಗೊಂಡಂತೆ ವಿವಿಧ ಅಲ್ಪಸಂಖ್ಯಾತ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದನ್ನು ಮತ್ತು ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿರುವುದು ಜಿಲ್ಲೆಯ ಅಲ್ಪಸಂಖ್ಯಾತರಲ್ಲಿ ಆತಂಕ ಮೂಡಿಸಿದೆ ಎಂದು ಹೇಳಿದೆ.
ಸರಕಾರಿ ಇಲಾಖೆಯು ಸಂಘಪರಿವಾರದ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತಿರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಎಲ್ಲಾ ಕಾರಣಕ್ಕೆ ಈ ಕಾರ್ಯಕ್ರಮದಲ್ಲಿ ಮುಖ್ಯ ಪಾತ್ರ ವಹಿಸಿರುವ ಪೊಲೀಸ್ ಅಧಿಕಾರಿಗಳ ಮೇಲೆ ಮೊಕದ್ದಮೆ ದಾಖಲಿಸಬೇಕು.
ಹಾಗೂ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಜಿಲ್ಲೆಯ ಸರ್ವ ಮುಸ್ಲಿಮರ ಪರವಾಗಿ ಮಂಗಳೂರು ಮುಸ್ಲಿಂ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಈ ಬಗ್ಗೆ ಮಂಗಳೂರು ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ಜ.18ರಂದು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಾರ್ಯಕ್ರಮ ಸಂಚಾಲಕ ನ್ಯಾಯವಾದಿ ಸಾದುದ್ದೀನ್ ಸ್ವಾಲಿಹ್ ಹಾಗೂ ಸಂಘಟನೆ ಅಧ್ಯಕ್ಷ ಅಶ್ರಫ್.ಕೆ.ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications