ದೀಪಕ್ ರಾವ್ ಕೊಲೆ ಪ್ರಕರಣ: ರಮಾನಾಥ ರೈ-ಶೋಭಾ ಕರಂದ್ಲಾಜೆ ಜಟಾಪಟಿ
Recommended Video

ದಕ್ಷಿಣ ಕನ್ನಡ, ಜನವರಿ 04: ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮೃತ ದಿಪಕ್ ರಾವ್ ಅವರ ಶವಯಾತ್ರೆಗೆ ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.
ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು ಈ ಮುಂಚೆಯೂ ಮೆರವಣಿಗೆಗಳು ನಡೆದ ಸಂದರ್ಭದಲ್ಲಿ ಘರ್ಷಣೆಗಳಾಗಿರುವ ಉದಾಹರಣೆಗಳು ಜಿಲ್ಲೆಯಲ್ಲಿ ಇವೆ ಹಾಗಾಗಿ ಪೊಲೀಸರು ಶವ ಯಾತ್ರೆಗೆ ಅನುಮತಿ ನಿರಾಕರಿಸುತ್ತಿದ್ದಾರೆ ಎಂದರು.
ಮಾಧ್ಯಮದ ಪೋನ್ ಇನ್ ನಲ್ಲಿ ಎದುರುಬದುರಾದ ಸಚಿವ ರಮಾನಾಥ ರೈ ಹಾಗೂ ಶೋಭಾ ಕರಂದ್ಲಾಜೆ ಮಧ್ಯೆ ಕಾವೇರಿದ ಆರೋಪ ಪ್ರತ್ಯಾರೋಪ ನಡೆಯಿತು, ತೀರ್ವ ಜಟಾಪಟಿ ನಡೆಸಿದ ಇಬ್ಬರು ಮುಖಂಡರು ಪರಸ್ಪರ ಪಕ್ಷಗಳನ್ನು ಮೂದಲಿಸಿಕೊಂಡರು.
ಇಬ್ಬರು ಮುಖಂಡರ ಮಾತುಕತೆಯ ಮುಖ್ಯಾಂಶಗಳು ತಿಳಿಯಲು ಮುಂದೆ ಓದಿ...

ಯಡಿಯೂರಪ್ಪ ಇದ್ದಾಗಲೂ ಆ ಸಂಘಟನೆಗಳು ಇದ್ದವು
ಜಿಹಾದಿ ಮನಸ್ಥಿತಿಯ ಸಂಘಟನೆಗಳಾದ ಎಸ್ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಿ ಎಂಬ ಶೋಭಾ ಕರಂದ್ಲಾಜೆ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸಚಿವ ರಮಾನಾಥ ರೈ ಅವರು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ಪಿಎಫ್ಐ, ಎಸ್ಡಿಪಿಐ ಸಂಘಟನೆಗಳು ಅಸ್ತಿತ್ವದಲ್ಲಿತ್ತು, ಆಗ ಏಕೆ ಅವರು ನಿಷೇಧಿಸಲಿಲ್ಲ, ಆ ಸಂಘಟನೆಗಳು ಕರ್ನಾಟದಲ್ಲಿ ಮಾತ್ರವಲ್ಲ ದೇಶದ ಎಲ್ಲೆಡೆ ಇವೆ ಮೋದಿ ಅವರೇ ಸಂಘಟನೆಗಳ ಮೇಲೆ ನಿಷೇಧ ಹೇರಲಿ ಎಂದರು.

ಎರಡೂ ಉಗ್ರ ಸಂಘಟನೆಗಳನ್ನು ನಿಷೇಧಿಸಲಿ
ಬಲಪಂಥೀಯ ಸಂಘಟನೆಗಳಿಂದಲೂ ಹತ್ಯೆಗಳು ನಡೆದಿವೆ ಎಂದ ರಮಾನಾಥ ರೈ ಅವರು, ಭಜರಂಗದಳವನ್ನೂ ನಿಷೇಧಿಸಬೇಕಿದೆ ಎಂದರು. ಇದಕ್ಕೆ ಕೆರಳಿದ ಶೋಭಾ ಕರಂದ್ಲಾಜೆ ಅವರು ನಿಮಗೆ ತಾಕತ್ತಿದ್ದರೆ ಭಜರಂಗದಳ ಸಂಘಟನೆಯನ್ನು ನಿಷೇಧಿಸಿ ಎಂದು ಸವಾಲು ಹಾಕಿದರು.

ಪಿಎಫ್ಐ ನನ್ನ ವಿರುದ್ಧ ಚುನಾವಣೆಗೆ ನಿಂತಿತ್ತು
ನೀವು ಪಿಎಫ್ಐ ಸಂಘಟನೆಗೆ ಬೆಂಬಲ ಕೊಡುತ್ತಿದ್ದೀರಿ ಎಂದು ಶೋಭಾ ಕರಂದ್ಲಾಜೆ ಅವರು ರಮಾನಾಥ ರೈ ವಿರುದ್ಧ ಆರೋಪ ಮಾಡಿದರು, ಇದಕ್ಕೆ ಉತ್ತರಿಸಿದ ಸಚಿವರು ಪಿಎಫ್ಐ ನನ್ನ ವಿರುದ್ಧ ಮೂರು ಬಾರಿ ಚುನಾವಣೆಗೆ ನಿಂತಿದೆ, ಆ ಸಂಘಟನೆಗೆ ನಾನು ಬೆಂಬಲ ಕೊಡುತ್ತಿಲ್ಲ, ನಿಮ್ಮ ಪಕ್ಷದವರು ಪಿಎಫ್ಐ ಗೆ ಹಣ ನೀಡಿ ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದ್ದೀರಿ ನನ್ನ ಬಳಿ ಸಾಕ್ಷಿ ಇದೆ ಎಂದು ಅಬ್ಬರಿಸಿದರು.

ತಾಕತ್ತಿದ್ದರೆ ಸಾಬೀತು ಪಡಿಸಿ
ನೀವು ಜಿಲ್ಲೆಯ ಎಸ್ಪಿ ಅವರ ಜೊತೆ ಸೇರಿಕೊಂಡು ರೌಡಿ ಶೀಟರ್ ಅನ್ನು ಜೊತೆಗೆ ಕೂರಿಸಿಕೊಂಡು ಸಭೆ ಮಾಡಿದ್ದೀರಿ ಎಂದು ಶೋಭಾ ಕರಂದ್ಲಾಜೆ ಏರಿದ ಧ್ವನಿಯಲ್ಲಿ ಅಬ್ಬರಿಸಿದರು. ಇದಕ್ಕೆ ಕೆರಳಿದ ರಮಾನಾಥ ರೈ ಅವರು, ನಿಮಗೆ ತಾಕತ್ತಿದ್ದರೆ ಅದನ್ನು ಸಾಬೀತು ಮಾಡಿ ಎಂದು ರಮಾನಾಥ ರೈ ಸವಾಲೆಸೆದರು. ಇದರಿಂದ ಬೇಸರಗೊಂಡ ಶೋಭಾ ಅವರು ನಿಮ್ಮ ಮಟ್ಟಕ್ಕೆ ನಾನು ಮಾತನಾಡಲು ಸಾಧ್ಯವಿಲ್ಲ ನಾನು ಕರೆ ಅಂತ್ಯಗೊಳಿಸುತ್ತೇನೆ ಎಂದು ಹೇಳಿ ಕಾಲ್ ಕಟ್ ಮಾಡಿದರು.











Click it and Unblock the Notifications