'ಕೃಷಿಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ನಿಷೇಧಿಸಿ'
ಮಂಗಳೂರು, ಜನವರಿ,18: ಕೃಷಿಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ನಿಷೇಧಿಸಬೇಕು. ರಬ್ಬರ್ ಬೆಳೆಗಾರರ ಬೇಡಿಕೆ ಈಡೇರಿಸಬೇಕು ಎಂದು ರಬ್ಬರ್ ಬೆಳೆಗಾರರು ಮಂಗಳೂರಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಹಕ್ಕೊತ್ತಾಯ ಸಭೆ ನಡೆಸಿದರು.
ಕೃಷಿ ಚಟುವಟಿಕೆಯಲ್ಲಿ ವಿದೇಶಿ ನೇರ ಹೂಡಿಕೆ ಹೆಚ್ಚಿದರೆ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಅನಾನುಕೂಲವಾಗುತ್ತದೆ. ನೈಸರ್ಗಿಕ ರಬ್ಬರ್ ಆಮದನ್ನು ನಿಷೇಧಿಸಬೇಕು. ಇಲ್ಲವೇ ಶೇ. 75ಕ್ಕೆ ಸುಂಕ ಹೆಚ್ಚಿಸಬೇಕು. ಕೇರಳ ಮಾದರಿಯಲ್ಲಿ ರಬ್ಬರ್ಗೆ ಪ್ರೋತ್ಸಾಹ ನೀಡಬೇಕು. ಕೇಂದ್ರ ಸರ್ಕಾರ ಈ ಹಿಂದೆ ನಿಗದಿಪಡಿಸಿದಂತೆ ರಬ್ಬರ್ಗೆ ಕನಿಷ್ಠ ಧಾರಣೆ ನಿಗದಿಪಡಿಸಬೇಕು ಎಂದು ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀಧರ್ ಜಿ.ಭಿಡೆ ತಿಳಿಸಿದರು.[ಮಂಗಳೂರು ಜನತೆಯ ಮನಸೆಳೆದ ಗಾಳಿಪಟ ಉತ್ಸವ]
ಕರ್ನಾಟಕ ರಬ್ಬರ್ ಪ್ಲಾಂಟರ್ಸ್ ಅಸೋಸಿಯೇಶನ್ ಅಧ್ಯಕ್ಷ ಕರ್ನಲ್ ಎನ್.ಎಸ್. ಭಂಡಾರಿ ಮಾತನಾಡಿ, ರಾಜ್ಯದ ಕರಾವಳಿಯ 5 ಜಿಲ್ಲೆಗಳಲ್ಲಿನ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ಕೃಷಿಯಿದೆ. ಅಂದಾಜು 55 ಸಾವಿರ ನೋಂದಾಯಿತ ರಬ್ಬರ್ ಬೆಳೆಗಾರರಿದ್ದಾರೆ.[ಮಂಗಳೂರಲ್ಲಿ ತಾರಕ್ಕಕ್ಕೇರಿದ ಹಿಂದೂ ಮುಸ್ಲಿಂ ಘರ್ಷಣೆ]
2012ರಲ್ಲಿ 240 ರೂ. ಆಸುಪಾಸಿನಲ್ಲಿದ್ದ ರಬ್ಬರ್ ಧಾರಣೆ ಈಗ 100 ರೂ. ತಲುಪಿದೆ. ಕೇರಳ ಸರ್ಕಾರ ಅಲ್ಲಿನ ರಬ್ಬರ್ ಬೆಳೆಗಾರರ ರಕ್ಷಣೆಗೆ ಕ್ರಮ ಕೈಗೊಂಡಿದೆ. ಆದರೆ ಕರ್ನಾಟಕ ಸರ್ಕಾರ ಈ ಬಗ್ಗೆ ಮೌನ ವಹಿಸಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ರಾಜು ಶೆಟ್ಟಿ, ಉಪಾಧ್ಯಕ್ಷ ಎನ್.ಪದ್ಮನಾಭ, ಪ್ರಸಾದ್ ಕೌಶಲ್ ಶೆಟ್ಟಿ ಉಪಸ್ಥಿತರಿದ್ದರು