'ಸಚಿವ ರಮಾನಾಥ ರೈ ಬಂಟರಿಂದ ದಕ್ಷಿಣ ಕನ್ನಡದಲ್ಲಿ ಮರಳು ಮಾಫಿಯಾ'
ಮಂಗಳೂರು, ಅಕ್ಟೋಬರ್ 5: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ಮರಳು ಅಭಾವ ಉಂಟಾಗಿದ್ದು, ಇದಕ್ಕೆ ಮರಳು ಮಾಫಿಯಾವೇ ಕಾರಣ ಎಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ ಸದಸ್ಯ ಅರುಣ್ ಕುಮಾರ್ ಪುತ್ತಿಲ ಆರೋಪಿಸಿದ್ದಾರೆ.
ಹುಲಿ ಕುಣಿತದ ತಾಳಕ್ಕೆ ಹೆಜ್ಜೆ ಹಾಕಿದ ಸಚಿವ ರಮಾನಾಥ ರೈ
ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಸಾಕಷ್ಟು ಮರಳು ಸಿಗುತ್ತಿದ್ದರೂ, ಕೃತಕ ಮರಳಿನ ಅಭಾವ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು.
"ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಯವರ ಬಲಗೈ ಬಂಟರೇ ಮರಳು ದಂಧೆಯನ್ನು ನಡೆಸುವ ಮೂಲಕ ಜಿಲ್ಲೆಯ ಜನರಿಗೆ ಮರಳು ಸಿಗದಂತೆ ಮಾಡುತ್ತಿದ್ದಾರೆ. ಈ ಎಲ್ಲಾ ಅವ್ಯವಸ್ಥೆಯನ್ನು ಖಂಡಿಸಿ ಅಕ್ಟೋಬರ್ 7 ರಂದು ಪುತ್ತೂರು ಸರಕಾರಿ ಬಸ್ ನಿಲ್ದಾಣದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು," ಎಂದು ಅವರು ಮಾಹಿತಿ ನೀಡಿದ್ದಾರೆ.
ಸೂಲಿಬೆಲೆಗೆ ನಿಂದನೆ, ಸಚಿವ ರೈ ವಿರುದ್ಧ ಖಾಸಗಿ ದೂರು ದಾಖಲು
ಜಿಲ್ಲೆಯಲ್ಲಿ ತೆಗೆದ ಮರಳನ್ನು ಲಾರಿಗಳಲ್ಲಿ ತುಂಬಿ ಹೊರ ಜಿಲ್ಲೆಗಳಿಗೆ ನಿರಂತರವಾಗಿ ಸಾಗಾಟ ಮಾಡಲಾಗುತ್ತಿದ್ದು, ಈ ಕಾರಣದಿಂದ ಜಿಲ್ಲೆಯ ಜನರಿಗೆ ಮರಳು ಸಿಗದಂತಾಗಿದೆ. ಮರಳು ಸಿಕ್ಕರೂ ಒಂದು ಲೋಡ್ ಮರಳಿಗೆ 20 ರಿಂದು 25 ಸಾವಿರ ರೂಪಾಯಿಗಳನ್ನು ನೀಡಿ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಮೂಲಕ ಮರಳು ಮಾಫಿಯಾಗಳು ಮರಳಿನ ಹಗರಣವನ್ನು ಮಾಡುತ್ತಿವೆ ಎಂಮದು ಅರುಣ್ ಪುತ್ತಿಲ ಕಿಡಿಕಾರಿದ್ದಾರೆ.
ಜಿಲ್ಲಾಡಳಿತ ಈ ಮಾಫಿಯಾಗಳನ್ನು ತಡೆಯದೇ ಹೋದಲ್ಲಿ ಮುಂದಿನ ದಿನಗಳಲ್ಲಿ ರಾತ್ರೋರಾತ್ರಿ ಹೊರ ಜಿಲ್ಲೆಗಳಿಗೆ ತೆರಳುವ ಮರಳು ಲಾರಿಗಳನ್ನು ತಡೆ ಹಿಡಿದು ನಿಲ್ಲಿಸುವ ಕೆಲಸಕ್ಕೆ ಸಾರ್ವಜನಿಕರು ಮುಂದಾಗಲಿದ್ದಾರೆ. ಈ ನಿಟ್ಟಿನಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳಿಗೆ ಜಿಲ್ಲಾಡಳಿತ ಹಾಗೂ ಸರಕಾರವೇ ನೇರ ಹೊಣೆಯಾಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.