'ಅಪ್ಪ-ಮಕ್ಕಳ ಬಗ್ಗೆ ಕಿಡಿಕಾರುತ್ತಿದ್ದ ಸಿದ್ದರಾಮಯ್ಯ ಈಗ ಅವರ ಬಳಿಯೇ ಅಲೆಯುತ್ತಿದ್ದಾರೆ'
ಮಂಗಳೂರು, ನವೆಂಬರ್ 22: ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಟ್ವಿಟರ್ ವಾರ್ ವಿಚಾರ ವಾಗಿ ಕೇಂದ್ರ ಸಚಿವ ಸದಾನಂದ ಗೌಡ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡುತ್ತಿರಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಪ್ರತಿಕ್ರಿಯೆ ನೀಡುವುದು ಸುಲಭ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ತಮ್ಮ ಮಾತು ಬಿದ್ದು ಹೋಯ್ತು ಅಂತ ಅಂದುಕೊಳ್ಳಬಾರದು. ಒಂದೊಮ್ಮೆ ಅಪ್ಪ - ಮಕ್ಕಳು ಇದ್ದಲ್ಲಿ ತಲೆ ಹಾಕಿ ಮಲಗಬಾರದು ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಈಗ ಅದೇ ಅಪ್ಪ ಮತ್ತು ಮಕ್ಕಳ ಬಳಿ ಅಲೆದಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ನಾಟಕೀಯ ನಡವಳಿಕೆ ನೋಡಿದರೆ ನಗು ಬರುತ್ತೆ. ತಮ್ಮ ಮಾತನ್ನೇ ಮರೆತವರು ಜನರ ಮಾತನ್ನು ಎಷ್ಟು ಉಳಿಸಿಯಾರು ಅನ್ನೋದೆ ಪ್ರಶ್ನೆ ಎಂದು ಅವರು ಕುಟುಕಿದರು.
ನವೆಂಬರ್ 16ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಕರಾವಳಿಯನ್ನು ಬಿಜೆಪಿ ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದೆ. ಹಾಗಾಗಿ ಬಿಜೆಪಿ ರಾಷ್ಟ್ರೀಯ ನಾಯಕರು ಆಗಾಗ ಕರಾವಳಿಗೆ ಭೇಟಿ ನೀಡುತ್ತಾರೆ.
ಅಮಿತ್ ಶಾ ಮತ್ತು ನರೇಂದ್ರ ಮೋದಿ ಕರ್ನಾಟಕದಲ್ಲಿಯೇ ಬಂದು ಮನೆ ಮಾಡಿದ್ರೂ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದ ಜನರು ಬೆಂಬಲ ನೀಡುವುದಿಲ್ಲ ಎಂದು ಟ್ವೀಟ್ ಮಾಡಿದ್ದರು.
ಅದೇ ರಿಕಾರ್ಡ್ ಕಂಠ ಪಾಠ ಮಾಡಿಕೊಂಡು ಎಷ್ಟು ದಿನ ಸುತ್ತಬೇಕು ಅಂತ ಇದ್ದೀರಾ. ಚಾಮುಂಡೇಶ್ವರಿಯ ಮತದಾರರೇ ನಿಮ್ಮನ್ನು ನಂಬಲಿಲ್ಲ. ಇನ್ನು ಕರಾವಳಿಯ ಜನ ನಿಮ್ಮ ಕಂಠ ಪಾಠ ಒಪ್ತಾರಾ? ಕರಾವಳಿಯ ಯಾಕೆ ಇಡೀ ಕರ್ನಾಟಕದ ಜನರಿಗೆ ತಮ್ಮ ಆಯ್ಕೆ ಗೊತ್ತಿದೆ. ಇನ್ನು ಅಧಿಕಾರ ಹೊಂದಾಣಿಕೆ ನಿಮ್ಮ ಬಹುಮತಕ್ಕೆ ಬಂದದ್ದಲ್ಲ ನೆನಪಿರಲಿ ಎಂದು ಸದಾನಂದ ಗೌಡ ಟ್ವಿಟರ್ ಮೂಲಕ ತಿರುಗೇಟು ನೀಡಿದ್ದರು.












Click it and Unblock the Notifications