ಲೋಕಸಭಾ ಚುನಾವಣೆ:ರೌಡಿಗಳ ಪರೇಡ್ ನಡೆಸಿದ ಮಂಗಳೂರು ಪೊಲೀಸರು
ಮಂಗಳೂರು, ಮಾರ್ಚ್ 14:ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಸುಸೂತ್ರವಾಗಿ ಚನಾವಣೆ ನಡೆಸಲು ಜಿಲ್ಲಾಡಳಿತಗಳು ಸಜ್ಜಾಗಿವೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ರೌಡಿ ಚಟುವಟಿಕೆ ನಿಯಂತ್ರಣದಲ್ಲಿಡಲು ಪೊಲೀಸ್ ಇಲಾಖೆ ಮುಂದಾಗಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪೊಲೀಸ್ ಇಲಾಖೆ ಇಂದು ಗುರುವಾರ ರೌಡಿಗಳ ಪರೇಡ್ ನಡೆಸಿತು. ಮಂಗಳೂರು ಪೊಲೀಸ್ ಕಮೀಷನೇಟರ್ ವ್ಯಾಪ್ತಿಯ ರೌಡಿಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಶಸ್ತ್ರಾಸ್ತ್ರ ವಶಪಡಿಸಿಕೊಂಡಿದ್ದಾರೆ.
ನಟೋರಿಯಸ್ ಟಾರ್ಗೆಟ್ ಗ್ಯಾಂಗ್ ನ ಮುಖಂಡ ಶುಮ್ರಾ ಇರ್ಮಾನ್ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಲಾಂಗು, ಮಚ್ಚು, ತಲ್ವಾರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಸುರತ್ಕಲ್ ನಲ್ಲಿ ಅಪರಾಧಕ್ಕೆ ಬಳಸಿದ ಸ್ಕಾರ್ಪಿಯೋ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಳಿಕ ಪೊಲೀಸ್ ಗ್ರೌಂಡ್ ನಲ್ಲಿ ರೌಡಿಗಳ ಪರೇಡ್ ನಡೆಸಿದ್ದಾರೆ. ವಿವಿಧ ಠಾಣಾ ವ್ಯಾಪ್ತಿಯ 200 ಕ್ಕೂ ಅಧಿಕ ರೌಡಿಗಳ ಪರೇಡ್ ನಡೆಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ರೌಡಿಗಳ ಹಳೆ ಫೈಲ್ ಓಪನ್ ಆಗಿದ್ದು, ಚುನಾವಣಾ ಸಂಧರ್ಭದಲ್ಲಿ ದುಷ್ಕೃತ್ಯ ಮೆರೆದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ರೌಡಿಗಳಿಂದ ಮುಚ್ಚಳಿಕೆ ಬರೆಸಿಕೊಂಡಿದ್ದು, ಚುನಾವಣಾ ಅಂತ್ಯದವರೆಗೆ ಪೊಲೀಸರು ರೌಡಿಗಳ ಮೇಲೆ ಕಣ್ಣಿರಿಸಲಿದ್ದಾರೆ.











Click it and Unblock the Notifications