ಮಂಗಳೂರಿನಲ್ಲಿ ಅನ್ನಭಾಗ್ಯ ಅಕ್ಕಿಗೆ ಕನ್ನ: ಅಕ್ರಮ ಸಾಗಾಟ ಬಯಲು
ಮಂಗಳೂರು, ಸೆಪ್ಟೆಂಬರ್.7:ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಯಡಿ ಬರುವ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು 5 ಕ್ವಿಂಟಾಲ್ ಗೂ ಹೆಚ್ಚು ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ವಶ ಪಡಿಸಿಕೊಂಡಿರುವ ಅಕ್ಕಿ ಸರಕಾರ ಬಡವರಿಗೆಂದು ಉಚಿತವಾಗಿ ನೀಡುವ ಅನ್ನಭಾಗ್ಯ ಯೋಜನೆಯದ್ದಾಗಿದೆ.
ಮಂಗಳೂರಿನ ಶಕ್ತಿನಗರದಲ್ಲಿರುವ ಸರ್ಕಾರಿ ರೈಸ್ ಮಿಲ್ ನಿಂದ ಅಕ್ಕಿಯನ್ನು ಲಾರಿ ಮೂಲಕ ಸಾಗಾಟ ಮಾಡಿ ಮಂಗಳೂರು ಹೊರವಲಯದ ಬೊಂದೇಲ್ ನಲ್ಲಿರುವ ಖಾಸಗಿ ರೈಸ್ಮಿಲ್ಗೆ ತಂದು ಗೋಣಿ ಬದಲಾಯಿಸಿ ಮಾರಾಟ ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಪೊಲೀಸರ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಪಾಂಡೇಶ್ವರ ಆರ್ಡ್ ನ ಕಾರ್ಪೊರೇಟರ್ ದಿವಾಕರ್, ಆರ್ ಟಿ ಐ ಕಾರ್ಯಕರ್ತ ಹನುಮಂತ್ ಕಾಮತ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಳಿ ಸಂದರ್ಭದಲ್ಲಿ ಅಕ್ರಮ ನಡೆಯುತ್ತಿರುವುದು ರೆಡ್ ಹ್ಯಾಂಡ್ ಆಗಿ ಪತ್ತೆಯಾಗಿದೆ.
ಲಾರಿ ಕೆಎ -19- ಎಎ- 5508 ಇದರಲ್ಲಿ ಅಕ್ಕಿಯನ್ನು ಖಾಸಗಿ ಮಳಿಗೆಯಲ್ಲಿ ಮಾರಾಟ ಮಾಡಲು ತಯಾರಿ ನಡೆಸಲಾಗಿತ್ತು. ಕಾವೂರು ಠಾಣೆಯ ಪೊಲೀಸರು ಲಾರಿ ಚಾಲಕ ಪೊಲೀಸ್ ವಶಕ್ಕೆ ಪಡೆದಿದ್ದಾರೆ.

ಈ ಹಿಂದೆ ಕೂಡ ರಾಜ್ಯದಾದ್ಯಂತ ಅಕ್ಕಿ ಹಗರಣ ಭಾರೀ ಸದ್ದು ಮಾಡಿತ್ತು. ಬಡವರಿಗಾಗಿ ಬರುವ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಡಿದ ಹಲವಾರು ಪ್ರಕರಣಗಳು ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದ್ದವು.












Click it and Unblock the Notifications