ಕಾಶೀ ಮಠಾಧೀಶ ಸಂಯಮೀಂದ್ರ ತೀರ್ಥರ 'ಚಾತುರ್ಮಾಸ ದಿಗ್ವಿಜಯ'
ಮಂಗಳೂರು, ಅ 22: ಕಾಶೀಮಠ ಸಂಸ್ಥಾನದ ಮಠಾಧೀಶರಾದ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ 'ಚಾತುರ್ಮಾಸ ದಿಗ್ವಿಜಯವು' ಶನಿವಾರ (ಅ 21) ಕೊಂಚಾಡಿ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ಹಾಗೂ ಸಹಸ್ರಾರು ಭಜಕರ ಉಪಸ್ಥಿತಿಯಲ್ಲಿ ನೆರವೇರಿತು.
ಪ್ರಾರಂಭದಲ್ಲಿ ಶ್ರೀಗಳು ಸಂಸ್ಥಾನದ ಆರಾಧ್ಯ ದೇವರ ದರ್ಶನ ಪಡೆದು ದಂಡಧಾರಿಗಳಾಗಿ ವೆಂಕಟರಮಣ ದೇವರ ಹಾಗೂ ಮಹಾಲಸಾ ನಾರಾಯಣಿ ದೇವಿಯ ದರ್ಶನಪಡೆದು ದಿಗ್ವಿಜಯ ಮಹೋತ್ಸವಕ್ಕೆ ವಿಶೇಷವಾಗಿ ಅಲಂಕರಿಸಿದ ಭವ್ಯ ರಥದಲ್ಲಿ ವಿರಾಜಮಾನರಾದರು.

ಬಳಿಕ ಜಿಎಸ್ಬಿ ಸಮಾಜದ ನೂರಾರು ಮಠ, ಮಂದಿರಗಳ ಆಡಳಿತ ಮಂಡಳಿ, ಮೊಕ್ತೇಸರರು ಶ್ರೀಗಳವರಿಗೆ ಹಾರಾರ್ಪಣೆ ಮಾಡಿದರು. ಕೊಂಚಾಡಿ ಪ್ರದೇಶಕ್ಕೆ ಆಗಮಿಸಿದ ಮುಂಬೈ, ಕೇರಳ,ದೆಹಲಿ, ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ ಸಮಾಜ ಭಾಂದವರಿಗೆ ಮಂತ್ರಾಕ್ಷತೆ ನೀಡಿ ಶ್ರೀಗಳು ಆಶೀರ್ವದಿಸಿದರು.
ದಿಗ್ವಿಜಯ ಯಾತ್ರೆ ಸಾಗುವ ದಾರಿಯುದ್ದಕ್ಕೂ ವಿಶೇಷ ವಿದ್ಯುತ್ ದೀಪಾಲಂಕಾರ, ಸಮಾಜ ಭಾಂದವರ ಮನೆಯ ಮುಂಭಾಗದಲ್ಲಿ ತಳಿರು ತೋರಣಗಳೊಂದಿಗೆ ಅಲಂಕರಿಸಲಾಗಿತ್ತು.
ಸುಮಾರು 25ಕ್ಕೂ ಅಧಿಕ ವಿಶೇಷ ವರ್ಣರಂಜಿತ ಟ್ಯಾಬ್ಲೋ, ಕೇರಳದ ವಿಶೇಷ ಚಂಡೆ ವಾದನ, ಪಂಚವಾದ್ಯಗಳು,ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ಸ್ತಬ್ಧಚಿತ್ರಗಳು, ಜಿಎಸ್ಬಿ ಯುವಕರು ಮತ್ತು ಪುಟಾಣಿಗಳ ಹುಲಿವೇಷ ದಿಗ್ವಿಜಯ ಯಾತ್ರೆಯಲ್ಲಿ ಪಾಲ್ಗೊಂಡಿದ್ದವು.
ಶ್ರೀಗಳವರ ದಿಗ್ವಿಜಯ ಮಹೋತ್ಸವವು ಕೊಂಚಾಡಿ ಕಾಶೀಮಠದಿಂದ ಸಾಯಂಕಾಲ ಆರು ಗಂಟೆಗೆ ಪ್ರಾರಂಭಗೊಂಡು, ಪದವಿನಂಗಡಿ, ಏರ್ಪೋರ್ಟ್ ರಸ್ತೆ, ಮೇರಿಹಿಲ್ ಮೂಲಕ ಶ್ರೀದೇಗುಳಕ್ಕೆ ಹಿಂತಿರುಗಿತು. ಈ ಎಲ್ಲಾ ಪ್ರದೇಶಗಳಲ್ಲಿ ವಿಶೇಷ ಊಟ,ಉಪಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು. (ಚಿತ್ರ: ಮಂಜು ನೀರೇಶ್ವಾಲ್ಯ)












Click it and Unblock the Notifications