ಮಂಗಳೂರು: ಸಂಘರ್ಷದ ಮದ್ಯೆ ಹುಟ್ಟಿಕೊಂಡ ಮಾನವೀಯತೆ
ಮಂಗಳೂರು, ಜುಲೈ 6: ಬಿ.ಸಿ ರೋಡ್ ನಲ್ಲಿ ಸಂಘ ಪರಿವಾರದ ಕಾರ್ಯಕರ್ತ ಶರತ್ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸುಳಿವು ಇನ್ನೂ ಸಿಕ್ಕಿಲ್ಲ. ಆದರೆ, ಆರೋಪಿಗಳ ಬೆನ್ನು ಹತ್ತಿದ ಪೊಲೀಸರಿಗೆ ಆಸಕ್ತಿಕರ ಕಥೆಯೊಂದು ಸಿಕ್ಕಿದೆ.
ಹೊರಗಡೆ ಹಿಂದೂ ಮುಸ್ಲಿಂ ಸಮುದಾಯಗಳ ನಡುವೆ ಬಿಗುವಿನ ವಾತಾವರಣ ಇದ್ದರೂ ಅದೆಲ್ಲವನ್ನೂ ಮರೆತು ರಕ್ತದ ಮಡುವಿನಲ್ಲಿ ಬಿದ್ದಿದ್ದ ಶರತ್ ರನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದು ಓರ್ವ ಮುಸ್ಲಿಂ ಯುವಕ.

ಆಸ್ಪತ್ರೆಗೆ ಸಾಗಿಸಿದ್ದು ಮುಸ್ಲಿಂ ಯುವಕ
ಸಂಘ ಪರಿವಾರದ ಕಾರ್ಯಕರ್ತ ಶರತ್ ಮೇಲೆ ದಾಳಿ ನಡೆಸಿದ ತಕ್ಷಣ ಸ್ಥಳಕ್ಕೆ ಸಮೀಪದ ಪ್ರುಟ್ ಅಂಗಡಿಯವರು ಧಾವಿಸಿದ್ದರು. ಅವರಿಗೆ ಏನು ನಡೆದಿದೆ ಎಂದು ಗೊತ್ತಿರಲಿಲ್ಲ. ಅವರು ಬರುವಷ್ಟರಲ್ಲಿ ದುಷ್ಕರ್ಮಿಗಳು ಬೈಕ್ ನಲ್ಲಿ ಪರಾರಿಯಾಗಿದ್ದರು.
ಅಂಗಡಿಯಲ್ಲಿದ್ದ ಅಬ್ದುಲ್ ಎಂಬವರು ರಕ್ತದ ಮಾಡುವಿನಲ್ಲಿದ್ದ ಶರತ್ ರನ್ನು ತಮ್ಮ ಆಟೋ ರಿಕ್ಷಾದಲ್ಲಿ ತುಂಬೆ ಆಸ್ಪತ್ರಗೆ ಸಾಗಿಸಿದ್ದು, ಪ್ರಥಮ ಚಿಕಿತ್ಸೆ ಒದಗಿಸಿದ್ದರು. ಬಳಿಕ ಮನೆಯವರಿಗೆ ಸುದ್ದಿ ತಲುಪಿಸಿ ಮಂಗಳೂರಿಗೆ ಸಾಗಿಸಲಾಗಿತ್ತು. ಅಲ್ಲಿ ತನಕವೂ ಜೊತೆಗಿದ್ದ ಅಬ್ದುಲ್ ಮತ್ತವರ ಗೆಳೆಯರು ಮಾನವೀಯತೆ ಮೆರೆದಿದ್ದರು.
"ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ನಾನು ನನ್ನ ಅಂಗಡಿಯಲ್ಲಿ ಪ್ರಾರ್ಥನೆಗಾಗಿ ಕುಳಿತಿದ್ದೆ. ಅಷ್ಟರಲ್ಲಿ ಓಡಿ ಬಂದ ನನ್ನ ಅಂಗಡಿ ಸಮೀಪದ ಬೇಕರಿಯ ಮಾಲಕ ಪ್ರವೀಣ್ ಶರತ್ ಮೇಲೆ ಹಲ್ಲೆಯಾದ ವಿಷಯ ತಿಳಿಸಿದರು. ನಾನು ತಕ್ಷಣ ಅವರೊಂದಿಗೆ ಶರತ್ ರ ಲಾಂಡ್ರಿಗೆ ತೆರಳಿದೆ. ಅಲ್ಲಿ ಶರತ್ ಬಟ್ಟೆಗಳ ನಡುವೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು," ಎಂದು ಅಂದು ರಾತ್ರಿ ನಡೆದ ಘಟನೆಗಳನ್ನು ಮೆಲುಕು ಹಾಕುತ್ತಾರೆ ಅಬ್ದುಲ್.

"ನಾನು ಹೋಗುವಷ್ಟರಲ್ಲಿ ಸುತ್ತಮುತ್ತಲಿನ ಅಂಗಡಿಗಳ ಮಾಲಕರು, ಕೆಲಸದವರು, ಸಾರ್ವಜನಿಕರು ಅಲ್ಲಿ ಸೇರಿದ್ದರು. ಆದರೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶರತ್ ರನ್ನು ಆಸ್ಪತ್ರೆಗೆ ಸಾಗಿಸಲು ಯಾರೊಬ್ಬರೂ ಮುಂದೆ ಬರುತ್ತಿರಲಿಲ್ಲ. ಹೆಚ್ಚಿನವರು ದೂರ ನಿಂತೇ ನೋಡುತ್ತಿದ್ದರು. ನಾನು ಅಂಗಡಿಯೊಳಗೆ ಹೋಗಿ ಶರತ್ ರನ್ನು ಒಬ್ಬನೇ ಎತ್ತಲು ಪ್ರಯತ್ನಿಸಿದೆ . ಆದರೆ ಸಾಧ್ಯವಾಗಲಿಲ್ಲ. ಬಳಿಕ ಪ್ರವೀಣ್ ರ ಸಹಾಯದಲ್ಲಿ ಶರತ್ ರನ್ನು ಎತ್ತಿ ಅಂಗಡಿಗೆ ಹಣ್ಣು ಹಂಪಲು ತರುವ ನನ್ನ ರಿಕ್ಷಾದಲ್ಲಿ ಹಾಕಿ ತುಂಬೆ ಆಸ್ಪತ್ರೆಗೆ ಸಾಗಿಸಿದೆವು. ನಮ್ಮೊಂದಿಗೆ ಇನ್ನಿಬ್ಬರು ಯಾರೋ ರಿಕ್ಷಾಕ್ಕೆ ಹತ್ತಿದರು. ತುಂಬೆ ಆಸ್ಪತ್ರೆಯಲ್ಲಿ ಶರತ್ ಗೆ ಚಿಕಿತ್ಸೆ ನೀಡಿದ ವೈದ್ಯರು ತಕ್ಷಣ ಮಂಗಳೂರು ಆಸ್ಪತ್ರೆಗೆ ಸಾಗಿಸಲು ಸೂಚಿಸಿದರು," ಎನ್ನುತ್ತಾರೆ ಅಬ್ದುಲ್.
ಬಹುಶಃ ತಮ್ಮ ಧರ್ಮ ಮರೆತು ಅವತ್ತು ಅಬ್ದುಲ್ ಶರತ್ ರನ್ನು ಆಸ್ಪತ್ರೆಗೆ ಸೇರಿಸದೇ ಇದ್ದಿದ್ದರೆ ಅವರ ಜೀವಕ್ಕೆ ಅಪಾಯಗಳಾಗುವ ಸಾಧ್ಯತೆ ಇತ್ತು.
ಎ.ಜೆ ಆಸ್ಪತ್ರೆಯಲ್ಲಿ ವೈದ್ಯರ ಶ್ರಮ
ತಲೆ ಭಾಗಕ್ಕೆ ಗಂಭೀರವಾಗಿ ಗಾಯಗೊಡಿರುವ ಶರತ್ ಗೆ ಎ.ಜೆ. ಆಸ್ಪತ್ರೆಯ ವೈದ್ಯ, ನ್ಯೂರೋ ಸರ್ಜನ್ ಡಾ .ಸುನಿಲ್ ಶೆಟ್ಟಿ ಮತ್ತವರ ವೈದ್ಯ ತಂಡ ಚಿಕಿತ್ಸೆ ನೀಡಿದೆ. ಸದ್ಯ ಪರಿಸ್ಥಿತಿ ಗಂಭೀರವಾಗಿದ್ದು ಕಾದು ನೋಡಬೇಕು ಎಂದು ಹೇಳಿದ್ದಾರೆ. ಜತೆಗೆ ಶೀಘ್ರ ಚೇತರಿಸಿಕೊಳ್ಳಬಹುದು ಎಂಬ ಆಶಾಭಾವನೆಯನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ.

ಗರಂ ಆಗಿರುವ ಐಜಿಪಿ
ಹೆಚ್ಚುವರಿ ಎಸ್ಪಿಗಳಾದ ವಿಷ್ಣುವರ್ಧನ್, ಗೋಪಾಲ್ ಬೈಕೋಡ್ ನೇತೃತ್ವದಲ್ಲಿ ವಿಶೇಷ ಬಂದೋಬಸ್ತ್ ನಡೆಸಿಯೂ, ಸೆಕ್ಷನ್ ಜಾರಿಗೊಂಡ ನಂತರವೂ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸಲು ವಿಫಲರಾಗಿರುವ ಬಗ್ಗೆ ಐಜಿಪಿ ಗರಂ ಆಗಿದ್ದಾರೆ.
ಒನ್ ಇಂಡಿಯಾ ಕನ್ನಡ ಜತೆಗೆ ಮಾತನಾಡಿದ ಐಜಿಪಿ ಹರಿಶೇಖರನ್, "ಶರತ್ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ. ಬಂಟ್ವಾಳ ತಾಲೂಕಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬಂಟ್ವಾಳ, ಬಿ.ಸಿ ರೋಡ್ ಆಸುಪಾಸಿನ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ. ಹೆಚ್ಚುವರಿ ಸಿಬ್ಬಂದಿಯನ್ನು ಕರೆಯಿಸಲಾಗಿದೆ," ಎಂದರು.
ಸಜಿಪ ಮುನ್ನೂರು ಗ್ರಾಮದ ಕಂದೂರು ನಿವಾಸಿಯಾಗಿರುವ ಶರತ್ ಗೆ ಬಿ.ಸಿ ರೋಡ್ ನ ಶಾಂತಾರಾಮ್ ಹೋಟೆಲ್ ಸಮೀಪದ ಉದಯ ಲಾಂಡ್ರಿಯಲ್ಲಿ ಮಂಗಳವಾರ ರಾತ್ರಿ 9.30ರ ಸುಮಾರಿಗೆ ದಾಳಿ ನಡೆದಿತ್ತು. ಮಳೆಯ ಮಧ್ಯೆ ದಾಳಿ ನಡೆಸಿದ ಮೂವರ ತಂಡ ತಕ್ಷಣವೇ ಸ್ಥಳದಿಂದ ಪರಾರಿಯಾಗಿತ್ತು. ಬೈಕಿನಲ್ಲಿ ಬಂದಿದ್ದ ಮೂವರು ಕೂಡ ಹೆಲ್ಮೆಟ್ ಧರಿಸಿದ್ದರಿಂದ ಸ್ಥಳೀಯರಿಗೆ ಗುರುತು ಹಿಡಿಯಲು ಸಾಧ್ಯವಾಗಿರಲಿಲ್ಲ.












Click it and Unblock the Notifications